ಶಹೀನ್ ಬಾಗ್ ಪ್ರತಿಭಟನೆ: 150 ಕೋಟಿ ರೂ. ನಷ್ಟ, ಉದ್ಯೋಗ ಕಳೆದುಕೊಂಡ ಕಾರ್ಮಿಕರು
ನವದೆಹಲಿ, ಫೆಬ್ರವರಿ 22: ಕಳೆದ 70 ದಿನಗಳಿಂದ ಮುಚ್ಚಲಾಗಿದ್ದ ಆಗ್ನೇಯ ದೆಹಲಿಯ ಶಹೀನ್ ಬಾಗ್ನ ರಸ್ತೆಯನ್ನು ಶನಿವಾರ ಭಾಗಶಃ ತೆರೆಯಲಾಗಿತ್ತು. ಕಲಿಂದಿ ಕುಂಜ್ ಉದ್ಯಾನದ ಸಮೀಪದ ಪೊಲೀಸ್ ಬ್ಯಾರಿಕೇಡ್ಗಳನ್ನ ಪ್ರತಿಭಟನಾಕಾರರು ತೆರವುಗೊಳಿಸಿದ್ದಾರೆ.
ಪ್ರತಿಭಟನಾಕಾರರು ಗುಂಪು ಕಲಿಂದಿ ಕುಂಜ್-ನೋಯ್ಡಾ ಮಾರ್ಗವನ್ನು ಮುಕ್ತಗೊಳಿಸಿದ್ದು, ಜಾಮಿಯಾ, ಆಶ್ರಮ, ಓಖ್ಲಾ, ಬಾಟ್ಲಾ ಹೌಸ್ ಕಡೆ ಓಡಾಡುವವರು 9ನೇ ಸಂಖ್ಯೆಯ ರಸ್ತೆಯಿಂದ ನೋಯ್ಡಾ ಮತ್ತು ಫರಿದಾಬಾದ್ಗೆ ತೆರಳಬಹುದು ಎಂದು ತಿಳಿಸಿದ್ದಾರೆ.
ಪ್ರತಿಭಟನೆ ಆರಂಭವಾದ ಸಂದರ್ಭದಿಂದಲೂ ಪೊಲೀಸರು ಪ್ರತಿಭಟನಾ ಸ್ಥಳದಿಂದ ಸುಮಾರು 300 ಮೀಟರ್ ದೂರದಲ್ಲಿರುವ ಈ ಮಾರ್ಗವನ್ನು ಬಂದ್ ಮಾಡಿದ್ದರು. ಈಗ ಈ ಮಾರ್ಗವನ್ನು ಸಂಚಾರಮುಕ್ತಗೊಳಿಸಿರುವುದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ದೆಹಲಿಯ ಶಹೀನ್ ಬಾಗ್ ಭಾಗದ ವಾಣಿಜ್ಯ ಶೋರೂಂಗಳು ಮತ್ತು ಚಿಲ್ಲರೆ ವ್ಯಾಪಾರ ಮಳಿಗೆಗಳು ಡಿಸೆಂಬರ್ನಿಂದ ಇಲ್ಲಿಯವರೆಗೂ ಅಂದಾಜು 150 ಕೋಟಿ ರೂ. ನಷ್ಟ ಅನುಭವಿಸಿವೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
150 ಕೋಟಿ ರೂ. ನಷ್ಟ
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಶಹೀನ್ ಬಾಗ್ನಲ್ಲಿ ಎರಡೂವರೆ ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದ್ದು, ಇದರಿಂದಾಗಿ ಸರಿಸುಮಾರು 250 ಅಂಗಡಿ ಮಳಿಗೆಗಳನ್ನು ಮುಚ್ಚಲಾಗಿದೆ. ಇಲ್ಲಿ ವ್ಯಾಪಾರ ನಂಬಿದ್ದ 3,000ಕ್ಕೂ ಹೆಚ್ಚು ಕೆಲಸಗಾರರಲ್ಲಿ ಹೆಚ್ಚಿನವರು ಕೆಲಸವಿಲ್ಲದೆ ಪರದಾಡುವಂತಾಗಿದೆ ಎಂದು ಮಾರುಕಟ್ಟೆ ಸಂಘಟನೆಯ ಸದಸ್ಯರು ತಿಳಿಸಿದ್ದಾರೆ.
ಬೆಂಬಲವಿದೆ, ಆದರೆ...
