ಪರೀಕ್ಷೆ.. ಪರೀಕ್ಷೆ.. ಪೋಷಕರಿಗೆ ಪ್ರಧಾನಿ ಕೊಟ್ಟ ಸಲಹೆಯೇನು ಗೊತ್ತೆ?
Recommended Video
ನವದೆಹಲಿ, ಜನವರಿ.20: 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ನಡುವಿನ 'ಪರೀಕ್ಷಾ ಪೇ ಚರ್ಚಾ' ಎಂಬ ವಿಭಿನ್ನ ಕಾರ್ಯಕ್ರಮಕ್ಕೆ ದೆಹಲಿಯ ತಾಲಕಟೋರ್ ಸ್ಟೇಡಿಯಂ ಸಾಕ್ಷಿಯಾಯಿತು.
ಮಾನವ ಸಂಪನ್ಮೂಲ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಾರ್ಚ್ ಹಾಗೂ ಎಪ್ರಿಲ್ ತಿಂಗಳಿನಲ್ಲಿ ಎದುರಾಗುವ ಸೆಂಟ್ರಲ್ ಬೋರ್ಡ್ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡರು.
ಇಂದು ಪ್ರಧಾನಿ ಪರೀಕ್ಷಾ ಪೆ ಚರ್ಚಾ: ಎಲ್ಲಿ ವೀಕ್ಷಿಸಬಹುದು?
ದೇಶದ ಮೂಲೆ ಮೂಲೆಗಳಿಂದ ಆಯ್ದ 2 ಸಾವಿರ ವಿದ್ಯಾರ್ಥಿಗಳು ಸೋಮವಾರ ನಡೆದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕರ್ನಾಟಕದಿಂದಲೂ 42 ವಿದ್ಯಾರ್ಥಿಗಳು ಇಂದಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪರೀಕ್ಷೆ ಪೇ ಚರ್ಚಾ ಮನ ಮುಟ್ಟಿದ ಕಾರ್ಯಕ್ರಮ
ದೇಶಾದ್ಯಂತ ವಿವಿಧ ಬಗೆಯ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ಪ್ರತಿಯೊಂದು ಕಾರ್ಯಕ್ರಮವೂ ನನಗೆ ಹೊಸ ಹೊಸ ಅನುಭವವನ್ನು ನೀಡಿವೆ. ಸಂತೋಷವನ್ನು ಉಂಟು ಮಾಡಿವೆ. ಆದರೆ, ಮನಸಿಗೆ ಹತ್ತಿರವಾದ ಕಾರ್ಯಕ್ರಮ ಯಾವುದು ಎಂದು ಕೇಳಿದರೆ, ನಾನು ಪರೀಕ್ಷಾ ಪೇ ಚರ್ಚಾ ಅಂತಾ ಹೇಳಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
"ಕೇವಲ ಪರೀಕ್ಷೆಯೇ ಮಕ್ಕಳನ್ನು ಸೀಮಿತಗೊಳಿಸದಿರಿ"
ಪ್ರಪಂಚ ಸಾಕಷ್ಟು ವಿಶಾಲವಾಗಿದ್ದು, ನಿಮ್ಮ ಮಕ್ಕಳನ್ನು ಕೇವಲ ಪರೀಕ್ಷೆಗಳಿಗೆ ಸೀಮಿತರಾಗುವಂತೆ ಬೆಳೆಸಬೇಡಿ ಎಂದು ಪೋಷಕರಿಗೂ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. ದೇಶದಲ್ಲಿ ರೈತನು ಅಷ್ಟಾಗಿ ಓದಿಕೊಂಡಿಲ್ಲ. ವಿದ್ಯಾವಂತರೂ ಆಗಿಲ್ಲ. ಆದರೆ, ಎಲ್ಲ ವಿಷಯಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಉತ್ತಮ ಜೀವನವನ್ನು ಸಾಗಿಸುತ್ತಿದ್ದಾರೆ. ಈ ರೀತಿಯ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ನಿಮ್ಮ ಮಕ್ಕಳಲ್ಲಿ ತುಂಬಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
2001ರ ಕ್ರಿಕೆಟ್ ಪಂದ್ಯವೇ ಬೆಸ್ಟ್ ಎಕ್ಸಾಂಪಲ್!
