ಸ್ವಾತಂತ್ರ್ಯಾನಂತರ ಗಲ್ಲಿಗೇರಲಿರುವ ಮೊದಲ ಮಹಿಳಾ ಕೈದಿ; ಶಬನಂ ಹಿಂದಿನ ಕಥೆಯೇನು?
ನವದೆಹಲಿ, ಫೆಬ್ರವರಿ 17: ಭಾರತದಲ್ಲಿ ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿ ಮಹಿಳೆಯೊಬ್ಬರನ್ನು ಗಲ್ಲಿಗೇರಿಸಲಾಗುತ್ತಿದೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಏಳು ಮಂದಿ ಕೊಲೆ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥೆಯಾದ ಶಬನಂ ಆ ಮಹಿಳೆಯಾಗಿದ್ದು, ಸ್ವತಂತ್ರ್ಯ ಭಾರತದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಲಿರುವ ಮೊದಲ ಮಹಿಳಾ ಕೈದಿಯಾಗಿದ್ದಾರೆ. ಉತ್ತರ ಪ್ರದೇಶದ ಮಥುರಾದಲ್ಲಿ ನೇಣುಗಂಬಕ್ಕೆ ಏರುತ್ತಿರುವ ಏಕೈಕ ಮಹಿಳಾ ಕೈದಿ ಆಗಲಿದ್ದಾರೆ.
Recommended Video
2012ರಲ್ಲಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿನ ಅಪರಾಧಿಗಳನ್ನು ನೇಣಿಗೇರಿಸಿದ್ದ ಪವನ್ ಜಲ್ಲದ್ ಅವರೇ ಶಬನಂಳನ್ನೂ ನೇಣಿಗೇರಿಸಲಿದ್ದಾರೆ. ಆಕೆಯನ್ನು ಗಲ್ಲಿಗೇರಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, ಗಲ್ಲಿಗೇರಿಸುವ ದಿನಾಂಕ ನಿಗದಿಯಾಗಿಲ್ಲ. ಮುಂದೆ ಓದಿ...
ಶಬನಂ ಮಾಡಿದ ಅಪರಾಧವೇನು?
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಬವಾಂಖೇಡಿ ಗ್ರಾಮದ ಶಬನಂ ಉನ್ನತ ಶಿಕ್ಷಣ ಪಡೆದಿದ್ದಳು. ಮರ ಕೊಯ್ಯುವ ಕೆಲಸ ಮಾಡುವ ಸಲೀಂನನ್ನು ಈಕೆ ಪ್ರೀತಿಸುತ್ತಿದ್ದು, ಇವರ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಎಲ್ಲರನ್ನೂ ಕೊಲೆ ಮಾಡಲು ಸಂಚು ಹೂಡಿದ ಶಬನಂ, 2008ರ ಏಪ್ರಿಲ್ 14ರಂದು ಪ್ರಿಯತಮ ಸಲೀಂನೊಂದಿಗೆ ಸೇರಿ ತನ್ನ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿದ್ದಳು. ಅಪ್ಪ, ಅಮ್ಮ, ಅಣ್ಣ, ಅತ್ತಿಗೆ, ತಮ್ಮ, ಸಂಬಂಧಿ ರಾಬಿಯಾ, ಹತ್ತು ತಿಂಗಳ ಪುಟ್ಟ ಮಗು ಅರ್ಶ್ ಎಲ್ಲರನ್ನೂ ಇವರಿಬ್ಬರೂ ಸೇರಿ ಕೊಲೆ ಮಾಡಿದ್ದರು.
