ಸಕಲ ಸರ್ಕಾರಿ ಗೌರವಗಳೊಂದಿಗೆ ಶೀಲಾ ದೀಕ್ಷಿತ್ ಅಂತ್ಯಕ್ರಿಯೆ
ನವದೆಹಲಿ, ಜುಲೈ 21: ನಿನ್ನೆ ನಿಧನ ಹೊಂದಿದ ಕಾಂಗ್ರೆಸ್ನ ಹಿರಿಯ ನಾಯಕಿ, ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗೊಂದಿಗೆ ನಡೆಯಿತು.
ಶೀಲಾ ದೀಕ್ಷಿತ್ ಅವರ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ದರ್ಶನಕ್ಕೆ ಇಡಲಾಗಿತ್ತು, ಪ್ರಿಯಾಂಕಾ ಗಾಂಧಿ, ರಾಬರ್ಟ್ ವಾದ್ರಾ ಸೇರಿದಂತೆ ಇನ್ನೂ ಅನೇಕ ಪ್ರಮುಖರು ಇಂದು ಶೀಲಾ ದೀಕ್ಷಿತ್ ಅವರ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡರು. ಬಿಜೆಪಿಯ ಮುಖಂಡರೂ ಸಹ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡರು.
ನಂತರ ಅಂತಿಮಕ್ರಿಯೆಗಳಿಗಾಗಿ ಪಾರ್ಥಿವ ಶರೀರವನ್ನು ನಿಗಮ್ ಬೋದ್ ಘಾಟ್ಗೆ ಒಯ್ಯಲಾಯಿತು. ಸಕಲ ಸರ್ಕಾರಿ ಗೌರವಗಳ ಜೊತೆಗೆ ಶೀಲಾ ದೀಕ್ಷಿತ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಾಡಲಾಯಿತು.
ಸೋನಿಯಾ ಗಾಂಧಿ ಅವರು ಮಾತನಾಡಿ, ಶೀಲಾ ದೀಕ್ಷಿತ್ ಸದಾ ನನ್ನ ಬೆಂಬಲಕ್ಕೆ ನಿಂತಿದ್ದರು, ಅವರು ನನಗೆ ಅಕ್ಕನಂತೆ ಹಾಗೂ ಸೋದರಿಯಂತೆ ಇದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ನಷ್ಟವನ್ನು ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಶೀಲಾ ದೀಕ್ಷಿತ್ ಅವರು ಮೂರು ಬಾರಿ ದೆಹಲಿಯ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದ್ದರು. ಅಷ್ಟೆ ಅಲ್ಲದೆ ಇನ್ನೂ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದರು.