ಮಾವೋವಾದಿ ನಂಟು; ಒಂದು ಸಾಕ್ಷ್ಯವಾದರೂ ಕೋರ್ಟ್ ಮುಂದಿಡಿ ಎಂದ ಸುಪ್ರೀಂ
ನವದೆಹಲಿ, ಸೆಪ್ಟೆಂಬರ್ 19: ಮಾವೋವಾದಿ ನಕ್ಸಲರ ಜತೆಗೆ ಐವರು ಸಾಮಾಜಿಕ ಹೋರಾಟಗಾರರ ನಂಟಿದೆ ಎಂದು ವಾದ ಮುಂದಿಟ್ಟಿದ್ದೀರಲ್ಲಾ, ಮಾವೋವಾದಿಗಳನ್ನು ಈ ಐವರು ಬೆಂಬಲಿಸಿದ್ದಾರೆ ಎಂಬುದನ್ನು ಸಾಬೀತುಪಡಿಸುವಂಥ 'ಒಂದು ದಾಖಲೆ'ಯನ್ನು ನಮ್ಮ ಮುಂದೆ ಹಾಜರುಪಡಿಸಿ ಎಂದು ಸುಪ್ರೀಂ ಕೋರ್ಟ್ ಬುಧವಾರ ಪುಣೆ ಪೊಲೀಸರನ್ನು ಕೇಳಿದೆ.
ಅಗತ್ಯ ಬಂದರೆ ಮಧ್ಯಪ್ರವೇಶ ಮಾಡ್ತೀವಿ: ಕೇಂದ್ರ ಸರಕಾರಕ್ಕೆ 'ಸುಪ್ರೀಂ'
ವಕೀಲೆ ಹಾಗೂ ಕಾರ್ಮಿಕ ಒಕ್ಕೂಟದ ಕಾರ್ಯಕರ್ತೆ ಸುಧಾ ಭಾರದ್ವಾಜ್, ತೆಲುಗು ಕವಿ ವರವರ ರಾವ್, ಸಾಮಾಜಿಕ ಕಾರ್ಯಕರ್ತರಾದ ಗೌತಮ್ ನವಲಖ ಹಾಗೂ ವಕೀಲರಾದ ಅರುಣ್ ಫೆರೇರಾ ಮತ್ತು ವೆರ್ನಾನ್ ಗೋನ್ಸಾಲ್ವೆಸ್ ಅವರನ್ನು ಆಗಸ್ಟ್ 26ನೇ ತಾರೀಕು ಬಂಧಿಸಲಾಗಿತ್ತು. ಮಾವೋವಾದಿಗಳ ಜತೆಗೆ ಇವರಿಗೆ ಸಂಪರ್ಕ ಇದೆ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು.
ಪುಣೆಯ ಎಲ್ಗರ್ ಪರಿಷದ್ ನಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೊಂಡು, ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಕಾರ್ಯಕ್ರಮ ನಡೆದ ಮರು ದಿನ ಭೀಮಾ ಕೋರೆಗಾಂವ್ ನಲ್ಲಿ ಹಿಂಸಾಚಾರ ನಡೆದಿತ್ತು. ಸಾವಿರಾರು ದಲಿತರು ಅಂದು ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.