ಶಾಹೀನ್ಬಾಗ್ ನಲ್ಲಿ ಗುಂಡು ಹಾರಿಸಿದವ ಎಎಪಿ ಸದಸ್ಯ: ಪೊಲೀಸ್
ನವದೆಹಲಿ, ಫೆಬ್ರವರಿ 04: ದೆಹಲಿಯ ಶಾಹೀನ್ ಬಾಗ್ನಲ್ಲಿ ಸಿಎಎ-ಎನ್ಆರ್ಸಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದವ ಎಎಪಿ ಸದಸ್ಯ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಜಾಮಿಯಾ ವಿವಿ ವಿದ್ಯಾರ್ಥಿಗಳ ಮೇಲೆ ನಡುರಸ್ತೆಯಲ್ಲಿ ರಾಮಭಕ್ತ ಗೋಪಾಲ ಎಂಬ ಯುವಕ ಗುಂಡು ಹಾರಿಸಿದ ನಂತರ ಶಾಹೀನ್ ಬಾಗ್ನ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲಾಗಿತ್ತು. ಆತನನ್ನು ಪೊಲೀಸರು ಬಂಧಿಸಿದ್ದರು.
ಪ್ರಾಥಮಿಕ ವಿಚಾರಣೆ ಬಳಿಕ ಆತನ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, 'ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಕಳೆದ ಶನಿವಾರ ಗುಂಡು ಹಾರಿಸಿದ ಕಪಿಲ್ ಗುಜ್ಜರ್ ಎಎಪಿ ಸದಸ್ಯ' ಎಂದಿದ್ದಾರೆ.
ಶನಿವಾರದಂದು ಕಪಿಲ್ ಗುಜ್ಜರ್ ಎಂಬ 26 ರ ಯುವಕ 'ಜೈ ಶ್ರೀರಾಮ್' ಎಂದು ಘೋಷಣೆಗಳನ್ನು ಕೂಗುತ್ತಾ, 'ನಮ್ಮ ದೇಶದಲ್ಲಿ ಕೇವಲ ಹಿಂದೂಗಳದ್ದೇ ಸಾರ್ವಭೌಮತ್ವ, ಇಲ್ಲಿ ನಮ್ಮದು ಮಾತ್ರ ನಡೆಯುತ್ತದೆ' ಎಂದು ಹೇಳುತ್ತಾ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಕೂಡಲೇ ಆತನನ್ನು ಪೊಲೀಸರು ಬಂಧಿಸಿದ್ದರು.
ಕಪಿಲ್ ಗುಜ್ಜರ್ ಮತ್ತು ಆತನ ತಂದೆ ಒಂದು ವರ್ಷದ ಹಿಂದೆ ಎಎಪಿ ಸೇರಿದ್ದರು. ಕಪಿಲ್ ಮೊಬೈಲ್ನಲ್ಲಿ ಸಹ ಎಎಪಿ ಪರವಾದ ಹಲವಾರು ಚಿತ್ರಗಳು ಇದ್ದು, ಎಎಪಿ ಮುಖಂಡರಾದ ಅತಿಶಿ, ಸಂಜಯ್ ಸಿಂಗ್ ಅವರೊಂದಿಗಿನ ಚಿತ್ರಗಳೂ ಇವೆ ಎಂದು ಪೊಲೀಸರು ಹೇಳಿದ್ದಾರೆ.