ಬಿಜೆಪಿಯೇತರ ಆಡಳಿತದ ಏಳು ರಾಜ್ಯಗಳಿಂದ ಜಿಎಸ್ಟಿ ನಷ್ಟ ಪರಿಹಾರ ಬೇಡಿಕೆ
ನವದೆಹಲಿ, ಮೇ 27: ಜಿಎಸ್ಟಿ ಕೌನ್ಸಿಲ್ ಸಭೆ ಮೇ 28 ರಂದು ನಡೆಯಲಿದ್ದು ಇದಕ್ಕೂ ಮುಂಚಿತವಾಗಿ ರಾಜಸ್ಥಾನ ಸಚಿವ ಶಾಂತಿ ಕುಮಾರ್ ಧರಿವಾಲ್ ಆಯೋಜಿಸಿದ್ದ ಸಭೆಯಲ್ಲಿ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಹಣಕಾಸು ಸಚಿವರುಗಳು ಜಿಎಸ್ಟಿ ನಷ್ಟ ಪರಿಹಾರ ಬೇಡಿಕೆ ಮುಂದಿಟ್ಟಿದ್ದಾರೆ.
ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಆಡಳಿತವಿರುವ ಏಳು ರಾಜ್ಯಗಳು ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ರಾಜ್ಯಗಳಿಗೆ ತೆರಿಗೆ ನಷ್ಟವನ್ನು ಸರಿದೂಗಿಸಬೇಕು ಮತ್ತು ರಾಜ್ಯ ದೇಶೀಯ ಉತ್ಪನ್ನಗಳಿಗೆ ಹೆಚ್ಚುವರಿ ಸಾಲ ಮಿತಿಯನ್ನು ಒಟ್ಟು ಶೇ. 5 ರಷ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದೆ.
ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?
ಮೇ 28 ರಂದು ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆಗೆ ಮುಂಚಿತವಾಗಿ ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ಹಣಕಾಸು ಸಚಿವರುಗಳು ರಾಜಸ್ಥಾನ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಶಾಂತಿ ಕುಮಾರ್ ಧರಿವಾಲ್ ಆಯೋಜಿಸಿದ್ದ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಈ ರಾಜ್ಯಗಳು ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿದ್ದು ಜಿಎಸ್ಟಿ ನಷ್ಟ ಪರಿಹಾರ ಬೇಡಿಕೆಯನ್ನು ಎತ್ತಿಹಿಡಿದೆ. ಹಾಗೆಯೇ ಕೋವಿಡ್ ಸಾಂಕ್ರಾಮಿಕ ವಿರುದ್ಧ ಹೋರಾಡಲು ಖರೀದಿಸಲಾದ ಸರಕುಗಳ ಮೇಲಿನ ಎಲ್ಲಾ ತೆರಿಗೆಗಳನ್ನು ಮನ್ನಾ ಮಾಡಲು ಈ ಏಳು ರಾಜ್ಯಗಳು ಆಗ್ರಹಿಸಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜಸ್ಥಾನದ ಹಣಕಾಸು ಖಾತೆಯನ್ನು ಹೊಂದಿದ್ದಾರೆ. ಆದರೆ ಜಿಎಸ್ಟಿ ಕೌನ್ಸಿಲ್ನಲ್ಲಿ ರಾಜಸ್ಥಾನ ಸರ್ಕಾರವನ್ನು ಧರಿವಾಲ್ ಪ್ರತಿನಿಧಿಸಲಿದ್ದಾರೆ. ಈ ಹಿನ್ನೆಲೆ ಧರಿವಾಲ್ ಸಭೆ ಆಯೋಜಿಸಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದೆ ಪರಿಣಾಮಕಾರಿಯಾಗಿ ತಮ್ಮ ಬೇಡಿಕೆಯನ್ನು ಪ್ರಸ್ತಾಪಿಸಲು ಈ ಸಭೆಯಲ್ಲಿ ತೀರ್ಮಾನಿಸಿದ್ದಾರೆ.
ಕಾರು, ಬೈಕ್ ಬೆಲೆ ಇಳಿಕೆ ಸಾಧ್ಯತೆ: ಜಿಎಸ್ಟಿ ಕಡಿತಕ್ಕೆ ಸರ್ಕಾರ ಪರಿಶೀಲನೆ
"ಕೇಂದ್ರ ಸರ್ಕಾರವು ಸಹಕಾರಿ ಫೆಡರಲಿಸಂನ ಮನೋಭಾವವನ್ನು ಗೌರವಿಸಬೇಕು. ಜಿಎಸ್ಟಿ ಆದಾಯ ನಷ್ಟಗಳಿಗೆ ಪರಿಹಾರವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು. ಇದು ಸಾಂಕ್ರಾಮಿಕ ರೋಗದಿಂದ ಉಂಟಾಗುವ ಕೆಲವು ತೆರಿಗೆ ನಷ್ಟವನ್ನು ತಗ್ಗಿಸಲು ರಾಜ್ಯಗಳಿಗೆ ಅನುವು ಮಾಡಿಕೊಡುತ್ತದೆ" ಎಂದು ಧರಿವಾಲ್ ಹೇಳಿದ್ದಾರೆ. ಹಾಗೆಯೇ ಪರಿಹಾರದ ನಿಯಮವನ್ನು 2022 ಮೀರಿ ಐದು ವರ್ಷಗಳವರೆಗೆ ವಿಸ್ತರಿಸಬೇಕು ಎಂದು ಕೂಡಾ ಒತ್ತಾಯಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ: ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
ಧರಿವಾಲ್ ಜೊತೆಗೆ ಹಣಕಾಸು ಸಚಿವರಾದ ