ಬಿಜೆಪಿಯ 'ಪ್ರಾಡಕ್ಟ್' ಮೋದಿ, ಅದನ್ನವರು ಚೆನ್ನಾಗಿ ಮಾರ್ಕೆಟಿಂಗ್ ಮಾಡಿದರು: ತರೂರ್
ನವದೆಹಲಿ, ಮೇ 29: ಚುನಾವಣೆ ಫಲಿತಾಂಶವು ನಮಗೆ ಬಹುದೊಡ್ಡ ಹಿನ್ನಡೆ ನೀಡಿದೆ. ನಮ್ಮ ಪಕ್ಷವು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಕೆಲಸ ಮಾಡಬೇಕಿದೆ ಎಂದು ಕೇರಳದ ತಿರುವನಂತಪುರ ಕ್ಷೇತ್ರದ ಸಂಸದ ಶಶಿ ತರೂರ್ ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 'ನ್ಯಾಯ್' ಯೋಜನೆ ಕ್ರಾಂತಿಗೇನೂ ಕಡಿಮೆ ಇರಲಿಲ್ಲ. ಆದರೆ, ನಮ್ಮ ಪ್ರಣಾಳಿಕೆಯನ್ನು ಬೇಗನೆ ಬಿಡುಗಡೆ ಮಾಡಬೇಕಿತ್ತು ಮತ್ತು 'ನ್ಯಾಯ್'ದಂತಹ ಯೋಜನೆಗಳ ಪ್ರಚಾರಕ್ಕೆ ಹೆಚ್ಚು ಸಮಯ ವಿನಿಯೋಗಿಸಬೇಕಿತ್ತು. ಚುನಾವಣೆ ನಡೆದ ಅರ್ಧ ಭಾಗದಷ್ಟು ಪ್ರದೇಶಗಳಲ್ಲಿ ಮಾತ್ರ ನಾವು ನ್ಯಾಯ್ ಕುರಿತು ಮನದಟ್ಟು ಮಾಡುವಲ್ಲಿ ಸಫಲರಾಗಿದ್ದೆವು. ಬಹುಶಃ ಅರ್ಧ ಕೂಡ ಆಗಿರಲಿಲ್ಲ ಎಂದು ಅವರು 'ಹಿಂದೂಸ್ತಾನ್ ಟೈಮ್ಸ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮತದಾರರು ತಮ್ಮ ಅರ್ಥಿಕ ಸ್ವ ಹಿತಾಸಕ್ತಿಗೆ ಅನುಗುಣವಾಗಿ ಮತಹಾಕುತ್ತಾರೆ ಎಂಬ ನಂಬಿಕೆ ಸಾಮಾನ್ಯವಾಗಿದೆ. ಆದರೆ, ಈ ಬಾರಿ ಭಾರತೀಯ ಮತದಾರರು ಆ ರೀತಿ ಮತ ಚಲಾಯಿಸಲಿಲ್ಲ. ಅದು ಏಕೆ ಎಂಬುದನ್ನು ನಾವು ಕಂಡುಕೊಳ್ಳಬೇಕಿದೆ.
ಯಾರಾಗುತ್ತಾರೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ?
ಪ್ರಸ್ತುತದ ಸಮಸ್ಯೆಗಳೇನು ಎಂಬುದನ್ನು ನಾವು ಪರಿಣಾಮಕಾರಿಯಾಗಿ ಗುರುತಿಸಿದ್ದೆವು. ನಿರುದ್ಯೋಗ 45 ವರ್ಷಗಳಲ್ಲಿಯೇ ಅತ್ಯಧಿಕವಾಗಿದೆ, ಕೃಷಿಕರ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ, ಅಪನಗದೀಕರಣದಿಂದ ಜನರು ಪರದಾಡಿದ್ದಾರೆ. ಈ ಎಲ್ಲ ಸಂಗತಿಗಳೂ ಚುನಾವಣೆಯ ಹಣೆಬರಹ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಭಾವಿಸಿದ್ದಾಗಿ ತರೂರ್ ವಿವರಿಸಿದ್ದಾರೆ.