'ನಾವು ಸಂಧಾನಕಾರರನ್ನು ಭೇಟಿ ಮಾಡಲು ಬಯಸಿದ್ದೇವೆ. ಆದರೆ ವೈಯಕ್ತಿಕವಾಗಿ. ಇಡೀ ಮಾರುಕಟ್ಟೆ ಸುಮಾರು 150 ಕೋಟಿ ರೂ ನಷ್ಟ ಅನುಭವಿಸಿದೆ. ನಾವು ಸಿಎಎ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸುತ್ತೇವೆ. ಆದರೆ ಇದು ಅಂಗಡಿ ಮಾಲೀಕರು ಮತ್ತು ಅವರ ಕೆಲಸಗಾರರಿಗೆ ತೀವ್ರ ತೊಂದರೆಯುಂಟುಮಾಡಿದೆ' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಾರುಕಟ್ಟೆ ಸಂಘಟನೆಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಸಂಕಟ ಅನುಭವಿಸುತ್ತಿರುವುದು ನಾವು
'ಪ್ರತಿಭಟನಾಕಾರರನ್ನು ಭೇಟಿ ಮಾಡಿ ರಾಜಿ ವ್ಯವಹಾರ ನಡೆಸಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ. ಇದು ಪ್ರತಿಭಟನಾಕಾರರು ಮತ್ತು ಸರ್ಕಾರ ನಡುವಿನ ಜಗಳ. ಆದರೆ ಸಂಕಟ ಅನುಭವಿಸುತ್ತಿರುವವರು ನಾವು. ಯಾರಾದರೂ ನಮ್ಮ ಬಗ್ಗೆಯೂ ಚಿಂತೆ ಮಾಡಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ಪ್ರತಿಭಟನಾಕಾರರು ಬೇರೆ ಎಲ್ಲಿಗಾದರೂ ಸ್ಥಳಾಂತರವಾಗಲಿ' ಎಂದು ಅವರು ಬೇಸರ ಹೊರಹಾಕಿದ್ದಾರೆ.
ಎರಡು ತಿಂಗಳ ಬಳಿಕ ನೋಯ್ಡಾ-ಫರಿದಾಬಾದ್ ರಸ್ತೆ ಸಂಚಾರಕ್ಕೆ ಮುಕ್ತ
ಮಾಲೀಕರು, ಕಾರ್ಮಿಕರು ಕಂಗಾಲು
ಜವಳಿ ಮಳಿಗೆಗಳು, ಕ್ರೀಡಾ ಅಂಗಡಿಗಳು ಮತ್ತು ಇತರೆ ವಿವಿಧ ಬ್ರ್ಯಾಂಡ್ಗಳ ಚಿಲ್ಲರೆ ಮಾರಾಟ ಮಳಿಗೆಗಳು ಈ ಪ್ರದೇಶದಲ್ಲಿವೆ. ಪ್ರತಿಭಟನೆ ಆರಂಭವಾದ ದಿನದಿಂದಲೂ ಇಲ್ಲಿ ಮಳಿಗೆಗಳನ್ನು ಬಂದ್ ಮಾಡುವುದು ಅನಿವಾರ್ಯವಾಗಿದೆ. ಇದರಿಂದ ವ್ಯಾಪಾರವಿಲ್ಲದೆ ಅಂಗಡಿ ಮಾಲೀಕರು ಕಂಗಾಲಾಗಿದ್ದರೆ, ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಉದ್ಯೋಗವಿಲ್ಲದೆ ಪರದಾಡುವಂತಾಗಿದೆ.
ಸಿಎಎ ವಿರೋಧಿ ಹೋರಾಟ: ಶಾಹಿನ್ ಬಾಗ್ ನಲ್ಲಿ ತ್ರಿಮೂರ್ತಿಗಳ ಸಂಧಾನಸೂತ್ರ
ಕೆಲವೇ ದಿನಗಳಲ್ಲಿ ಅಂಗಡಿ ಬಂದ್
ಡಿಸೆಂಬರ್ನಲ್ಲಿ ಶಹೀನ್ ಬಾಗ್ನಲ್ಲಿ ಪ್ರತಿಭಟನೆ ಆರಂಭವಾಗುವ ಕೆಲವು ದಿನಗಳ ಮುಂಚೆಯಷ್ಟೇ ಒಳಾಂಗಣ ವಿನ್ಯಾಸ ವಸ್ತುಗಳ ವ್ಯಾಪಾರವನ್ನು ಆರಂಭಿಸಿದ್ದ ಬಿಹಾರ ಮೂಲದ ಕಾಶಿಫ್, ಪ್ರತಿಭಟನೆಯಿಂದ ತೀವ್ರ ನಷ್ಟ ಅನುಭವಿಸಿದ್ದಾರೆ. 'ಅಂಗಡಿ ಉದ್ಘಾಟನೆ ಮಾಡಿದ ಕೆಲವೇ ದಿನಗಳಲ್ಲಿ ಅದನ್ನು ಮುಚ್ಚುವಂತಾಯಿತು' ಎಂದು ಅವರು ಅಳಲು ತೋಡಿಕೊಂಡರು.
