ಸಿಎಎ ಪ್ರತಿಭಟನಾಕಾರರು ಕೊಲೆಗಾರರು, ಅತ್ಯಾಚಾರಿಗಳು: ಬಿಜೆಪಿ ಸಂಸದ
ನವದೆಹಲಿ, ಜನವರಿ 28: ಸಿಎಎ-ಎನ್ಆರ್ಸಿ ವಿರುದ್ಧ ಪ್ರತಿಭಟನೆಯನ್ನು ಹೇಗಾದರೂ ಮಾಡಿ ಹತ್ತಿಕ್ಕಲು ಬಿಜೆಪಿ ಯತ್ನಿಸುತ್ತಿದೆ. ಯಾವ ಮಟ್ಟಕ್ಕೆಂದರೆ ಪ್ರತಿಭಟನಾಕಾರರ ವೈಯಕ್ತಿಕ ತೇಜೋವಧೆ, ಸುಳ್ಳು ಸುದ್ದಿಗಳನ್ನು ಹರಡಿಯಾದರೂ ಪ್ರತಿಭಟನಾಕಾರರ ಬಗ್ಗೆ ತಪ್ಪು ಸಂದೇಶ ರವಾನೆಯಾಗುವ ಪ್ರಯತ್ನ ಮಾಡಲಾಗುತ್ತಿದೆ.
ಬಿಜೆಪಿಯ ಈ ಪ್ರಯತ್ನಕ್ಕೆ ಹೊಸ ಹೇಳಿಕೆಯೊಂದು ಸೇರ್ಪಡೆಯಾಗಿದ್ದು, 'ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ಕೊಲೆಗಾರರು, ಅತ್ಯಾಚಾರಿಗಳು' ಎಂದು ಬಿಜೆಪಿ ಸಂಸದರೊಬ್ಬರು ಹೇಳಿ ವಿವಾದ ಎಬ್ಬಿಸಿದ್ದಾರೆ.
ಅಮಿತ್ ಶಾ ಮುಂದೆಯೇ ವಿದ್ಯಾರ್ಥಿಗೆ ಥಳಿಸಿದ ಬಿಜೆಪಿ ಕಾರ್ಯಕರ್ತರು
ದೆಹಲಿಯ ಶಹೀನ್ ಬಾಗ್ ಮೈದಾನದಲ್ಲಿ ಸಿಎಎ-ಎನ್ಆರ್ಸಿ ವಿರುದ್ಧ ಪ್ರತಿಭಟನೆ ಸತತವಾಗಿ ನಡೆಯುತ್ತಿದೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, 'ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇವಲ ಒಂದು ಗಂಟೆಯಲ್ಲಿ ಶಾಹೀನ್ ಬಾಗ್ನ ಪ್ರತಿಭಟನಾಕಾರರನ್ನು ಹೊಡೆದು ಆಚೆಗೆ ಕಳುಹಿಸಿತ್ತೀವಿ' ಎಂದಿದ್ದಾರೆ.
ಪ್ರತಿಭಟನಾಕಾರರು ಕೊಲೆಗಾರರು, ಅತ್ಯಾಚಾರಿಗಳು ಎಂದಿರುವ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, 'ಅವರು (ಪ್ರತಿಭಟನಾಕಾರರು) ನಿಮ್ಮ ಮನೆಗಳಿಗೆ ನುಗ್ಗುತ್ತಾರೆ, ನಿಮ್ಮ ಅಕ್ಕ-ತಂಗಿ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಾರೆ' ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
'ದೆಹಲಿ ವಿಧಾನಸಭೆ ಚುನಾವಣೆ ಸಾಮಾನ್ಯ ಚುನಾವಣೆ ಅಲ್ಲ, ಇದು ದೇಶದ ಒಗ್ಗಟ್ಟನ್ನು ಪರೀಕ್ಷೆಗೆ ಹಚ್ಚಿರುವ ಚುನಾವಣೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದೇ ಗಂಟೆಯಲ್ಲಿ ಶಾಹೀನ್ ಬಾಗ್ ಅನ್ನು ಖಾಲಿ ಮಾಡಿಸುತ್ತೇವೆ, ಅಲ್ಲದೆ ಸರ್ಕಾರದ ಜಮೀನಿನಲ್ಲಿ ಒಂದೂ ಮಸೀದಿ ಇರಲು ಬಿಡುವುದಿಲ್ಲ' ಎಂದಿದ್ದಾರೆ.
ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್, ಕಾಂಗ್ರೆಸ್ನ ಶಶಿ ತರೂರ್, ಸಿಪಿಐಎಂ ನ ಸೀತಾರಾಂ ಯೆಚೂರಿ ಸೇರಿ ಹಲವು ಮುಖಂಡರು ಭಾಗವಹಿಸಿದ್ದಾರೆ.
'ಲಕ್ಷಾಂತರ ಜನರು ಅಲ್ಲಿ ಸೇರಿದ್ದಾರೆ (ಶಾಹೀನ್ ಬಾಗ್) ಅವರು ಮನೆಗಳಿಗೆ ನುಗ್ಗಿ ಅತ್ಯಾಚಾರ, ಕೊಲೆ ಮಾಡಬಹುದು, ಈಗಲೇ ಎಚ್ಚೆತ್ತುಕೊಳ್ಳಿ ಇಲ್ಲವಾದರೆ ನಾಳೆ ಅಮಿತ್ ಶಾ, ಪ್ರಧಾನಿ ಮೋದಿ ನಿಮ್ಮನ್ನು ಕಾಪಾಡಲು ಬರುವುದಿಲ್ಲ' ಎಂದು ಎಚ್ಚರಿಕೆಯನ್ನು ಸಂಸದ ನೀಡಿದ್ದಾರೆ. ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.