ಫಲಿತಾಂಶದ ಬೆನ್ನಲ್ಲೇ ಆಘಾತಕಾರಿ ಘಟನೆ: ಶಾಸಕನ ವಾಹನದ ಮೇಲೆ ಗುಂಡಿನ ದಾಳಿ, ಒಬ್ಬ ಸಾವು
Recommended Video
ನವದೆಹಲಿ, ಫೆಬ್ರವರಿ 12: ವಿಧಾನಸಭೆ ಚುನಾವಣೆಯಲ್ಲಿ ಎಎಪಿ ದಿಗ್ವಿಜಯ ಸಾಧಿಸಿದ ಬೆನ್ನಲ್ಲೇ ಮಂಗಳವಾರ ರಾತ್ರಿ ಆಘಾತಕಾರಿ ಘಟನೆ ನಡೆದಿದೆ. ಎಎಪಿಯ ಶಾಸಕ ನರೇಶ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆದಿದ್ದು, ಒಬ್ಬ ಕಾರ್ಯಕರ್ತ ಮೃತಪಟ್ಟಿದ್ದಾರೆ.
ನೈರುತ್ಯ ದೆಹಲಿಯ ಕಿಶನ್ಗಡ ಗ್ರಾಮದ ಸಮೀಪ ಅಪರಿಚಿತ ವ್ಯಕ್ತಿಗಳಿಂದ ಈ ಗುಂಡಿನ ದಾಳಿ ನಡೆದಿದೆ. ನರೇಶ್ ಯಾದವ್ ಅವರಿಗೆ ಯಾವುದೇ ಅಪಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪಕ್ಷದ ಕಾರ್ಯಕರ್ತ ಅಶೋಕ್ ಮನ್ ಎಂಬುವವರು ಹತ್ಯೆಗೊಳಗಾದ ದುರ್ದೈವಿ. ಗಾಯಗೊಂಡ ಕಾರ್ಯಕರ್ತನನ್ನು ಹರಿಂದರ್ ಎಂದು ಗುರುತಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೆಹಲಿ ಚುನಾವಣೆ: ಅರವಿಂದ ಕೇಜ್ರಿವಾಲ್, ಬಿಜೆಪಿ ರಾಜಕೀಯದ ಸುತ್ತಾ
ಚುನಾವಣೆಯಲ್ಲಿ ಗೆದ್ದ ಬಳಿಕ ಸಂಭ್ರಮಾಚರಣೆ ಮುಗಿಸಿ, ತಮ್ಮ ಮೆಹ್ರೌಲಿ ಕ್ಷೇತ್ರದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶಾಸಕರು ಮತ್ತು ಅವರ ಬೆಂಬಲಿಗರು ಊರಿಗೆ ಮರಳುತ್ತಿದ್ದ ವೇಳೆ ಈ ಗುಂಡಿನ ದಾಳಿ ನಡೆದಿದೆ. ಮೆಹ್ರೌಲಿ ಕ್ಷೇತ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನರೇಶ್ ಯಾದವ್ ಅವರು ಬಿಜೆಪಿಯ ಕುಸುಮ್ ಖತ್ರಿ ಅವರನ್ನು ಸುಮಾರು 9,000 ಮತಗಳಿಂದ ಸೋಲಿಸಿದ್ದಾರೆ.
ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ
ನರೇಶ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ಏಳು ಸುತ್ತಿನಲ್ಲಿ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಮತ್ತೊಬ್ಬ ಎಎಪಿ ಕಾರ್ಯಕರ್ತ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸ್ವಗ್ರಾಮಕ್ಕೆ ತೆರಳುತ್ತಿರುವಾಗ ನಡೆದ ಘಟನೆ
ಘಟನೆ ವೇಳೆ ನರೇಶ್ ಯಾದವ್ ಅವರು ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಅವರ ಹಿಂದ ಎರಡು ಪ್ರತ್ಯೇಕ ಕಾರುಗಳಲ್ಲಿ ಬೆಂಬಲಿಗರು ಹೋಗುತ್ತಿದ್ದರು. ಫೋರ್ಟಿಸ್ ಆಸ್ಪತ್ರೆ ಸಮೀಪ ರೆಡ್ ಸಿಗ್ನಲ್ ಇದ್ದಿದ್ದರಿಂದ ಕಾರು ನಿಲ್ಲಿಸಲಾಗಿತ್ತು. ಆಗ ಮತ್ತೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಕಾರಿನೊಳಗೆ ಕುಳಿತೇ ಗುಂಡು ಹಾರಿಸಲಾಗಿದೆ. ಅದರಲ್ಲಿ ಯಾವ ಗುಂಡೂ ಶಾಸಕರ ಕಾರಿಗೆ ತಾಗಿಲ್ಲ. ಒಂದು ಗುಂಡು ಕಾರಿನ ಹಿಂಬದಿಯ ಗಾಜನನ್ನು ಪುಡಿ ಮಾಡಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಕಾರ್ಯಕರ್ತನಿಗೆ ತಗುಲಿದೆ. ಅವರು ಮೃತಪಟ್ಟರೆ, ಮತ್ತೊಂದು ಗುಂಡು ಇನ್ನೊಬ್ಬ ಕಾರ್ಯಕರ್ತನಿಗೆ ತಗುಲಿ ಅವರಿಗೆ ಗಾಯವಾಗಿದೆ.
ವೈಯಕ್ತಿಕ ದ್ವೇಷದಿಂದ ನಡೆದಿರುವ ದಾಳಿ
ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದು ವೈಯಕ್ತಿಕ ದ್ವೇಷದಿಂದ ನಡೆದಿರುವ ದಾಳಿ ಎಂದು ಪೊಲೀಸರು ಶಂಕಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟ ಎಎಪಿ ಕಾರ್ಯಕರ್ತನ ಮೇಲೆ ಕ್ರಿಮಿನಲ್ ಕೇಸ್ ಇತ್ತು. ಇದು ಗುಂಪುಗಳ ನಡುವಿನ ವೈರತ್ವದ ಕಾರಣದಿಂದ ನಡೆದಿರುವ ಘಟನೆ ಆಗಿರಬಹುದೇ ಹೊರತು ಚುನಾವಣೆಗೆ ಸಂಬಂಧಿಸಿದ್ದಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆಯಾಮಗಳಲ್ಲಿಯೂ ತನಿಖೆ
ಅಥವಾ ನರೇಶ್ ಯಾದವ್ ಅವರ ಮೇಲೆಯೇ ದಾಳಿ ನಡೆಸುವ ಸಲುವಾಗಿ ದುಷ್ಕರ್ಮಿಗಳು ಬಂದಿರಬಹುದು. ಅವರು ಯಾವ ಕಾರ್ನಲ್ಲಿ ಎಂದು ಗೊತ್ತಾಗದೆ ಗುಂಡು ಹಾರಿಸಿರುವ ಸಾಧ್ಯತೆಯೂ ಇದೆ. ನಾವು ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.