'ಬಡ್ತಿಯಲ್ಲಿ ಮೀಸಲಾತಿಯನ್ನು ಸಮರ್ಥಿಸುವ ಡೇಟಾ ನೀಡಿ': ಕೇಂದ್ರಕ್ಕೆ ಸುಪ್ರೀಂ ಸೂಚನೆ
ನವದೆಹಲಿ, ಅಕ್ಟೋಬರ್ 06: ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಗೆ ಸೇರಿದ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರವು ಯಾವ ಕ್ರಮವನ್ನು ಕೈಗೊಂಡಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನೆ ಮಾಡಿದೆ.
ಎಲ್ ನಾಗೇಶ್ವರ ರಾವ್ ನೇತೃತ್ವದ ಮೂವರು ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠವು, "ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಗೆ ಸೇರಿದ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ನಿರ್ಧಾರವನ್ನು ಮಾಡಿರುವುದಕ್ಕೆ ನ್ಯಾಯಾಂಗವು ಪ್ರಶ್ನೆ ಮಾಡಿದಾಗ ಸರ್ಕಾರವು ಈ ಬಗ್ಗೆ ಸ್ಪಷ್ಟನೆಯನ್ನು ನೀಡಬೇಕು," ಎಂದು ಹೇಳಿದೆ.
ಪರಿಶಿಷ್ಟ ನೌಕರರ ಬಡ್ತಿ ಮಧ್ಯಂತರ ಆದೇಶ ನಿರಾಕರಿಸಿದ ಸುಪ್ರೀಂ
"ತತ್ವಗಳ ವಿಚಾರದಲ್ಲಿ ದಯವಿಟ್ಟು ನಮ್ಮಲ್ಲಿ ವಾದ ಮಾಡಲು ಬರಬೇಡಿ. ನಮಗೆ ಬೇಕಾಗಿರುವುದು ಡೇಟಾ, ಅದನ್ನು ತೋರಿಸಿ. ಬಡ್ತಿ ನೀಡುವುದರಲ್ಲಿ ಮೀಸಲಾತಿಯನ್ನು ನೀವು ಹೇಗೆ ಸಮರ್ಥನೆ ಮಾಡುತ್ತೀರಿ ಹಾಗೂ ಈ ನಿರ್ಧಾರವನ್ನು ನೀವು ತೆಗೆದುಕೊಂಡಿರುವುದಕ್ಕೆ ಯಾವ ಸ್ಪಷ್ಟನೆಯನ್ನು ನೀಡುತ್ತೀರಿ ಎಂದು ತಿಳಿಸಿದೆ. ಸೂಚನೆಯನ್ನು ಪಾಲಿಸಿ, ನಮಗೆ ಈ ಬಗ್ಗೆ ಸ್ಪಷ್ಟನೆ ನೀಡಿ," ಎಂದು ನ್ಯಾಯಮೂರ್ತಿ ಸಂಜೀವ ಖನ್ನಾ, ಬಿಆರ್ ಗವಾಯಿ ಹಾಗೂ ಎಲ್ ನಾಗೇಶ್ವರ ರಾವ್ ಇರುವ ನ್ಯಾಯಾಪೀಠವು ತಿಳಿಸಿದೆ.
ಸರ್ಕಾರದ ಪರವಾಗಿ ಅಟರ್ನಿ ಜನರಲ್ ಕೆ ಕೆ ವೇಣುಗೋಪಾಲ ವಾದ ಮಾಡಿದ್ದಾರೆ. 1992 ರ ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಉಲ್ಲೇಖ ಮಾಡಿದರು. ಇದನ್ನು ಮಂಡಲ ಕಮಿಷನ್ ಪ್ರಕರಣ ಎಂದು ಕರೆಯಲಾಗುತ್ತದೆ. ಈ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಬಡ್ತಿಯಲ್ಲಿ ಕೋಟಾವನ್ನು ತಳ್ಳಿ ಹಾಕಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧಿಕಾರಿ, "ಇಂದ್ರಾ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ ಹಿಂದುಳಿದ ವರ್ಗದ ಮೇಲಿನ ಕಾಳಜಿ ಇತ್ತು, ಅದು ಎಸ್, ಎಸ್ಟಿಗೆ ಸಂಬಂಧಿಸಿದ್ದು ಅಲ್ಲ," ಎಂದು ಹೇಳಿದ್ದಾರೆ.
