ಸಿಂಘು ಗಡಿ ಹತ್ಯೆ: ಇನ್ನಿಬ್ಬರು ನಿಹಾಂಗ್ಗಳು ಪೊಲೀಸರಿಗೆ ಶರಣು
ನವದೆಹಲಿ,ಅಕ್ಟೋಬರ್ 17: ಸಿಂಘು ಗಡಿ ಹತ್ಯೆ ಪ್ರಕರಣದಲ್ಲಿ ನಿಹಾಂಗ್ ಸಮುದಾಯದ ಇನ್ನಿಬ್ಬರು ಹರಿಯಾಣ ಪೊಲೀಸರಿಗೆ ಶರಣಾಗಿದ್ದಾರೆ. ಪೊಲೀಸರು ಶರಣಾದ ಭಗವಂತ ಸಿಂಗ್ ಮತ್ತು ಗೋವಿಂದ್ ಸಿಂಗ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಸಿಂಘು ಗಡಿಯಲ್ಲಿ ಲಖಬೀರ್ ಸಿಂಗ್ ಹತ್ಯೆಗೆ ಸಂಬಂಧಿಸಿದಂತೆ ನಿಹಾಂಗ್ ಸಮುದಾಯದ ಸರವಜೀತ್ ಸಿಂಗ್ ಕೊಲೆಯ ಹೊಣೆ ಹೊತ್ತು ಪೊಲೀಸರಿಗೆ ಶರಣಾದ ಮೊದಲನೇ ಆರೋಪಿಯಾಗಿದ್ದಾರೆ. ಇವರನ್ನು ಶನಿವಾರ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ವಿಚಾರಣೆ ವೇಳೆ ಮೊದಲ ಆರೋಪಿ ಸರವಜೀತ್ ಸಿಂಗ್ ನಾಲ್ಕು ಜನರನ್ನು ಹೆಸರಿಸಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು ಬೀಸಿದ್ದ ಬಲೆಗೆ ಶನಿವಾರ ನಾರಾಯಣ್ ಸಿಂಗ್ ಬಿದ್ದಿದ್ದನು. ಈತ ಲಖಬೀರ್ ಕೊಲೆಯಾದ ಬಳಿಕ ಪಂಜಾಬ್ ನ ತನ್ನ ಗ್ರಾಮಕ್ಕೆ ಹಿಂದಿರುಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಪಂಜಾಬ್ ನ ಅಮರ್ಕೋಟ್ ಗ್ರಾಮದವರು ಎಂದು ಗೊತ್ತಾಗಿದೆ.
ನೀಲಿ ನಿಲುವಂಗಿ, ಕೈ ಹಾಗೂ ಸೊಂಟದಲ್ಲಿ ಹರಿತವಾದ ಅಸ್ತ್ರ ಈ ನಿಹಾಂಗ್ಗಳು ಯಾರು?
ಶುಕ್ರವಾರ ನಿಹಾಂಗ್ ಸಿಖ್ಗಳ ಒಂದು ಗುಂಪು ಲಖಬರ್ ಸಿಂಗ್ (35) ಎಂಬ ದಲಿತ ವ್ಯಕ್ತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿತ್ತು.
ಏನಿದು ಸಿಂಘು ಗಡಿ ಕೊಲೆ ಪ್ರಕರಣ?
ಶುಕ್ರವಾರ ಮುಂಜಾನೆ 5 ಗಂಟೆ ಸುಮಾರಿಗೆ ರೈತರ ಪ್ರತಿಭಟನಾ ಸ್ಥಳವಾದ ದೆಹಲಿಯ ಸಿಂಘು ಗಡಿಯಲ್ಲಿ ಸ್ಥಳದ ಬಳಿ ಲಖಬೀರ್ ಗಿಂಗ್ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಮೃತ ವ್ಯಕ್ತಿಯ ದೇಹ ಲೋಹದ ತಡೆಗೋಡೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಚೂಪಾದ ಆಯುಧಗಳಿಂದ ಹಲ್ಲೆ ಮಾಡಿ ಗುರುತುಗಳು ದೇಹದ ಮೇಲೆ ಪತ್ತೆಯಾಗಿದ್ದವು. ಜೊತೆಗೆ ವ್ಯಕ್ತಿಯ ಕೈಗಳನ್ನು ಕತ್ತರಿಸಲಾಗಿತ್ತು. ಘಟನೆ ಮುಂಜಾನೆ 3 ಗಂಟೆಗೆ ಸಂಭವಿಸಿದೆ ಎಂದು ತಿಳಿದು ಬಂದಿತ್ತು. ಈ ಭೀಕರ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹೊರಹೊಮ್ಮಿದೆ. ಮೃತರನ್ನು 35 ವರ್ಷದ ಲಖಬೀರ್ ಸಿಂಗ್ ದಲಿತ ವ್ಯಕ್ತಿಯಾಗಿದ್ದು ಈತನಿಗೆ ಯಾವುದೇ ಅಪರಾಧ ಇತಿಹಾಸ ಅಥವಾ ರಾಜಕೀಯ ಸಂಬಂಧವಿಲ್ಲ ಎಂದು ಪೊಲೀಸ್ ಮೂಲಗಳು ಗುರುತಿಸಿವೆ.