ಲೈಂಗಿಕ ಅಪರಾಧಕ್ಕೆ ಮರಣದಂಡನೆ, ಭಾರಿ ದಂಡ: ಬರಲಿದೆ ಕಠಿಣ ಕಾನೂನು
ಹಾಲಿನಲ್ಲಿ ಮತ್ತು ಬರಿಸುವ ಔಷಧ ಬೆರೆಸಿ ಕೊಲೆ
ತಮ್ಮ ಕುಟುಂಬದವರನ್ನು ಕೊಲ್ಲಲು ಮೊದಲು ಮತ್ತು ಬರುವ ಔಷಧ ಬೆರೆಸಿದ ಹಾಲನ್ನು ಎಲ್ಲರಿಗೂ ನೀಡಿದ್ದಳು. ಆನಂತರ ಎಲ್ಲರನ್ನೂ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ, ತನಗೇನೂ ತಿಳಿದಿಲ್ಲ ಎಂಬಂತೆ ಮನೆ ಹೊರಗೆ ಕೂಗಿಕೊಂಡು ನಾಟಕವಾಡಿದ್ದಳು. ಪುಟ್ಟ ಮಗುವನ್ನೂ ಬಿಡದೇ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ಆದರೆ ಈಕೆಯ ಕೃತ್ಯ ಕೆಲವೇ ದಿನಗಳಲ್ಲಿ ಬೆಳಕಿಗೆ ಬಂದಿತ್ತು. ಆನಂತರ ಸಲೀಂ ಹಾಗೂ ಶಬನಂಳನ್ನು ಪೊಲೀಸರು ಬಂಧಿಸಿದ್ದರು.
ಮರಣದಂಡನೆ ಶಿಕ್ಷೆ ಎತ್ತಿಹಿಡಿದ ನ್ಯಾಯಾಲಯಗಳು
ತೀರ್ಪು ನೀಡುವ ದಿನ ನ್ಯಾಯಾಧೀಶರು 29 ಜನರಿಂದ ಸಾಕ್ಷ್ಯ ಪಡೆದಿದ್ದರು. ಸಾಕ್ಷಿಗಳಿಂದ 649 ಪ್ರಶ್ನೆಗಳನ್ನು ಕೇಳಿದ ನಂತರ 160 ಪುಟಗಳ ತೀರ್ಪನ್ನು ಪ್ರಕಟಿಸಲಾಗಿತ್ತು. ಈ ಇಬ್ಬರಿಗೂ ಸೆಷನ್ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. 2010ರಲ್ಲಿ ಈ ಇಬ್ಬರೂ ಸೆಷನ್ ಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಕೂಡ ಮರಣದಂಡನೆಯನ್ನು ಎತ್ತಿಹಿಡಿದಿತ್ತು. ನಂತರ 2015ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಅಲ್ಲಿಯೂ ಇವರಿಗೆ ಸೋಲಾಗಿತ್ತು.
ಝೂಮ್ ಕರೆ ಮೂಲಕವೇ ಅಪರಾಧಿಗೆ ಗಲ್ಲು ಶಿಕ್ಷೆ ಪ್ರಕಟ!
ಮಥುರಾದ ಜೈಲಿನಲ್ಲಿ ನಿರ್ಮಿಸಲಾಗಿದ್ದ ನೇಣುಗಂಬ
ಆನಂತರ ಶಬನಂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಜನವರಿ 23ರಂದು ಸುಪ್ರೀಂ ಕೋರ್ಟ್ ಮರಣದಂಡನೆ ಆದೇಶವನ್ನು ಸ್ಥಿರಗೊಳಿಸಿದ್ದು, ಗಲ್ಲಿಗೇರಿಸಲು ಸಿದ್ಧತೆ ನಡೆಸಿದೆ. 1870ರಲ್ಲಿ, ಬ್ರಿಟಿಷರ ಕಾಲದಲ್ಲಿ ಮಹಿಳೆಯರನ್ನು ಗಲ್ಲಿಗೇರಿಸಲು ಮಥುರಾ ಜೈಲಿನಲ್ಲಿ ನೇಣುಗಂಬದ ಕೋಣೆ ನಿರ್ಮಿಸಲಾಗಿತ್ತು. ಸ್ವಾತಂತ್ರ್ಯಾನಂತರ ಇದುವರೆಗೂ ಯಾವ ಮಹಿಳೆಯನ್ನೂ ಗಲ್ಲಿಗೇರಿಸಿರಲಿಲ್ಲ. ಇದೀಗ ಶಬನಂಳನ್ನು ಗಲ್ಲಿಗೇರಿಸಲು ಸಿದ್ಧತೆ ನಡೆಯುತ್ತಿದೆ.