ಸಾಹಿತ್ಯ ಹಬ್ಬದಲ್ಲಿ ರಾಹುಲ್ ಟೆಂಪಲ್ ರನ್ ಕಾರಣ ವಿವರಿಸಿದ ತರೂರ್
ನವದೆಹಲಿ, ಡಿಸೆಂಬರ್ 03: ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರು ಟೈಮ್ಸ್ ಲಿಟರೇಚರ್ ಫೆಸ್ಟ್ ನಲ್ಲಿ ತಮ್ಮ ಹೊಚ್ಚ ಹೊಸ ಪುಸ್ತಕದ ಬಗ್ಗೆ ಮಾತನಾಡಿದ್ದಲ್ಲದೆ, ರಾಹುಲ್ ಗಾಂಧಿ ಅವರು ಏಕೆ ದೇಗುಲದ ಸುತ್ತಾ ಸುತ್ತುತ್ತಿದ್ದಾರೆ ಎಂಬುದನ್ನು ವಿವರಿಸಿದರು.
ದೆಹಲಿಯಲ್ಲಿ ಆಯೋಜಿಸಲಾಗಿದ್ದ ಟೈಮ್ಸ್ ಲಿಟ್ ಫೆಸ್ಟ್ನಲ್ಲಿ ಭಾಗವಹಿಸಿದ್ದ ಶಶಿ ತರೂರ್ ಅವರು, ತಾವು ಬರೆದಿರುವ "The Paradoxical Prime Minister" ಬಗ್ಗೆ ಚರ್ಚೆ ನಡೆಸಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮನ್ನು ಶಿವಭಕ್ತ ಎಂದು ಹೇಳಿಕೊಂಡಿದ್ದು, ಸತತವಾಗಿ ದೇವಾಲಯಗಳಿಗೆ ಭೇಟಿ ಮತ್ತು ಇತ್ತೀಚೆಗೆ ಗೋತ್ರದ ಬಗ್ಗೆ ಅವರು ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಂಸದ ಶಶಿ ತರೂರ್ ವಿವರಿಸಿದರು.
"ಕಾಂಗ್ರೆಸ್ ಹೀಗೆ ಮಾಡುವುದರ ಅನಿವಾರ್ಯತೆ ಸೃಷ್ಟಿಸಿದ್ದು ಬಿಜೆಪಿ. ಬಿಜೆಪಿ ನಿಜವಾದ ಹಿಂದೂಗಳು ಮತ್ತು ನಾಸ್ತಿಕ- ಧರ್ಮನಿರಪೇಕ್ಷರು ಎಂದು ವಿಭಾಗಿಸಿ ಕದನ ಹುಟ್ಟಿಸಿದೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ತಮ್ಮ ವಾಸ್ತವ ಜೀವನವನ್ನು ಸಾರ್ವಜನಿಕವಾಗಿ ಬಿಚ್ಚಿಡಬೇಕಿದೆ" ಎಂದರು.
ರಾಹುಲ್ ಗಾಂಧಿ ಅವರ ದೇಗುಲ ಭೇಟಿಯನ್ನು ಸಮರ್ಥಿಸಿಕೊಂಡ ಶಶಿ ತರೂರ್,"ರಾಹುಲ್ ತಮ್ಮನ್ನು ಶಿವಭಕ್ತ ಎಂದು ಹೇಳಿಕೊಳ್ಳುತ್ತಾರೆ. ಅವರೇನು ಮಾತನಾಡುತ್ತಾರೆಂದು ಅವರಿಗೆ ಗೊತ್ತಿದೆ. ಆಧ್ಯಾತ್ಮದಲ್ಲಿ ರಾಹುಲ್ಗೆ ಆಳವಾದ ಜ್ಞಾನವಿದೆ. ಧರ್ಮ ಮತ್ತು ಆಧ್ಯಾತ್ಮದ ಬಗ್ಗೆ ಅತಿ ಹೆಚ್ಚು ತಿಳಿದುಕೊಂಡಿರುವ ಮತ್ತು ಈ ವಿಷಯದಲ್ಲಿ ಅತ್ಯಂತ ಚಿಂತನಶೀಲರಾಗಿರುವ ಭಾರತದ ರಾಜಕಾರಣಿಗಳಲ್ಲಿ ರಾಹುಲ್ ಕೂಡ ಒಬ್ಬರು" ಎಂದು ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪುಷ್ಕರ ನಗರದಲ್ಲಿ ಬ್ರಹ್ಮ ದೇವಾಲಯಕ್ಕೆ ಭೇಟಿ ನೀಡಿದ್ದ ರಾಹುಲ್, ತಮ್ಮದು ದತ್ತಾತ್ರೇಯ ಗೋತ್ರ ಹಾಗೂ ಕೌಲ ಬ್ರಾಹ್ಮಣಕ್ಕೆ ಸೇರಿದವರೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.