ಸಿಯಾಚಿನ್ ಹೀರೋ ಕರ್ನಲ್ ನರೇಂದ್ರ ಕುಮಾರ್ ಇನ್ನಿಲ್ಲ
ನವದೆಹಲಿ, ಜನವರಿ 1: ಅತ್ಯಂತ ಕಠಿಣವಾದ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಭಾರತೀಯ ಸೇನೆಯು ಹಿಡಿತ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ದೇಶದ ಭದ್ರತೆಗೆ ಮಹತ್ವದ ಕೊಡುಗೆ ನೀಡಿದ್ದ ಕರ್ನಲ್ ನರೇಂದ್ರ 'ಬುಲ್' ಕುಮಾರ್ (ನಿವೃತ್ತ) ಅವರು ಗುರುವಾರ ನಿಧನರಾದರು.
ಈಗಿನ ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿಯಲ್ಲಿ 1933ರಲ್ಲಿ ಜನಿಸಿದ ನರೇಂದ್ರ ಕುಮಾರ್ ಅವರು, 1984ರ ಏಪ್ರಿಲ್ನಲ್ಲಿ ಸಿಯಾಚಿನ್ ನೀರ್ಗಲ್ಲುವಿನಲ್ಲಿ ಭಾರತೀಯ ಸೇನೆಯನ್ನು ಮುನ್ನಡೆಸಿದ್ದರು. ಪರ್ವತಾರೋಹಣದಲ್ಲಿ ದಿಗ್ಗಜರೆನಿಸಿದ್ದ ಅವರು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಬಯಕೆಯಂತೆ ಕಾಶ್ಮೀರದ ಸಿಯಾಚಿನ್ ನೀರ್ಗಲ್ಲು ಪ್ರದೇಶವನ್ನು ಆಕ್ರಮಿಸಿಕೊಳ್ಳುವ ಆಪರೇಷನ್ ಮೇಘದೂತ್ನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಭಾರತೀಯ ಸೇನೆಗೆ ಮೈಕೊರೆಯುವ ಚಳಿಯಲ್ಲಿ ಸಿಯಾಚಿನ್ ಸವಾಲು!
ಇದಕ್ಕೂ ಮುನ್ನ 1978ರಲ್ಲಿ ಅವರು ಜಗತ್ತಿನ ಮೂರನೇ ಅತಿ ಎತ್ತರದ ಪರ್ವತ ಕಾಂಚನಜುಂಗಾ ಅನ್ನು ಈಶಾನ್ಯ ಭಾಗದಿಂದ ಏರಿದ್ದರು. 45 ವರ್ಷ ವಯಸ್ಸಿನವರು ಯಾರೂ ಇಂತಹ ಸಾಹಸಕ್ಕೆ ಕೈಹಾಕಿರಲಿಲ್ಲ. 1965ರಲ್ಲಿ ಅವರು ಮೌಂಟ್ ಎವರೆಸ್ಟ್ ಏರುವ ಭಾರತದ ಮೊದಲ ತಂಡದ ಭಾಗವಾಗಿದ್ದರು.
87 ವರ್ಷದ ನರೇಂದ್ರ ಕುಮಾರ್ ಅವರನ್ನು 'ಬುಲ್' ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು. ದೆಹಲಿಯ ಬ್ರಾರ್ ಚೌಕದಲ್ಲಿ ಶುಕ್ರವಾರ ಅವರ ಅಂತ್ಯಕ್ರಿಯೆ ನಡೆಯಿತು.