"ಎಲ್ಲಾ ವರ್ಗಕ್ಕೆ ಮೀಸಲಾತಿ ನೀಡಬೇಕೇ ಎಂಬ ವಿಚಾರದಲ್ಲಿ ಈ ತೀರ್ಪು ನೀಡಲಾಗಿದೆ. ಆ ತೀರ್ಪು ಈ ರೀತಿಯಾಗಿ ಮೀಸಲಾತಿ ನೀಡಲಾಗದು ಎಂದು ಹೇಳಿದೆ. ಯಾಕೆಂದರೆ ಹಾಗೆ ನೀಡಿದರೆ ಶೇಕಡ 50 ರಷ್ಟು ಪಾಲು ಮೀಸಲಾತಿಗೆ ಹೋಗುತ್ತದೆ," ಎಂದು ಉಲ್ಲೇಖಿಸಿದ್ದಾರೆ.
ಸೆಪ್ಟೆಂಬರ್ 14 ರಂದು ಸುಪ್ರೀಂ ಕೋರ್ಟ್, ಎಸ್ಸಿ ಎಸ್ಟಿ ಮೀಸಲಾತಿ ಸಂಬಂಧಿಸಿದ ತನ್ನ ತೀರ್ಪಿನ ಬಳಿಕ ಮತ್ತೆ ಆ ಪ್ರಕರಣವನ್ನು ತೆರೆಯಲಾಗದು ಎಂದು ಹೇಳಿದೆ. "ನಾವು ಈಗ ಈ ಬಗ್ಗೆ ಸ್ಪಷ್ಟಪಡಿಸುತ್ತೇವೆ. ನಾವು ನಾಗರಾಜ್ ಅಥವಾ ಜರ್ನಲ್ ಯಾವುದೇ ಮೀಸಲಾತಿ ಸಂಬಂಧಿತ ಪ್ರಕರಣವನ್ನು ನಾವು ಮತ್ತೆ ವಿಚಾರಣೆ ಆರಂಭ ಮಾಡುವುದಿಲ್ಲ," ಎಂದಿದ್ದಾರೆ. "ನಾವು ಈಗಾಗಲೇ ತೀರ್ಪಿನಲ್ಲಿ ನಮ್ಮ ನಿರ್ಧಾರವನ್ನು ತಿಳಿಸಿದ್ದೇವೆ. ಹಾಗಿರುವಾಗ ಮತ್ತೆ ನಾವು ಈ ಬಗ್ಗೆ ಮರು ವಿಚಾರಣೆ ನಡೆಸುವುದಿಲ್ಲ," ಎಂದು ಪೀಠವು ಹೇಳಿದೆ.
ಇನ್ನು ಈ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸರ್ಕಾರದ ಅಟಾರ್ನಿ ಜನರಲ್, "ಸಮಸ್ಯೆ ಎಂದರೆ ಹೈಕೋರ್ಟ್ಗಳು ಮೂರು ಮಧ್ಯಂತರ ಆದೇಶವನ್ನು ನೀಡಿದೆ. ಆದರೆ ಇದರಲ್ಲಿ ಎರಡು ಬಡ್ತಿಯನ್ನು ಮುಂದುವರಿಸಲು ಹೇಳಿದರೆ, ಇನ್ನೂ ಎರಡು ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಹೇಳುತ್ತದೆ," ಎಂದಿದ್ದಾರೆ.
"ಭಾರತ ಸರ್ಕಾರವು 1,400 ಹುದ್ದೆಗಳನ್ನು ಹೊಂದಿದ್ದು, ಈ ಹುದ್ದೆಗಳಲ್ಲಿ ಈ ಮೂರು ಆದೇಶದಂತೆ ಬಡ್ತಿ ಪ್ರಕ್ರಿಯೆ ನಡೆಸಲು ಈಗ ಸಾಧ್ಯವಾಗದಂತೆ ಆಗಿದೆ. ಈಗ ಇರುವ ಪ್ರಶ್ನೆ ಎಂದರೆ ನಾವು ಸಾಮಾನ್ಯವಾಗಿ ಬಡ್ತಿ ಪ್ರಕ್ರಿಯೆ ನಡೆಸಬಹುದೇ ಅಥವಾ ಇದು ಮೀಸಲಾತಿಗೆ ಪರಿಣಾಮ ಬೀರುತ್ತದೆಯೇ ಎಂಬುವುದು ಆಗಿದೆ," ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)