ಮಂಪರು ಪರೀಕ್ಷೆಯಲ್ಲಿ ಬಯಲಾಯ್ತು ಸಂಜೋತಾ ದುರಂತದ ರಹಸ್ಯ
ನವದೆಹಲಿ, ಜುಲೈ 25: 2007 ರ ಫೆಬ್ರವರಿ 19 ರಂದು ನಡೆದ ಸಂಜೋತಾ ಎಕ್ಸ್ ಪ್ರೆಸ್ ದುರಂತದ ರೂವಾರಿ ಯಾರು ಎಂಬ ಕುರಿತು ಸಿಮಿ(ಸ್ಟೂಡೆಂಟ್ ಇಸ್ಲಾಮಿಕ್ ಮೂವ್ ಮೆಂಟ್) ಸಂಘಟನೆಯ ಮಾಜಿ ಉಗ್ರ ಸಫ್ದಾರ್ ನಾಗೋರಿ ಮಹತ್ವದ ರಹಸ್ಯವೊಂದನ್ನು ಬಯಲುಮಾಡಿದ್ದಾನೆ.
68 ಜನರನ್ನು ಬಲಿ ತೆಗೆದುಕೊಂಡಿದ್ದ ಸಂಜೋತಾ ಎಕ್ಸ್ ಪ್ರೆಸ್ ದುರಂತಕ್ಕೆ ಕಾರಣ ಸಿಮಿ ಭಯೋತ್ಪಾದಕ ಅಬ್ದುಲ್ ರಜಾಕ್ ಎಂಬ ಸತ್ಯವನ್ನು ಸಫ್ದಾರ್ ಒಪ್ಪಿಕೊಂಡಿದ್ದಾನೆ. ಇಂಗ್ಲಿಷ್ ವಾಹಿನಿಯೊಂದು ಸಫ್ದಾರ್ ಮಂಪರು ಪರೀಕ್ಷೆಯ ವಿಡಿಯೋವನ್ನು ಪ್ರಸಾರ ಮಾಡಿತ್ತು. ಈ ವಿಡಿಯೋದಲ್ಲಿ ದುರಂತದ ಎಲ್ಲಾ ಹೊಣೆಯೂ ಅಬ್ದುಲ್ ರಜಾಕ್ ದಾಗಿತ್ತು ಎಂಬ ಆಘಾತಕಾರಿ ಸತ್ಯವನ್ನು ಸಫ್ದಾರ್ ಒಪ್ಪಿಕೊಂಡಿದ್ದಾನೆ.
ಸಂಜ್ಯೋತ ರೈಲು ಸ್ಫೋಟ: ಅಸೀಮಾನಂದಗೆ ಜಾಮೀನು
2007 ಫೆಬ್ರವರಿ 19 ರಂದು ನವದೆಹಲಿ-ಸಂಜೋತಾ ಎಕ್ಸ್ಪ್ರೆಸ್ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 68 ಜನ ಮೃತರಾಗಿದ್ದರು. ಮೃತರಲ್ಲಿ ಹೆಚ್ಚಿನವರು ಪಾಕಿಸ್ತಾನಿ ಪ್ರಜೆಗಳೇ ಆಗಿದ್ದರು. ಈ ಕಾರಣಕ್ಕಾಗಿಯೇ ಈ ಘಟನೆಯನ್ನು ಹಿಂದು ಭಯೋತ್ಪಾದನೆ ಎಂದು ಬಿಂಬಿಸಲಾಗಿತ್ತು. ಸ್ಫೋಟದ ತನಿಖೆಯ ಹೊಣೆ ಹೊತ್ತಿದ್ದ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಸ್ವಾಮಿ ಅಸೀಮಾನಂದ ಎಂಬುವವರನ್ನು ವಿಚಾರಣೆಗೊಳಪಡಿಸಿತ್ತು. ಈ ಸಂದರ್ಭದಲ್ಲಿ ರಾಷ್ಟ್ರೀಯ ತನಿಖಾ ದಳದ ತನಿಖೆ ಪೂರ್ವಗ್ರಹ ಮುಕ್ತವಾಗಿಲ್ಲ ಎಂಬ ಬಗ್ಗೆಯೂ ತಕರಾರು ಎದ್ದಿತ್ತು.
ಸತ್ಯ ಮುಚ್ಚಿಟ್ಟಿತ್ತಾ ಕಾಂಗ್ರೆಸ್?
