ಆಸ್ಪತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಭೇಟಿಯಾದ ಸಿದ್ದರಾಮಯ್ಯ
ನವದೆಹಲಿ, ಸೆಪ್ಟೆಂಬರ್ 12: ಇಡಿ ವಶದಲ್ಲಿದ್ದು ಸಂಜೆ ವೇಳೆಗೆ ಆರೋಗ್ಯದಲ್ಲಿ ವ್ಯತ್ಯಯವಾಗಿ ಆಸ್ಪತ್ರೆ ಸೇರಿರುವ ಡಿ.ಕೆ.ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಅವರು ಆಸ್ಪತ್ರೆಯಲ್ಲಿಯೇ ಭೇಟಿಯಾದರು.
ರಾಷ್ಟ್ರ ಮಟ್ಟದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನವೇ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಆಗಲು ಯತ್ನಿಸಿದರು ಆದರೆ ಅವಕಾಶ ನಿರಾಕರಿಸಲಾಗಿತ್ತು. ಆದರೆ ರಾತ್ರಿ ವೇಳೆಗೆ ರಾಮ್ಮನೋಹರ್ ಲೋಹಿಯಾ ಆಸ್ಪತ್ರೆಗೆ ತೆರಳಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.
ರಾಜ್ಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹೆಸರು ಅಂತಿಮ: ಅಧಿಕೃತ ಘೋಷಣೆಯೊಂದೇ ಬಾಕಿ
ಆಸ್ಪತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಇಡಿ ಅಧಿಕಾರಿಗಳು ಅನುಮತಿ ನೀಡಿದರು. ಒಬ್ಬರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಭೇಟಿ ವೇಳೆ ಮೊಬೈಲ್ ಫೋನ್ ಒಯ್ಯದಂತೆ ಷರತ್ತು ಹಾಕಲಾಗಿತ್ತು.
ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು ಆಪ್ತರು ಭೇಟಿ ಆಗಲು ನ್ಯಾಯಾಲಯ ಅನುಮತಿ ನೀಡಿದೆ. ಪ್ರತಿದಿನವೂ ಆಪ್ತೇಷ್ಟರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಸಹ ಇಂದು ಭೇಟಿಗೆ ಯತ್ನಿಸಿದ್ದರು.
ಸಿದ್ದರಾಮಯ್ಯ ಸರ್ಕಾರದ ಯಾವ್ಯಾವ ಹಗರಣಗಳ ತನಿಖೆಗೆ ಸಿಎಂ ಸೂಚನೆ
ಸಿದ್ದರಾಮಯ್ಯ ಅವರೊಂದಿಗೆ ಜಮೀರ್ ಅಹ್ಮದ್ ಸೇರಿ ಇನ್ನೂ ಕೆಲವು ಕಾಂಗ್ರೆಸ್ ಮುಖಂಡರು ಆರ್ಎಂಎಲ್ ಆಸ್ಪತ್ರೆಗೆ ತೆರಳಿದ್ದರು. ಆದರೆ ಸಿದ್ದರಾಮಯ್ಯಗೆ ಮಾತ್ರವೇ ಡಿಕೆಶಿ ಭೇಟಿಗೆ ಅವಕಾಶ ನೀಡಲಾಗಿತ್ತು.
ಇಡಿ ವಿಚಾರಣೆಯಲ್ಲಿದ್ದ ಡಿ.ಕೆ.ಶಿವಕುಮಾರ್ ಅವರ ಆರೋಗ್ಯದಲ್ಲಿ ಏರು-ಪೇರಾದ ಕಾರಣ ಅವರನ್ನು ಇಡಿ ಅಧಿಕಾರಿಗಳು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ರಕ್ತದ ಒತ್ತಡದಲ್ಲಿ ಏರು-ಪೇರಾಗಿತ್ತು.
ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಕೈಬಿಟ್ಟರೂ, ಬಿಜೆಪಿ ಅವರ ಕೈಬಿಡುವುದಿಲ್ಲ!
ಸಿದ್ದರಾಮಯ್ಯ ಅವರು ಇದೇ ದಿನ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಬಗ್ಗೆ ಮಾತುಕತೆ ನಡೆಸಿದರು. ಇದೇ ದಿನ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.