ಕೊಲೆಯಾದರಾ ಸುನಂದಾ ಪುಷ್ಕರ್? ರಹಸ್ಯ ವರದಿಯಲ್ಲಿ ಏನಿದೆ?
ನವದೆಹಲಿ, ಮಾರ್ಚ್ 12 : ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವಿಗೆ ತಿರುವು ದೊರೆತಿದ್ದು, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ರಹಸ್ಯ ವರದಿಯೊಂದು ಬಹಿರಂಗ ಪಡಿಸಿದೆ.
ಆ ವರದಿಯಲ್ಲಿ ತಿಳಿಸಿರುವ ಪ್ರಕಾರ, ಡಿಎನ್ ಎ ಪರೀಕ್ಷೆಯಿಂದ ಗೊತ್ತಾಗಿರುವಂತೆ, ತನಿಖಾಧಿಕಾರಿಗಳಿಗೆ ಆರಂಭದಿಂದಲೂ ಸಿನಂದಾ ಪುಷ್ಕರ್ ರನ್ನು ಕೊಲೆ ಮಾಡಿದ್ದು ಯಾರು ಎಂದು ಗೊತ್ತಿತ್ತು. ಆದರೆ ಈ ವರೆಗೆ ಅದನ್ನು ನಿಗೂಢವಾಗಿ ಇರಿಸಲಾಗಿದೆ.
ಕೊಲೆ ನಡೆದ ಸಂದರ್ಭದಲ್ಲಿ ಮೊದಲ ವರದಿ ಸಿದ್ಧಪಡಿಸಿದ ಆಗಿನ ಡೆಪ್ಯುಟಿ ಕಮಿಷನರ್ ಬಿಎಸ್ ಜೈಸ್ವಾಲ್, ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಮುಂದೆ ತಿಳಿಸಿದ್ದರು. "ಇದು ಆತ್ಮಹತ್ಯೆಯಲ್ಲ" ಎಂಬ ಅಭಿಪ್ರಾಯ ಹೊರ ಹಾಕಿದ್ದರು.
ಸುನಂದಾ ಪುಷ್ಕರ್ ಸಾವು ಅಸಹಜ : ದೆಹಲಿ ಹೈಕೋರ್ಟ್
ವಿಷ ಪ್ರಾಶನದಿಂದಲೇ ಸುನಂದಾ ಪುಷ್ಕರ್ ಸಾವು ಸಂಭವಿಸಿದೆ. ಸನ್ನಿವೇಶಗಳು ಕೂಡ ಅದನ್ನು ಪುಷ್ಟೀಕರಿಸುತ್ತಿವೆ. ಎಲ್ಲ ಗಾಯಗಳು ಬಲವಂತವಾಗಿ ಮಾಡಿರುವಂಥದ್ದು. ಇಂಜೆಕ್ಷನ್ ಚುಚ್ಚಿದ ಗುರುತು, ಹಲ್ಲಿನಿಂದ ಕಡಿದ ಗುರುತು ಹಾಗೂ ದೇಹದ ವಿವಿಧ ಭಾಗದಲ್ಲಿ ನಾನಾ ಸಮಯಕ್ಕೆ ಆದ ಗುರುತುಗಳು ಸಂಭವಿಸಿವೆ. ಅವುಗಳು ಹನ್ನೆರಡು ಗಂಟೆಯಿಂದ ನಾಲ್ಕು ದಿನದಷ್ಟು ಹಳೆಯವು ಎಂದು ಮರಣೋತ್ತರ ವರದಿಯಲ್ಲಿ ತಿಳಿಸಲಾಗಿತ್ತು.
