ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಿರುಗಿಬಿದ್ದ ಶೀಲಾ
ನವದೆಹಲಿ, ಡಿ. 9 : ಹದಿನೈದು ವರ್ಷಗಳ ಕಾಲ ಮೂರು ಅವಧಿಗೆ ಮುಖ್ಯಮಂತ್ರಿಯಾಗಿ ನಾಲ್ಕನೇ ಯತ್ನದಲ್ಲಿ ಮುಗ್ಗರಿಸಿ ಬಿದ್ದಿರುವ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲ್ ದೀಕ್ಷಿತ್, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಿರುಗಿಬಿದ್ದಿದ್ದು, ತಮ್ಮ ಪಕ್ಷದ ಸೋಲಿನ ಹೊಣೆಯನ್ನು ನೇರವಾಗಿ ಕಾಂಗ್ರೆಸ್ ಮೇಲೆಯೇ ಹೊರಿಸಿದ್ದಾರೆ.
"ನನಗೆ ಸಿಗಬೇಕಾಗಿದ್ದ ಬೆಂಬಲ ಕಾಂಗ್ರೆಸ್ ಪಕ್ಷದಿಂದ ಸಿಗಲೇ ಇಲ್ಲ. ರಾಜ್ಯ ಸರಕಾರ ಒಂದು ರೀತಿ ಚಿಂತಿಸುತ್ತಿದ್ದರೆ, ಕಾಂಗ್ರೆಸ್ ವಿರುದ್ಧ ದಿಕ್ಕಿನಲ್ಲಿ ಚಿಂತನೆ ನಡೆಸಿದ್ದೇ ನಮಗೆ ಮುಳುವಾಯಿತು. ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿತ್ತು" ಎಂದು ಹೇಳಿರುವ ಅವರು ಹೈಕಮಾಂಡ್ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. [ಮೈತ್ರಿಕೂಟ ರಚಿಸಲು ಕಿರಣ್ ಬೇಡಿ ಸಲಹೆ]
ಶೀಲಾ ದೀಕ್ಷಿತ್ ಅವರು ಯಾವತ್ತೂ ಒಬ್ಬಂಟಿಯಾಗಿರಲೇ ಇಲ್ಲ. ಅವರ ಬೆಂಬಲಕ್ಕೆ ಇಡೀ ಕಾಂಗ್ರೆಸ್ ನಿಂತಿತ್ತು ಎಂದು ಜಯಂತಿ ನಟರಾಜನ್ ಅವರು ಭಾನುವಾರ, ಪಕ್ಷದ ಸೋಲಿನ ನಂತರ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಈಗ ಶೀಲಾ ದೀಕ್ಷಿತ್ ಅವರು ಹೇಳಿರುವುದು, ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅಂಶವನ್ನು ಬಹಿರಂಗಪಡಿಸಿದೆ. [ಸೋತ ಗೆದ್ದ ಪ್ರಮುಖರು]
ಆಮ್ ಆದ್ಮಿ ಪಕ್ಷವನ್ನು ಸರಿಯಾಗಿ ಅಂದಾಜು ಮಾಡಲು ಆಗಲಿಲ್ಲ ಎಂಬ ಸಂಗತಿಯನ್ನು ಒಪ್ಪಿಕೊಂಡಿರುವ ಅವರು, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧವೂ ಹಲವಾರು ಭ್ರಷ್ಟಾಚಾರದ ಆರೋಪಗಳಿದ್ದವು. ಅದನ್ನು ಜನರಿಗೆ ಮನದಟ್ಟು ಮಾಡಿಸುವಲ್ಲಿ ನಾವು ಸಂಪೂರ್ಣ ಸೋತೆವು ಎಂದು ಅವರು ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ.
ಈಗ ಆಗಿದ್ದು ಆಗಿಹೋಗಿದೆ. ಜನರು ತಮ್ಮ ತೀರ್ಮಾನವನ್ನು ನೀಡಿದ್ದಾರೆ. ಇನ್ನೇನಿದ್ದರೂ ದೆಹಲಿಗೆ ಸ್ಥಿರವಾದ ಸರಕಾರ ಸಿಗಬೇಕು ಎಂದಿರುವ ಅವರು, ಮೈತ್ರಿಕೂಟ ರಚಿಸುವಲ್ಲಿ ಕಾಂಗ್ರೆಸ್ ಯಾವುದೇ ರೀತಿ ಭಾಗವಹಿಸುವುದಿಲ್ಲ ಎಂದು ಶೀಲಾ ಅವರು ಸ್ಪಷ್ಟವಾಗಿ ನುಡಿದಿದ್ದಾರೆ.
ದೆಹಲಿ, ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಅನುಭವಿಸಿರುವ ಸೋಲಿಗೆ ರಾಹುಲ್ ಗಾಂಧಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗದು ಎಂದು ಕಾಂಗ್ರೆಸ್ ಪಕ್ಷ ಹೇಳಿರುವ ಬೆನ್ನ ಹಿಂದೆ ಶೀಲಾ ದೀಕ್ಷಿತ್, ಕಾಂಗ್ರೆಸ್ ಮೇಲೆ ಬೊಟ್ಟು ತೋರಿಸಿ ದಿಟ್ಟತನ ಮೆರೆದಿದ್ದಾರೆ. [ಸುಮ್ನೆ ರಾಹುಲ್ ಬೈಬೇಡಿ]
ಎಎಪಿನೇ ಸರಕಾರ ರಚಿಸಬೇಕು : ದೆಹಲಿಯಲ್ಲಿ ಯಾವ ಪಕ್ಷ ಸರಕಾರ ರಚಿಸಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ ಸ್ಪಷ್ಟ ನಿರ್ಧಾರಕ್ಕೆ ಯಾರೂ ಬರದಿರುವ ಸಂದರ್ಭದಲ್ಲಿ, ಆಮ್ ಆದ್ಮಿ ಪಕ್ಷವೇ ಮುಂದಾಗಿ ಕಾಂಗ್ರೆಸ್ ಸಹಾಯವನ್ನು ಪಡೆದುಕೊಂಡು ಸರಕಾರ ರಚಿಸಬೇಕು. ಬರೀ ತೊಂದರೆ ನೀಡುವ ಪಕ್ಷವಾಗದೆ ಜವಾಬ್ದಾರಿ ಹೊರಲು ಎಎಪಿ ಸಿದ್ಧವಾಗಬೇಕು ಎಂಬ ಪ್ರಸ್ತಾವನೆಯನ್ನು ಬಿಜೆಪಿ ನಾಯಕ ಅರುಣ್ ಜೇಟ್ಲಿ ಮುಂದಿಟ್ಟಿದ್ದಾರೆ.
ಒಟ್ಟು 70 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 32 ಸ್ಥಾನಗಳನ್ನು ಗೆದ್ದಿದ್ದರೆ, ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದಿದ್ದ ಆಮ್ ಆದ್ಮಿ ಪಕ್ಷ 28 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೂರು ಅವಧಿ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಕೇವಲ 8 ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಎರಡು ಸೀಟುಗಳು ಇತರರ ಪಾಲಾಗಿವೆ. ಸರಕಾರ ರಚಿಸಲು ಒಂದು ಪಕ್ಷಕ್ಕೆ ಬೇಕಿರುವುದು 36 ಸ್ಥಾನಗಳು.