ಶಿವಸೇನೆಯ ಏಕೈಕ ಕೇಂದ್ರ ಸಚಿವರ ರಾಜೀನಾಮೆ, ಗರಿಗೆದರಿತು 'ಮಹಾ' ರಾಜಕೀಯ
ನವದೆಹಲಿ, ನವೆಂಬರ್ 11: ಮಹಾರಾಷ್ಟ್ರ ರಾಜಕೀಯ ಗೊಂದಲಗಳಿಗೆ ಇಂದೇ ತೆರೆಬೀಳುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿದ್ದು, ಅದಕ್ಕೆ ಸೂಚನೆ ಎಂಬಂತೆ ಶಿವಸೇನೆಯ ಏಕೈಕ ಕೇಂದ್ರ ಸಚಿವ ಅರವಿಂದ್ ಸಾವಂತ್ ರಾಜೀನಾಮೆ ನೀಡಿದ್ದಾರೆ.
"ಶಿವಸೇನೆಯ ಕಡೆ ಸತ್ಯವಿದೆ. ಮಹಾರಾಷ್ಟ್ರದಲ್ಲಿ ಈ ರೀತಿಯ ಬೆಳವಣಿಗೆ ನಡೆಯುತ್ತಿರುವಾಗ ನಾನ್ಯಾಕೆ ಕೇಂದ್ರ ಸರ್ಕಾರದಲ್ಲೇ ಉಳಿಯಲಿ? ನನ್ನ ಆತ್ಮಸಾಕ್ಷಿ ಅದಕ್ಕೆ ಒಪ್ಪುವುದಿಲ್ಲ" ಎಂದು ಸಾವಂತ್ ಹೇಳಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರಾಗಿದ್ದ ಅರವಿಂದ್ ಸಾವಂತ್ ಅವರು ಸೋಮವಾರ ಬೆಳಿಗ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದನ್ನು ಘೋಷಿಸಿದರು.
ಸರ್ಕಾರ ರಚಿಸಲು ಶಿವಸೇನಾಗೆ ಆಹ್ವಾನ ನೀಡಿದ ಮಹಾ ರಾಜ್ಯಪಾಲ
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಇದ್ದ ಗಡುವು ಈಗಾಗಲೇ ಮುಕ್ತಾಯವಾಗಿದ್ದು, ಬಿಜೆಪಿ ಸರ್ಕಾರ ರಚನೆಯ ಪ್ರಯತ್ನದಿಂದ ಹಿಂದೆ ಸರಿದ ಪರಿಣಾಮ ಶಿವಸೇನೆಯನ್ನು ಸರ್ಕಾರ ರಚನೆಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಆಹ್ವಾನಿಸಿದ್ದಾರೆ. ಭಾನುವಾರ ರಾಜ್ಯಪಾಲರ ಆಹ್ವಾನದ ನಂತರ, ಸೋಮವಾರ ಬೆಳಿಗ್ಗೆ ಕೇಂದ್ರ ಸಚಿವರ ರಾಜೀನಾಮೆಯ ಬೆಳವಣಿಗೆ ನಡೆದಿದೆ. ಈ ಮೂಲಕ ಶಿವಸೇನೆ ಎನ್ ಡಿಎಯಿಂದಲೇ ಹೊರಬರಬಹುದು ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.
ಎನ್ ಸಿಪಿ ಶರತ್ತಿಗೆ ಶಿವಸೇನೆ ಅಸ್ತು?
ಶಿವಸೇನೆಗೆ ಬೆಂಬಲ ನೀಡಬೇಕೆಂದರೆ ತಾನು ಹಾಕಿದ ಶರತ್ತುಗಳನ್ನು ಪಾಲಿಸಬೇಕು ಎಂದು ಎನ್ ಸಿಪಿ ಹೇಳಿತ್ತು. ಆ ಶರತ್ತಿನಲ್ಲಿ ಮೊದಲನೆಯದೇ ಅರವಿಂದ್ ಸಾವಂತ್ ರಾಜೀನಾಮೆ ನೀಡಬೇಕು ಎಂಬುದಾಗಿತ್ತು. ಅಂತೆಯೇ ಇದೀಗ ಅವರು ರಾಜೀನಾಮೆ ನೀಡಿದ್ದು ಶಿವಸೇನೆಗೆ ಎನ್ ಸಿಪಿ ಬೆಂಬಲ ನೀಡಬಹುದು ಎಂಬ ಊಹೆ ಸತ್ಯವಾಗುತ್ತಿದೆ.
