ಮಹಾರಾಷ್ಟ್ರ ಮೈ'ತ್ರಿ'ಗೆ ಬಿಜೆಪಿ ನಾಯಕರು ಇಂಥ ಶಾಕ್ ಕೊಡುವುದೇ?
ನವದೆಹಲಿ, ನವೆಂಬರ್.22: ಇಂದಾಗುತ್ತೆ, ನಾಳೆಯಾಗುತ್ತೆ, ನಾಡಿದ್ದು ಆಗುತ್ತೆ, ಹೀಗೆ ಅಂದುಕೊಳ್ಳುತ್ತಿದ್ದರೂ ಮಹಾರಾಷ್ಟ್ರದಲ್ಲಿ ಇಂದಿಗೂ ಸರ್ಕಾರ ರಚನೆ ಆಗುತ್ತಲೇ ಇಲ್ಲ. ಶಿವಸೇನೆ ಜೊತೆ ಕೈ ಜೋಡಿಸಲು ಕಾಂಗ್ರೆಸ್ ಹಾಗೂ ಎನ್ ಸಿಪಿ ಪಕ್ಷಗಳು ಹಿಂದೂ-ಮುಂದೂ ನೋಡುತ್ತಿವೆ.
ಕಳೆದ ಒಂದು ವಾರದಿಂದ ದೆಹಲಿಯಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿಪಿ ಪಕ್ಷದ ನಾಯಕರು ಸಾಲು ಸಾಲು ಸಭೆಗಳನ್ನು ನಡೆಸಿದ್ದೇ ಬಂತು. ಆದರೆ, ಶಿವಸೇನೆ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಾ, ಸರ್ಕಾರ ರಚಿಸುವುದಾ ಎಂಬುದು ಫೈನಲ್ ಆಗಿಯೇ ಇಲ್ಲ.
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಸಂಜಯ್, ಅರವಿಂದ್ ಹೆಸರು
ನವೆಂಬರ್.21ರಂದು ಮಾತನಾಡಿದ್ದ ಕಾಂಗ್ರೆಸ್ ಮುಖಂಡ ಪೃಷ್ವಿರಾಜ್ ಚೌವ್ಹಾಣ್, ಕಾಂಗ್ರೆಸ್ ಹಾಗೂ ಎನ್ ಸಿಪಿ ನಾಯಕರು ಮೈತ್ರಿಗೆ ಒಪ್ಪಿಗೆ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇನ್ನೂ ಶಿವಸೇನೆಗೆ ಬೆಂಬಲಿಸುವ ಬಗ್ಗೆ ತೀರ್ಮಾನವಾಗಿಲ್ಲ ಅಂತಲೂ ಉಲ್ಟಾ ಹೊಡೆದಿದ್ದರು. ಇಂದು ಮತ್ತೆ ಮುಂಬೈನಲ್ಲಿ ನಾಯಕರು ಸಾಲು ಸಾಲು ಮೀಟಿಂಗ್ ನಡೆಸುತ್ತಿದ್ದಾರೆ.
ಮಹಾ ಮೈ'ತ್ರಿ'ಗೆ ಬಿಜೆಪಿ ಶಾಕ್!
ಬಿಜೆಪಿ ದೋಸ್ತಿ ಕಡಿದುಕೊಂಡ ಶಿವಸೇನೆಗೆ ಕೇಸರಿ ನಾಯಕರು ಬಿಗ್ ಶಾಕ್ ನೀಡಿದ್ದಾರೆ. ಶಿವಸೇನೆ ಜೊತೆಗಿನ ಕಾಂಗ್ರೆಸ್ ಹಾಗೂ ಎನ್ ಸಿಪಿ ಮೈತ್ರಿ ಅವಕಾಶವಾದಿತನದ ಪರಮಾವಧಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿಪಿ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಗಿರುವ ಶಿವಸೇನೆ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಈಗ ಒಂದಾಗುತ್ತಿರುವ ಮೂರು ಪಕ್ಷಗಳು ಸರ್ಕಾರ ರಚಿಸಿದರೂ ಅದು ಬಹಳ ದಿನಗಳ ಕಾಲ ಉಳಿಯುವುದಿಲ್ಲ. ಸ್ಥಿರ ಆಡಳಿತ ನೀಡಲು ಮೈತ್ರಿ ಸರ್ಕಾರದಿಂದ ಸಾಧ್ಯವಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.