ಶಾಹಿನ್ ಬಾಗ್-ಅಮಿತ್ ಶಾ ನಿವಾಸದತ್ತ ಸಿಎಎ ವಿರೋಧಿ ಹೋರಾಟಗಾರರು
ನವದೆಹಲಿ, ಫೆಬ್ರವರಿ.16: ರಾಷ್ಟ್ರ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ನೂರಾರು ಮಹಿಳಾ ಹೋರಾಟಗಾರರು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದತ್ತ ಹೊರಟಿದ್ದಾರೆ.
ಕಳೆದ ಗುರುವಾರ ಮಾತನಾಡಿದ್ದ ಅಮಿತ್ ಶಾ, ಪೌರತ್ವ ತಿದ್ದುಪಡಿ ವಿಚಾರದಲ್ಲಿ ಕೇಂದ್ರ ಸರ್ಕಾರವು ಯಾವುದೇ ರೀತಿ ರಾಜಿ ಮಾಡಿಕೊಳ್ಳುವುದಿಲ್ಲ. ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ನಿಮಗೆ ಅನುಮಾನಗಳು ಇದ್ದಲ್ಲಿ ನೇರವಾಗಿ ನಮ್ಮ ಮನೆಗೆ ಬನ್ನಿ, ನಾನೇ ಉತ್ತರ ನೀಡುತ್ತೇನೆ ಎಂದು ಆಹ್ವಾನ ನೀಡಿದ್ದರು.
ದೆಹಲಿಯಲ್ಲಿ ಬಿಜೆಪಿಯ ಹೀನಾಯ ಸೋಲಿನ ಹಿಂದಿನ ಸತ್ಯ ಬಹಿರಂಗ
ಕೇಂದ್ರ ಸಚಿವ ಅಮಿತ್ ಶಾ ನೀಡಿದ ಆಹ್ವಾನದ ಹಿನ್ನೆಲೆಯಲ್ಲಿ ಶಾಹಿನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ನೂರಾರು ಮಹಿಳಾ ಪ್ರತಿಭಟನಾಕಾರರು ಭಾನುವಾರ ಗೃಹ ಸಚಿವರ ನಿವಾಸಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
500 ಮೀಟರ್ ದೂರದಲ್ಲೇ ಮೆರವಣಿಗೆಗೆ ತಡೆ:
ಕೇಂದ್ರ ಸಚಿವ ಅಮಿತ್ ಶಾ ನಿವಾಸದತ್ತೆ ಹೊರಟ ಪ್ರತಿಭಟನಾ ಮೆರವಣಿಗೆಯನ್ನು ಅವರ ನಿವಾಸದಿಂದ 500 ಮೀಟರ್ ದೂರದಲ್ಲೇ ಪೊಲೀಸರು ತಡೆದಿದ್ದಾರೆ. ಮುಖ್ಯವಾಗಿ ಕೆಲವರಿಗೆ ಬೇಕಿದ್ದಲ್ಲಿ ಚರ್ಚೆ ನಡೆಸಲು ಅವಕಾಶ ನೀಡಲಾಗುತ್ತದೆ. ಅಮಿತ್ ಶಾ ಅವರ ನಿವಾಸಕ್ಕೆ ತೆರಳಲು ಒಂದು ತಂಡಕ್ಕೆ ಅನುಮತಿ ನೀಡಲು ಒಪ್ಪಿಗೆ ಸೂಚಿಸಲಾಯಿತು. ಆದರೆ, ಪ್ರತಿಭಟನಾನಿರತರೆಲ್ಲ ಒಟ್ಟಾಗಿ ತೆರಳುವುದಾಗಿ ಪಟ್ಟು ಹಿಡಿದಿದ್ದರಿಂದ ಅವರನ್ನು ತಡೆ ಹಿಡಿಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾವುದೇ ಚುನಾವಣೆಯಾಗಲಿ, ಒಂದು ವಿಚಾರದ ಮೇಲಷ್ಟೇ ತೀರ್ಮಾನವಾಗುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಇಂದಿಗೂ ತನ್ನ ನಿಲುವಿಗೆ ಬದ್ಧವಾಗಿದೆ. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಷ್ಟಾದರೂ ಪ್ರತಿಭಟನೆ ಮಾಡಿಕೊಳ್ಳಲಿ. ಕೇಂದ್ರ ಸರ್ಕಾರ ಮಾತ್ರ ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡುವುದಿಲ್ಲ ಎಂದು ಅಮಿತ್ ಶಾ ಗುಡುಗಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿಚಾರದಲ್ಲಿ ಕೇಂದ್ರ ಸರ್ಕಾರವು ಯಾವುದೇ ರಾಜಿಗೆ ಸಿದ್ಧವಿಲ್ಲ. ಸಿಎಎ ವಿರುದ್ಧ ಚರ್ಚೆ ನಡೆಸಲು ಯಾರೇ ಬರಲಿ. ನಮ್ಮ ಕಚೇರಿಯಲ್ಲೇ ಚರ್ಚೆಗೆ 3 ದಿನಗಳಲ್ಲೇ ಅವಕಾಶ ಕಲ್ಪಿಸಿ ಕೊಡುತ್ತೇವೆ. ಅವರ ಅನುಮಾನಗಳಿಗೆ ನಾವೇ ಉತ್ತರ ನೀಡುತ್ತೇನೆ ಎಂದು ತಿಳಿಸಿದ್ದರು.
ಇನ್ನು, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಾಗಿನಿಂದ ಈವರೆಗೂ 74 ಮಂದಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಪಾಕಿಸ್ತಾನದಿಂದ ವಲಸೆ ಬಂದಿದ್ದ 74 ಮಂದಿಗೆ ಭಾರತೀಯ ಪೌರತ್ವವನ್ನು ಸಿಎಎ ಅಡಿಯಲ್ಲಿ ನೀಡಲಾಗಿದೆ. ಕಳೆದ 2019ರ ಡಿಸೆಂಬರ್.12ರಂದು ಸಂಸತ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿತ್ತು.