ಮೋದಿ ಬಿಜೆಪಿಯ 'ಪ್ರಾಡಕ್ಟ್'
ನರೇಂದ್ರ ಮೋದಿ ಅವರ ಭಾರಿ ಗೆಲುವಿಗೆ ಕಾರಣಗಳನ್ನು ತಕ್ಷಣ ನಿರ್ಧರಿಸುವುದು ಕೇವಲ ಊಹೆಗಳಾಗುತ್ತವೆ. ಆದರೆ, ಎದುರಾಳಿಗಳು ನಿರ್ಣಾಯಕ ವಿಚಾರಗಳನ್ನು ನಮಗಿಂತ ಉತ್ತಮವಾಗಿ ಅಳವಡಿಸಿದರು. ತಮ್ಮ 'ಉತ್ಪನ್ನ' ಮೋದಿ ಎಂಬುದನ್ನು ಅವರು ಮೊದಲೇ ನಿರ್ಧರಿಸಿದ್ದರು. ಮತ್ತು ಅವರನ್ನು ಅಷ್ಟೇ ಚೆನ್ನಾಗಿ ಮಾರ್ಕೆಟ್ ಮಾಡಿದರು. ಆಧುನಿಕ ಭಾರತದ ಇತಿಹಾಸದ ಅತ್ಯಂತ ಅಸಾಧಾರಣ ವ್ಯಕ್ತಿತ್ವವನ್ನಾಗಿ ಬಿಂಬಿಸಿದರು. ಬದುಕಿನ ಕಲ್ಪನೆಗಿಂತಲೂ ದೊಡ್ಡದಾಗಿ ಚಿತ್ರಿಸಿದರು. ನೂರಾರು, ಸಾವಿರಾರು ಸಾಮಾಜಿಕ ಮಾಧ್ಯಮ ಸಮರಾರ್ಥಿಗಳು, ಅವರಿಗೆ ಜತೆಯಾಗು 'ಮುಖ್ಯವಾಹಿನಿ' ಮಾಧ್ಯಮ, ಹೋದ ಎಲ್ಲ ಕಡೆಯೂ ಛಾಯಾಗ್ರಾಹಕರು ಮತ್ತು 24/7 ಪ್ರಚಾರ ಯಂತ್ರದ ಕೆಲಸ ನಡೆಯಿತು. ಅದರ ಜತೆಗೆ ಅವರು ತಮ್ಮ ಯೋಜನೆಗಳ ಕುರಿತು ಸಹ ಮಾರ್ಕೆಟ್ ಮಾಡುವುದರಲ್ಲಿ ಅದ್ಭುತ ಯಶಸ್ಸು ಸಾಧಿಸಿದರು.
ಮೋದಿಗೆ ಸಿಹಿ ತಿನ್ನಿಸಿದ ಪ್ರಣಬ್ ಮುಖರ್ಜಿ, ಏನೇನೋ ಊಹಾಪೋಹ!
ಪಕ್ಷದ ನಾಯಕತ್ವಕ್ಕೆ ಸಿದ್ಧ
ಪಕ್ಷವು ತಮ್ಮನ್ನು ಪಕ್ಷದ ಸಂಸದೀಯ ನಾಯಕನನ್ನಾಗಿ ಆಯ್ಕೆ ಮಾಡಿದರೆ ಖಂಡಿತಾ ಒಪ್ಪುತ್ತೇನೆ. ಆದರೆ, ಇದನ್ನು ನಿರ್ಧರಿಸುವುದು ನಾನಲ್ಲ. ನಮ್ಮ ಅನೇಕ ತಾರಾ ಮುಖಂಡರು ಸೋಲು ಅನುಭವಿಸಿದ್ದಾರೆ. ಹೀಗಾಗಿ ಉಳಿದವರು ಹೆಚ್ಚುವರಿ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾನು ಅದಕ್ಕೆ ಸಿದ್ಧನಿದ್ದೇನೆ.