ಕೊಲೆಯಾದ ಲಖಬೀರ್ ಮೇಲೆ ಸರ್ಬಲೋಹ್ ಗ್ರಂಥವನ್ನು ಅಪವಿತ್ರಗೊಳಿಸಿದ ಆರೊಪ ಕೇಳಿ ಬಂದಿದೆ. ಲಖಬೀರ್ ಅವರು 'ಸರ್ಬಲೋಹ್ ಗ್ರಂಥ'ದಲ್ಲಿ ತ್ಯಾಗ ಮಾಡಲು ಉತ್ನಿಸಿರುವ ಬಗ್ಗೆ ಹೇಳಿದ್ದರಿಂದ ಅವರನ್ನು ಕೊಂದಿದ್ದಾರೆ ಎಂದು ನಿಹಾಂಗ್ಗಳು ಹೇಳಿದ್ದಾರೆ.
ಲಖಬೀರ್ ಸಿಂಗ್ ಯಾರು?
ಲಖ್ಬೀರ್ ಒಬ್ಬ ಮದ್ಯವ್ಯಸನಿಯಾಗಿದ್ದು, ಈತನಿಗೆ ತಂದೆ-ತಾಯಿ ಇಬ್ಬರು ಇಲ್ಲ. ತಮ್ಮ ಸಹೋದರಿ ಚಿಕ್ಕಮ್ಮ-ಚಿಕ್ಕಪ್ಪನೊಂದಿಗೆ ವಾಸವಾಗಿದ್ದನು. ಆತನಿಗೆ ಕೆಲ ಆಮಿಷವೊಡ್ಡಿ ಪ್ರತಿಭಟನಾ ಸ್ಥಳಕ್ಕೆ ಕರೆತರಲಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 50 ರೂಪಾಯಿಯೊಂದಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆ ತೊರೆಯುವಾಗ ವಾರದಲ್ಲಿ ವಾಪಸ್ಸಾಗುವುದಾಗಿ ಕುಟುಂಬಸ್ಥರಿಗೆ ಹೇಳಿಕೊಂಡಿದ್ದನು. ಆತ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸುವಂತ ವ್ಯಕ್ತಿಯಲ್ಲ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆಗೆ ಆಗ್ರಹಿಸಿದ್ದಾರೆ.
ಪೊಲೀಸ್ ತನಿಖೆ ಚುರುಕು
ಕುಟುಂಬಸ್ಥರ ಹೇಳಿಕೆಯನ್ನು ಆಧರಿಸಿ ಸಿಂಘು ಗಡಿ ಹತ್ಯೆಯ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಲಖಬೀರ್ ನನ್ನು ದೆಹಲಿ ಪ್ರತಿಭಟನೆಗೆ ಕರೆತಂದವರು ಯಾರು? ಆತನಿಗೆ ಆಮಿಷವೊಡ್ಡಿದವರು ಯಾರು? ಎನ್ನುವ ಬಗ್ಗೆ ತನಿಖೆ ನಡೆಸಿದ್ದಾರೆ. ಇತ್ತ ಲಖಬೀರ್ ಸಿಂಗ್ ಪವಿತ್ರ ಸರ್ಬಲೋಹ್ ಗ್ರಂಥವನ್ನು ಅಪವಿತ್ರಗೊಳಿಸಿದ್ದಾನೆ ಎಂದು ಹೇಳಲಾಗಿರುವುದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇನ್ನೂ ಸಂಯುಕ್ತ ಮೋರ್ಚಾ ಸಿಂಘು ಗಡಿ ಹತ್ಯೆಯನ್ನು ಖಂಡಿಸಿದ್ದು, ನಿಹಾಂಗ್ ಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲಿ ಎಂದಿದ್ದಾರೆ. ಪ್ರಕರಣದಲ್ಲಿ ಸದ್ಯ ಪೊಲೀಸ್ ತನಿಖೆ ನಡೆಯುತ್ತಿದೆ.