ಬಿಜೆಪಿಗೆ ಸಿಕ್ಕಿದ ಬಲ: ಪಕ್ಷಕ್ಕೆ ನೂರಾರು ಸಿಎಎ ವಿರೋಧಿ ಮುಸ್ಲಿಂ ಪ್ರತಿಭಟನಾಕಾರರ ಸೇರ್ಪಡೆ
ನವದೆಹಲಿ, ಆಗಸ್ಟ್ 17: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಶಹೀನ್ ಬಾಗ್ನಲ್ಲಿ ಸುದೀರ್ಘ ಹೋರಾಟ ನಡೆಸಿದ್ದ ಶಹಜಾದ್ ಅಲಿ ಮತ್ತು ಅನೇಕ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಭಾನುವಾರ ದೆಹಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಆದೇಶ ಗುಪ್ತಾ ಹಾಗೂ ಮುಖಂಡ ಶ್ಯಾಮ್ ಜಾಜು ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರಿಕೊಂಡರು.
ಬಳಿಕ ಮಾತನಾಡಿದ ಶಹಜಾದ್ ಅಲಿ, 'ಬಿಜೆಪಿ ನಮ್ಮ ಶತ್ರುಗಳು ಎಂದು ಭಾವಿಸಿರುವ ನಮ್ಮ ಸಮುದಾಯದ ಜನರ ನಂಬಿಕೆಯು ತಪ್ಪು ಎಂದು ಸಾಬೀತುಪಡಿಸುವ ಸಲುವಾಗಿ ನಾನು ಬಿಜೆಪಿ ಸೇರಿಕೊಂಡಿದ್ದೇನೆ. ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಕುರಿತಾದ ಕಳವಳಗಳ ಬಗ್ಗೆ ನಾವು ಒಟ್ಟಿಗೆ ಕುಳಿತು ಚರ್ಚಿಸುತ್ತೇವೆ ಎಂದು ತಿಳಿಸಿದ್ದಾರೆ.
ಸಿಎಎ ಸಮಾವೇಶದ ವೇಳೆ ಕೊಲೆ ಯತ್ನ; ನಾಲ್ವರಿಗೆ ಜಾಮೀನು
ಪಕ್ಷವು ಎಲ್ಲ ಮುಸ್ಲಿಂ ಸಹೋದರರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವ ಬಯಕೆ ಹೊಂದಿದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ ಗುಪ್ತಾ ಹೇಳಿದ್ದಾರೆ. ಮುಂದೆ ಓದಿ.
ಹೆಚ್ಚಿನ ಮಹಿಳೆಯರು ಸೇರ್ಪಡೆ
ಇಂದು ನೂರಕ್ಕೂ ಹೆಚ್ಚು ಮುಸ್ಲಿಂ ಸಹೋದರರು, ಬಿಜೆಪಿಯಲ್ಲಿ ಮುಸ್ಲಿಮರ ಕುರಿತು ತಾರತಮ್ಯವಿಲ್ಲ ಎಂಬುದನ್ನು ಅರಿತುಕೊಂಡ ಬಳಿಕ ಪಕ್ಷ ಸೇರ್ಪಡೆಯಾಗಿದ್ದಾರೆ. ನಾವು ಅವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಬಯಸಿದ್ದೇವೆ. ತ್ರಿವಳಿ ತಲಾಕ್ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ನಿರ್ಧಾರಗಳನ್ನು ಗಮನಿಸಿ ಪಕ್ಷವನ್ನು ಸೇರಿಕೊಂಡ ಎಲ್ಲ ಮಹಿಳೆಯರನ್ನೂ ಅಭಿನಂದಿಸುತ್ತೇನೆ ಎಂದು ಆದೇಶ್ ಗುಪ್ತಾ ಹೇಳಿದ್ದಾರೆ.
ರಾಷ್ಟ್ರೀಯತೆ ಸಾಬೀತುಪಡಿಸಬೇಕಿಲ್ಲ
ಸಿಎಎ ಕುರಿತು ಮಾತನಾಡುವ ಸಂದರ್ಭದಲ್ಲಿ ಕೆಲವು ರಾಜಕೀಯ ಪಕ್ಷಗಳು ಮುಸ್ಲಿಂ ಸಮುದಾಯವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದವು. ಆದರೆ ಈಗ ದೇಶದ ಪ್ರತಿಯೊಬ್ಬ ಮುಸ್ಲಿಮರಿಗೂ ಯಾವುದನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ ಎಂಬುದು ಗೊತ್ತಾಗಿದೆ. ಯಾರೂ ಕೂಡ ಮತದಾನ ಮತ್ತು ರಾಷ್ಟ್ರೀಯತೆಯ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂದು ಬಿಜೆಪಿ ಮುಖಂಡ ಶ್ಯಾಮ್ ಜಾಜು ಹೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ ವಿದ್ಯಾರ್ಥಿನಿ ಅಮೂಲ್ಯ ಹೊರಕ್ಕೆ
ಬಿಜೆಪಿಯಿಂದ ಮಾತ್ರ ನ್ಯಾಯ
ಶಹೀನ್ ಬಾಗ್ನಲ್ಲಿ ನಡೆದ ಪ್ರತಿಭಟನೆ ವೇಳೆ ಹಾಜರಿದ್ದ ಅಪಾರ ಸಂಖ್ಯೆಯ ಮುಸ್ಲಿಮರು, ಈ ಪಕ್ಷದ ಮೂಲಕ ಮಾತ್ರವೇ ನ್ಯಾಯ ಸಿಗಲಿದೆ ಎನ್ನುವುದನ್ನು ಅರಿತುಕೊಂಡ ನಂತರ ಇಂದು ಬಿಜೆಪಿಯನ್ನು ಸೇರಲು ಮುಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾಯ್ದೆ ಬಂದರೂ ಹಾನಿಯಿಲ್ಲ
ನಮ್ಮ ಪ್ರತಿಭಟನೆ ನಡೆದಿದ್ದು ಯಾವುದೇ ಪಕ್ಷದ ವಿರುದ್ಧ ಅಲ್ಲ, ಸಿಎಎ ವಿರುದ್ಧ ಮಾತ್ರ. ನಾನು ಈ ಕಾಯ್ದೆಯ ಪರವೂ ಇಲ್ಲ, ವಿರುದ್ಧವೂ ಇಲ್ಲ. ಏಕೆಂದರೆ ಆ ಕಾಯ್ದೆ ಬಂದರೂ, ಬಾರದಿದ್ದರೂ ದೇಶದ ಜನರಿಗೆ ಯಾವುದೇ ಹಾನಿಯಾಗುವುದಿಲ್ಲ. ನಾವು ಈ ಸಮಯದಲ್ಲಿ ದೇಶ ಎದುರಿಸುತ್ತಿರುವ ದೊಡ್ಡ ಬಿಕ್ಕಟ್ಟುಗಳ ಬಗ್ಗೆ ಗಮನ ಹರಿಸಬೇಕಿದೆ ಎಂದು ಬಿಜೆಪಿ ಸೇರ್ಪಡೆಗೊಂಡ ಮತ್ತೊಬ್ಬ ಕಾರ್ಯಕರ್ತ ಆಸಿಫ್ ಅನೀಸ್ ಹೇಳಿದ್ದಾರೆ.