ಕಾಂಗ್ರೆಸ್ ಅಂತ್ಯವಾಗಿಲ್ಲ
ಕಾಂಗ್ರೆಸ್ ಪಕ್ಷದ ಕಥೆ ಇಲ್ಲಿಗೇ ಮುಗಿಯಿತು ಎಂದು ಭಾವಿಸುವುದು ದುಡುಕುತನವಾಗುತ್ತದೆ. ಕೇರಳ ಮತ್ತು ಪಂಜಾಬ್ಗಳಲ್ಲಿನ ಪಕ್ಷದ ಪ್ರದರ್ಶನ ಕಂಡಾಗ ನಾವು ಇನ್ನೂ ಸಾಕಷ್ಟು ಅಸ್ತಿತ್ವ ಉಳಿಸಿಕೊಂಡಿದ್ದೇವೆ ಮತ್ತು ಬೆಳೆಯುತ್ತೇವೆ ಎಂದೆನಿಸಿದೆ. ಭಾರತದ ಪರ್ಯಾಯ ದೃಷ್ಟಿಕೋನವನ್ನು ನಾವು ಪ್ರತಿನಿಧಿಸುತ್ತೇವೆ. ಬಿಜೆಪಿಗೆ ಏಕೈಕ ರಾಷ್ಟ್ರೀಯ ವಿಶ್ವಾಸಾರ್ಹ ಪರ್ಯಾಯವಾಗಿ ಕಾಣಿಸುವುದು ಕಾಂಗ್ರೆಸ್ ಮಾತ್ರ. ರಾಹುಲ್ ಗಾಂಧಿ ಅವರ ನಾಯಕತ್ವದ ಅಡಿಯಲ್ಲಿಯೇ ನಾವು ದೇಶಕ್ಕೆ ನಮ್ಮ ಸಂದೇಶವನ್ನು ಹಂಚುತ್ತೇವೆ. ರಾಹುಲ್ ಗಾಂಧಿ ಅವರು ಉತ್ಸಾಹ ಮತ್ತು ಬದ್ಧತೆಯಿಂದ ಮುಂಚೂಣಿಯಲ್ಲಿ ಪಕ್ಷವನ್ನು ಮುನ್ನಡೆಸಿದ್ದಾರೆ. ಮುಂದೆಯೂ ಅವರು ಪಕ್ಷಕ್ಕಾಗಿ ಶ್ರಮಿಸುತ್ತಾರೆ. ಅವರು ಧೈರ್ಯದಿಂದ ಸೋಲಿಗೆ ಸಂಪೂರ್ಣ ಹೊಣೆ ಹೊತ್ತುಕೊಂಡಿದ್ದಾರೆ. ಎಲ್ಲಿ ಯಾವುದು ತಪ್ಪಾಗಿದೆ ಎಂಬ ವಿಚಾರದಲ್ಲಿ ನಾವೆಲ್ಲರೂ ಜವಾಬ್ದಾರರು.
ಇನ್ನೂ 50 ವರ್ಷ ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷರಾಗಿರಲಿ ಎಂದ ಬಿಜೆಪಿ ನಾಯಕ
ಕೇರಳದಲ್ಲಿ ಕಮಲ ಅರಳಲಾರದು
ಕೇರಳದಲ್ಲಿ ಬಿಜೆಪಿ ಮುಂದೆಯೂ ನೆಲೆಯೂರಲು ಸಾಧ್ಯವಿಲ್ಲ ಎಂಬ ಆತ್ಮವಿಶ್ವಾಸ ನನಗಿದೆ. ಇತ್ತೀಚಿನ ಚುನಾವಣೆಗಳಲ್ಲಿ ಅವರು ಗಂಭೀರವಾಗಿ ದೊಡ್ಡ ಮೊತ್ತದ ಸಂಪನ್ಮೂಲವನ್ನು ವಿನಿಯೋಗಿಸಿದ್ದರೂ, ಅಂದರೆ ಮಾನವಶಕ್ತಿ ಹಾಗೂ ಆರ್ಥಿಕ ಶಕ್ತಿಯನ್ನು ಬಳಸಿದ್ದರೂ ಪಕ್ಷವು ತನ್ನ ಮತ ಗಳಿಕೆ ಪ್ರಮಾಣದಲ್ಲಿ ಅಲ್ಪ ಏರಿಕೆ ಕಾಣುವಷ್ಟರಲ್ಲಿಯೇ ಸಫಲವಾಯಿತು. ನನ್ನ ಕ್ಷೇತ್ರ ತಿರುವನಂತಪುರಂ ಹೊರತುಪಡಿಸಿ ಉಳಿದ ಅವರ ಎಲ್ಲ ಅಭ್ಯರ್ಥಿಗಳೂ ಮೂರನೇ ಸ್ಥಾನಗಳನ್ನು ಪಡೆದುಕೊಂಡರು. ಅತ್ಯಧಿಕ ಸುಶಿಕ್ಷಿತ ಮತದಾರರಿರುವ ಬೃಹತ್ ಕಾಸ್ಮೊಪೊಲಿಟನ್ ರಾಜ್ಯದಲ್ಲಿ ಬಿಜೆಪಿಯು ಕೋಮು ರಾಜಕೀಯ ಸಂದೇಶವನ್ನು ಬಿತ್ತಲು ಹೊರಟಿದ್ದು ವಿಫಲವಾಗಿದೆ ಎಂದು ತರೂರ್ ಹೇಳಿದರು.