ಶಶಿ ತರೂರ್- ಸುನಂದಾ ಪುಷ್ಕರ್ ಜಗಳ ಆಡಿದ್ದರು ಎಂದಿದ್ದ ಸಹಾಯಕ
ಆದರೆ, ಇಂಜೆಕ್ಷನ್ ಚುಚ್ಚಿದ ಗುರುತು ಹೊಸದಾಗಿ ಆಗಿರುವಂಥದ್ದು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ವೈಯಕ್ತಿಕ ಪರಿಚಾರಕ ನರೇನ್ ಸಿಂಗ್ ಹೇಳಿಕೆ ಪ್ರಕಾರ, ಶಶಿ ತರೂರ್ ಹಾಗೂ ಸುನಂದಾ ಪುಷ್ಕರ್ ಮಧ್ಯೆ ನಡೆದ ಜಗಳದಲ್ಲಿ ಈ ಗಾಯಗಳಾಗಿದ್ದವು. ಸುನಂದಾ ಪುಷ್ಕರ್ ಸಾವಿನ ವಿಚಾರ ಬಹಿರಂಗವಾದ ಮೊದಲ ದಿನದಿಂದಲೂ ಅದು ಕೊಲೆ ಎಂಬ ಗುಮಾನಿ ಇದ್ದೇ ಇದೆ.
ಕೊಲೆ ಎಂಬ ಕಡೆಗೆ ಎಲ್ಲ ವರದಿಗಳು ಬೊಟ್ಟು ಮಾಡುತ್ತಿವೆ
ಅಂದಹಾಗೆ ರಹಸ್ಯ ವರದಿಯಲ್ಲಿ ವಿವಿಧ ಮಾಹಿತಿಗಳಿವೆ. ಮರಣೋತ್ತರ ಪರೀಕ್ಷೆ, ರಾಸಾಯನಿಕ ಹಾಗೂ ಜೈವಿಕ- ಬೆರಳಚ್ಚು ಪರೀಕ್ಷೆ, ಡಿಎನ್ ಎ ಮಾಹಿತಿ ಪ್ರತ್ಯೇಕವಾಗಿದೆ. ಎಲ್ಲವೂ ಕೊಲೆ ಎಂಬುದರ ಕಡೆಗೆ ಬೊಟ್ಟು ಮಾಡುತ್ತಿದೆ. ಆದರೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಲ್ಲ.
ಕೈ ಕಚ್ಚಿದ ಹಾಗೂ ಇಂಜೆಕ್ಷನ್ ನೀಡಿದ ಗುರುತು
ಆಸಕ್ತಿಕರ ಅಂಶ ಏನೆಂದರೆ, ಸುನಂದಾ ಪುಷ್ಕರ್ ಕೈ ಮೇಲಿದ್ದ ಹಲ್ಲಿನಿಂದ ಕಡಿದ ಗುರುತು ಹಾಗೂ ಇಂಜೆಕ್ಷನ್ ಗುರುತನ್ನು ವರದಿಯಲ್ಲಿ ಪ್ರಶ್ನೆ ಮಾಡಲಾಗಿದೆ. ವಿಷವನ್ನು ಹಾಗೆ ನೀಡಲಾಗಿದೆಯಾ ಅಥವಾ ಇಂಜೆಕ್ಷನ್ ಮೂಲಕ ಕೊಟ್ಟಿದ್ದಾರಾ ಎಂಬ ವಿಚಾರದ ಬಗ್ಗೆ ತನಿಖೆ ಆಗಬೇಕು ಎಂದು ವರದಿ ಉಲ್ಲೇಖ ಮಾಡಿದೆ.
ಸುನಂದಾ ಪುಷ್ಕರ್ ರನ್ನು ಕೊಂದವರು ಯಾರು?
ಜನವರಿ 17, 2014ರಂದು ಸುನಂದಾ ಪುಷ್ಕರ್ ಹೋಟೆಲ್ ಲೀಲಾ ಪ್ಯಾಲೇಸ್ ನ ಕೋಣೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ದೊರೆತಿತ್ತು. ಅದಕ್ಕೂ ಎರಡು ದಿನ ಮೊದಲು ಆಕೆ ಹೋಟೆಲ್ ರೂಮಿಗೆ ಬಂದಿದ್ದರು ಎಂಬುದು ತಿಳಿದುಬಂದಿತ್ತು. ಆಕೆ ಪತ್ರಿಕಾಗೋಷ್ಠಿ ಕರೆಯಬೇಕು ಎಂದಿದ್ದರು. ಆದರೆ ಅಷ್ಟರಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದೀಗ ಪ್ರಶ್ನೆ ಏನೆಂದರೆ, ಸುನಂದಾ ಪುಷ್ಕರ್ ರನ್ನು ಕೊಂದವರು ಯಾರು?