ಹೈಕಮಾಂಡ್ ಸಭೆ ಬಳಿಕ ಸಿಧು ಕೋಪ ಶಮನ, ಮತ್ತೆ ಕಚೇರಿಯತ್ತ ಹೆಜ್ಜೆ
ನವದೆಹಲಿ, ಅಕ್ಟೋಬರ್ 14: ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗಿನ ಸಭೆ ಬಳಿಕ ನವಜೋತ್ ಸಿಂಗ್ ಸಿಧು ಅವರ ಸಮಸ್ಯೆ ಬಗೆಹರಿದಂತೆ ಕಾಣಿಸುತ್ತಿದೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಸಿಧು ಅವರ ಮನವೊಲಿಸುವ ಕಾಂಗ್ರೆಸ್ ಪ್ರಯತ್ನ ಯಶಸ್ವಿಯಾದಂತೆ ಕಾಣಿಸುತ್ತಿದೆ.
ಗುರುವಾರ (ಅಕ್ಟೋಬರ್ 14, 2021) ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆಯಲ್ಲಿ ಭಾಗಿಯಾದ ನವಜೋತ್ ಸಿಂಗ್ ಸಿಧು ಅವರ ಕೋಪ ತಣ್ಣಗಾದಂತೆ ಕಾಣುತ್ತಿದೆ. ಯಾಕೆಂದರೆ ಸಭೆ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರು ನವಜೋತ್ ಸಿಧು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ ಮತ್ತು ಸಾಂಸ್ಥಿಕ ರಚನೆಯನ್ನು ಸ್ಥಾಪಿಸುತ್ತಾರೆ ಎಂದು ಹೇಳಿದರು. ಈ ಕುರಿತು ಶುಕ್ರವಾರ ಘೋಷಣೆ ಮಾಡಲಾಗುವುದು ಎಂದು ಹರೀಶ್ ರಾವತ್ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷರ ನಿರ್ಧಾರ ಸ್ವೀಕಾರಾರ್ಹ
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಇಂದು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿದರು. ಸಭೆಯಲ್ಲಿ ಕೆಸಿ ವೇಣುಗೋಪಾಲ್ ಮತ್ತು ಹರೀಶ್ ರಾವತ್ ಭಾಗಿಯಾಗಿದ್ದರು. ಈ ವೇಳೆ ಸಿಧು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೈಕಮಾಂಡ್ ಜೊತೆ ಹಂಚಿಕೊಂಡಿದ್ದಾರೆ. ಈ ಸಭೆಯು ಸುಮಾರು ಒಂದು ಗಂಟೆಯ ಕಾಲ ನಡೆಯಿತು. ಸಭೆ ಬಳಿಕ ಮಾತನಾಡಿದ ಸಿಧು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ ಮತ್ತು ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರವು ಸ್ವೀಕಾರಾರ್ಹ ಎಂದು ಹೇಳಿದ್ದಾರೆ. ಜೊತೆಗೆ ಸೋನಿಯಾ ಗಾಂಧಿಯವರು ತೆಗೆದುಕೊಳ್ಳುವ ಯಾವುದೇ ನಿರ್ಧಾರ ಪಕ್ಷ ಮತ್ತು ಪಂಜಾಬ್ನ ಹಿತಾಸಕ್ತಿಯನ್ನು ಹೊಂದಿರುತ್ತದೆ ಎಂದು ಸಿದ್ದು ಹೇಳಿದರು.
"ನಾನು ಈಗಾಗಲೇ ಪಕ್ಷದ ಹೈಕಮಾಂಡ್ಗೆ ನನ್ನ ಕಳವಳವನ್ನು ವ್ಯಕ್ತಪಡಿಸಿದ್ದೇನೆ ಮತ್ತು ಕಾಂಗ್ರೆಸ್ ಅಧ್ಯಕ್ಷರು ತೆಗೆದುಕೊಳ್ಳುವ ಯಾವುದೇ ನಿರ್ಧಾರವು ಪಕ್ಷ ಮತ್ತು ಪಂಜಾಬ್ನ ಹಿತಾಸಕ್ತಿಗೆ ಸೂಕ್ತ ಎಂದು ನನಗೆ ಖಾತ್ರಿಯಿದೆ. ನನಗೆ ಸೋನಿಯಾ ಗಾಂಧಿ ನಾಯಕತ್ವದ ಮೇಲೆ ಸಂಪೂರ್ಣ ನಂಬಿಕೆ ಇದೆ" ಎಂದು ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
''ನವಜೋತ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಲು ಮತ್ತು ಸಂಘಟನೆಯ ರಚನೆಯನ್ನು ಸ್ಥಾಪಿಸಲು ಮತ್ತು ಅದನ್ನು ಬಲಪಡಿಸಲು ಕೇಳಲಾಗಿದೆ" ಎಂದು ಸಭೆಯ ನಂತರ ರಾವತ್ ಹೇಳಿದ್ದಾರೆ.
ಸಿಧು ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಆದರೆ ಅವರ ರಾಜೀನಾಮೆಯನ್ನು ಅಂಗೀಕರಿಸುವ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ. ಬದಲಿಗೆ ಕಾಂಗ್ರೆಸ್ ಹೈಕಮಾಂಡ್ ಅವರ ಮನವೊಲಿಸಲು ಪ್ರಯತ್ನಿಸಿ ಇಂದು ಯಶಸ್ವಿಯಾದಂತೆ ತೋರುತ್ತಿದೆ. ಹೀಗಾಗಿ ಸಿಧು ರಾಜೀನಾಮೆ ಕುರಿತು ಶುಕ್ರವಾರದೊಳಗೆ ಅಂತಿಮ ನಿರ್ಧಾರ ಬರಲಿದೆ ಎಂದು ಮೂಲಗಳು ತಿಳಿಸಿವೆ.