ಎನ್ ಡಿಎಯಿಂದಲೂ ಹೊರಕ್ಕೆ
ಎನ್ ಡಿಎಯಿಂದಲೂ ಶಿವಸೇನೆ ಆಚೆ ಬರಬೇಕು ಎಂಬುದೂ ಎನ್ ಸಿಪಿ ಹಾಕಿದ ಶರತ್ತುಗಳಲ್ಲೊಂದು. ಶಿವಸೇನೆಯ ಏಕೈಕ ಸಚಿವರು ರಾಜೀನಾಮೆ ನೀಡಿದ ನಂತರ ಇದೀಗ ಎನ್ ಡಿಎ ಮೈತ್ರಿಕೂಟದಿಂದಲೂ ಹೊರಬರಲು ಶಿವಸೇನೆ ನಿರ್ಧರಿಸಿದರೆ ಅಚ್ಚರಿಯೇನಿಲ್ಲ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಚಾನ್ಸ್ ಕೊಡಿ ಪ್ಲೀಸ್
ಕೇಂದ್ರ ಸರ್ಕಾರಕ್ಕೇನೂ ತೊಂದರೆಯಿಲ್ಲ
ಎನ್ ಡಿಎಯಿಂದ ಶಿವಸೇನೆ ಹೊರಬಂದರೂ ಕೇಂದ್ರ ಸರ್ಕಾರಕ್ಕೇನೂ ತೊಂದರೆಯಿಲ್ಲ. ಏಕೆಮದರೆ ಲೊಕಸಭೆಯಲ್ಲಿ ಶಿವಸೇನೆ ಕೇವಲ 18 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿದೆ. ಎನ್ ಡಿಎಯ ಒಟ್ಟು 353 ಸೀಟುಗಳಲ್ಲಿ ಶಿವಸೇನನೆ ಹೊರಕ್ಕೆ ಬಂದರೆ 335 ಸೀಟುಗಳ ಮೂಲಕ ಕೇಂದ್ರ ಸರ್ಕಾರ ಬಹುಮತ ಕಾಯ್ದುಕೊಳ್ಳಲಿದೆ.
ಹೈಕಮಾಂಡ್ ಸೂಚನೆ ಮೇರೆಗೆ ಹಿಂದೆ ಸರಿದ ಬಿಜೆಪಿ
ಇಷ್ಟು ದಿನ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿಯೇ ರಚಿಸುತ್ತೇನೆ ಎಂದು ವಿಶ್ವಾಸದಲ್ಲಿದ್ದ ಬಿಜೆಪಿ ಇದೀಗ ಹೈಕಮಾಂಡ್ ಸೂಚನೆಯ ಮೇರೆಗೆ ಆ ನಡೆಯಿಮದ ಹಿಂದೆ ಸರಿದಿದೆ. ಜನಾದೇಶ ಸಿಕ್ಕಿದ್ದು ಬಿಜೆಪಿ, ಶಿವಸೇನೆ ಮೈತ್ರಿಗೆ. ಇದೀಗ ಮೈತ್ರಿಯಿಂದ ದೂರ ಸರಿದರೆ ಜನಾದೇಶದ ವಿರುದ್ಧ ನಡೆದಂತಾಗುತ್ತದೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.'
ಶಿವಸೇನೆಗೆ ಎನ್ ಸಿಪಿ ಕಾಂಗ್ರೆಸ್ ಬೆಂಬಲ?
ಕಳೆದ ಅಕ್ಟೋಬರ್ 21 ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಟೋಬರ್ 24 ರಂದು ಹೊರಬಿದ್ದಿದ್ದು, ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 145. ಆದರೆ ಬಿಜೆಪಿ ಏಕಾಂಗಿಯಾಗಿ ಈ ಸ್ಥಾನ ಪಡೆಯಲು ಅಶಕ್ತವಾಗಿದ್ದರಿಂದ ಶಿವಸೇನೆಯ ಬೆಂಬಲ ಬಿಜೆಪಿಗೆ ಅನಿವಾರ್ಯವಾಗಿತ್ತು. ಆದರೆ ಎನ್ ಸಿ ಪಿ ಮತ್ತು ಕಾಂಗ್ರೆಸ್ ಕ್ರಮವಾಗಿ 54, 44 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಈ ಎರಡೂ ಪಕ್ಷಗಳು ಶಿವಸೇನೆಗೆ ಬೆಂಬಲ ನೀಡಿದರೆ ಮೂರು ಪಕ್ಷಗಳ ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಶಿವಸೇನೆ ಅಭ್ಯರ್ಥಿ ಮುಖ್ಯಮಂತ್ರಿ ಸ್ಥಾನ ಪಡೆಯಲಿದೆ.