ಎರಡೂವರೆ ತಿಂಗಳಿಂದ ವ್ಯಾಪಾರವಿಲ್ಲದೆ ಇದ್ದರೂ ಅಂಗಡಿ ಬಾಡಿಗೆ ಮತ್ತು ತಮ್ಮ ಮನೆ ಬಾಡಿಗೆಗೆ ಹಣ ಹೊಂದಿಸಿಕೊಳ್ಳುವ ಸಂಕಷ್ಟದಲ್ಲಿ ಇದ್ದಾರೆ. 'ನನ್ನ ಅಂಗಡಿಯಲ್ಲಿ ಮೂವರು ಕೆಲಸಗಾರರು ಇದ್ದರು. ಈಗ ಅವರಿಗೆ ಸಣ್ಣ ಮೊತ್ತದ ಹಣ ನೀಡುತ್ತಿದ್ದೇನೆ. ಅವು ಹೇಗೋ ದೈನಂದಿನ ಖರ್ಚುವೆಚ್ಚ ನಿಭಾಯಿಸಿಕೊಳ್ಳುತ್ತಿದ್ದಾರೆ' ಎಂದು ಕಾಶಿಫ್ ಹೇಳಿದ್ದಾರೆ.
ಬದುಕು ಪಣವಾಗಿಟ್ಟು ಬೆಂಬಲಿಸುವುದಿಲ್ಲ
'ಸಿಎಎ ಮತ್ತು ಎನ್ಆರ್ಸಿ ವಿಚಾರ ಸುಪ್ರೀಂಕೋರ್ಟ್ನಲ್ಲಿದೆ. ಎಲ್ಲರೂ ಸುಪ್ರೀಂಕೋರ್ಟ್ನ ಮಾತನ್ನು ಗೌರವಿಸಬೇಕು. ಪ್ರತಿಭಟನೆಯನ್ನು ಬೇರೆಲ್ಲಿಗಾದರೂ ಸ್ಥಳಾಂತರಿಸಬೇಕು. ನಾನು ಈ ಹೋರಾಟವನ್ನು ಬೆಂಬಲಿಸುತ್ತೇನೆ. ಆದರೆ ನನ್ನ ಜೀವನೋಪಾಯವನ್ನು ಪಣವಾಗಿಟ್ಟು ಅಲ್ಲ. ದಿನದಿಂದ ದಿನಕ್ಕೆ ನಮ್ಮ ಪರಿಸ್ಥಿತಿ ಹದಗೆಡುತ್ತಿದೆ' ಎಂದು ಶೋರೂಂ ಒಂದರ ಮ್ಯಾನೇಜರ್ ಆಗಿ ತಿಂಗಳಿಗೆ 20,000-25,000 ರೂ. ಸಂಪಾದಿಸುತ್ತಿದ್ದ ಶಬ್ಬೀರ್ ಅಹ್ಮದ್ ಹೇಳಿದರು.
ಹಿತಾಸಕ್ತಿ ತ್ಯಾಗ ದೊಡ್ಡದಲ್ಲ
'ಕೆಲಸಗಾರರ ಉದ್ಯೋಗ ನಷ್ಟದ ಬಗ್ಗೆ ನಮಗೆಲ್ಲರಿಗೂ ಕಾಳಜಿ ಇದೆ. ಅವರ ಬಗ್ಗೆ ಅನುಕಂಪವಿದೆ. ಆದರೆ 135 ಕೋಟಿ ಜನರ ಹಕ್ಕುಗಳ ರಕ್ಷಣೆ ವಿಚಾರ ಬಂದಾಗ 200 ಜನರ ಹಿತಾಸಕ್ತಿಯನ್ನು ತ್ಯಾಗ ಮಾಡಬಹುದು. ಉದ್ಯೋಗ ನಷ್ಟ ಸಣ್ಣ ಸಂಗತಿ. ಆದರೆ ಜನರ ಪೌರತ್ವವನ್ನು ಕಸಿದುಕೊಳ್ಳುವುದು ಇನ್ನೂ ದೊಡ್ಡ ಕಳವಳದ ಸಂಗತಿ. ನಾವೆಲ್ಲರೂ ಭಾರತದ ಸಂವಿಧಾನವನ್ನು ರಕ್ಷಿಸುತ್ತಿದ್ದೇವೆ' ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಹಿಲಾಲ್ ಮದನಿ ಹೇಳಿದರು.