ಸಂಜೋತಾ ಎಕ್ಸ್ ಪ್ರೆಸ್ ದುರಂತವನ್ನು ಹಿಂದು ಭಯೋತ್ಪಾದನೆ ಎಂಬಂತೆ ಬಿಂಬಿಸಿದ್ದ ಕಾಂಗ್ರೆಸ್ ಸರ್ಕಾರ, ಇದು ಸಿಮಿ ಕೃತ್ಯ ಎಂದು ಗೊತ್ತಿದ್ದರೂ ಸುಮ್ಮನಿತ್ತಾ ಎಂಬ ಅನುಮಾನ ಇದೀಗ ಹುಟ್ಟಿಕೊಂಡಿದೆ. ಎನ್ ಐಎ ನಡೆಸಿದ ತನಿಖೆಯೂ ಸ್ವತಂತ್ರವಾದುದಾಗಿರಲಿಲ್ಲ ಎಂಬ ಬಗ್ಗೆಯೂ ದೂರುಗಳಿವೆ. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಬೇಕಾದ ರೀತಿಯಲ್ಲಿ ತನಿಖೆ ನಡೆದಿತ್ತಾ ಎಂಬ ಬಗ್ಗೆಯೂ ಅನುಮಾನಗಳೆದ್ದಿವೆ.
ಸಂಜೋತಾ ಸ್ಫೋಟಕ್ಕೆ ಸೂಚನೆ ನೀಡಿದ್ದು ಯಾರು?
ಸಫ್ದಾರ್ ಮಂಪರು ಪರೀಕ್ಷೆ ಸಮಯದಲ್ಲಿ ಆತನಿಗೆ ಕೇಳಿದ ಮೊದಲ ಪ್ರಶ್ನೆಯೇ, 'ಸಂಜೋತಾ ಸ್ಫೋಟಕ್ಕೆ ಸೂಚನೆ ನೀಡಿದ್ದು ಯಾರು?' ಎಂಬುದು. ಅದಕ್ಕೆ ಉತ್ತರ ನೀಡಿದ ಸಫ್ದಾರ್ 'ಇದಕ್ಕೆಲ್ಲ ಕಾರಣ ಅಬ್ದುಲ್ ರಜಾಕ್ ಎಂದು ಸ್ಪಷ್ಟ ಉತ್ತರ ನೀಡಿದ್ದಾನೆ. ಹಾಗೆಯೇ ಅಬ್ದುಲ್ ರಜಾಕ್ ಕುರಿತು ಮತ್ತಷ್ಟು ಮಾಹಿತಿಯನ್ನು ನೀಡಿದ್ದಾನೆ.
ರಜಾಕ್ ಇಂದೋರಿನವರು
"ಅಬ್ದುಲ್ ರಜಾಕ್ ಇಂದೋರಿನವನು. ಅವನು ನನಗೆ ಸದಾ ಹೇಳುತ್ತಿದ್ದ, ನೀನೀಗ ರಾಜಕಾರಣಿ, ನೀನು ಜಿಹಾದಿ ಚಟುವಟಿಕೆಯಲ್ಲಿ ಭಾಗಿಯಾದರೆ ಸಮಸ್ಯೆಯಾಗುತ್ತದೆ. ನೀನು ಹಾಯಾಗಿ ತಿಂದುಂಡುಕೊಂಡಿರು. ನಾನು ಉಳಿದಿದ್ದನ್ನೆಲ್ಲ ನೋಡಿಕೊಳ್ಳುತ್ತೇನೆ" ಎನ್ನುತ್ತಿದ್ದ.
ಪಾಕಿಸ್ತಾನದಲ್ಲಿ ಸಂಬಂಧಿಕರು
ರಜಾಕ್ ಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಫ್ದಾರ್, "ಹೌದು, ಆತನಿಗೆ ಪಾಕಿಸ್ತಾನದಲ್ಲಿ ಹಲವು ಸಂಬಂಧಿಗಳಿದ್ದಾರೆ. ಅವನು ಸಿಮಿ ಸಂಘಟನೆಯೊಂದಿಗಿದ್ದ. ಮಿಸ್ಬಾಹ್ ಉಲ್ ಇಸ್ಲಾಂ ಎಂಬುವವರೊಂದಿಗೆ ಆತನಿಗೆ ಸಂಪರ್ಕವಿತ್ತು. ರಜಾಕ್ ಇಂದೋರ್ ನ ಸಿಮಿ ಸಂಘಟನೆಯ ಮುಖ್ಯಸ್ಥನಾಗಿದ್ದ" ಎಂದು ಬಾಯ್ಬಿಟ್ಟಿದಾನೆ.