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಚಿಂತನೆಗಳು ಹೇಗೆ ಇರಬೇಕು ಎಂಬುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದಾಹರಣೆಗಳ ಸಮೇತ ಮನವರಿಕೆ ಮಾಡಿದರು. ಈ ವೇಳೆ 2001ರ ಕ್ರಿಕೆಟ್ ಪಂದ್ಯದ ಬಗ್ಗೆ ಮೋದಿ ಪ್ರಸ್ತಾಪಿಸಿದರು. ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಇಂಡಿಯಾ ತೀವ್ರ ಹಿನ್ನಡೆ ಅನುಭವಿಸಿತ್ತು. ಆದರೆ, ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಯಾರೂ ಊಹಿಸಲು ಆಗದ ರೀತಿಯಲ್ಲಿ ಇಡೀ ಪಂದ್ಯದ ಗತಿಯನ್ನೇ ಬದಲಿಸಿದರು. ಇದು ನಿಜವಾದ ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಚಿಂತನೆಗೆ ಒಂದು ಉದಾಹರಣೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸೋಲಿನ ಪಾಠ ಮಾಡಿದ ಪ್ರಧಾನಿ ಮೋದಿ
ಚಂದ್ರಯಾನ-2 ಉಡಾವಣೆ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು. ಇಸ್ರೋ ಉಡಾವಾಣೆ ಮಾಡಿದ ಚಂದ್ರಯಾನ-2 ಯಶಸ್ವಿಯಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಚಂದ್ರಯಾನ-2 ವಿಫಲವಾದರೆ ಏನು ಮಾಡುತ್ತೀರಿ. ನೀವು ಅಲ್ಲಿಗೆ ತೆರಳಬೇಡಿ ಎಂದು ಕೆಲವರು ನನಗೆ ಹೇಳಿದ್ದರು. ಆದರೆ, ಅದೇ ಕಾರಣಕ್ಕೆ ನಾನು ಅಲ್ಲಿ ಉಪಸ್ಥಿತನಾಗಿದ್ದೆನು ಎಂದು ಮೋದಿ ಹೇಳಿದರು.
ವಿದ್ಯಾರ್ಥಿಗಳು ರೋಬೋಟ್ ನಂತೆ ಕೆಲಸ ಮಾಡಬೇಕೇ?
ಶಿಕ್ಷಣ ಗೊತ್ತಿಲ್ಲದ ವಿಚಾರಗಳನ್ನು ಅರಿತುಕೊಳ್ಳಲು ಇರುವ ಮಾರ್ಗವಷ್ಟೇ. ಇದರ ಜೊತೆಗೆ ಕಲೆ, ಕ್ರೀಡೆ, ಸಂಸ್ಕೃತಿಯಂತಹ ಇತರೆ ಕಾರ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ ಜೀವನವು ರೋಬೋಟ್ ನಂತೆ ಆಗಿಬಿಡುತ್ತದೆ. ವಿದ್ಯಾರ್ಥಿಗಳು ರೋಬೋಟ್ ನಂತೆ ಬದುಕುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
'ಸ್ಮಾರ್ಟ್ ಫೋನ್ ಗಿಂತ ಹೆತ್ತವರಿಗೆ ಸಮಯ ನೀಡಿ'
ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಗಳಿಗೆ ಅಂಟಿಕೊಳ್ಳುತ್ತಿದ್ದಾರೆ. ನೀವು ಸ್ಮಾರ್ಟ್ ಫೋನ್ ಜೊತೆ ಕಳೆಯುವ ಸಮಯದಲ್ಲಿ ಕನಿಷ್ಠ 10ರಷ್ಟು ವೇಳೆಯನ್ನು ನಿಮ್ಮ ಹೆತ್ತವರು, ಅಜ್ಜ-ಅಜ್ಜಿಯರ ಜೊತೆ ಕಳೆಯಿರಿ. ಅವರ ಅನುಭವದ ಮಾತುಗಳು ನಿಮ್ಮಲ್ಲಿನ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.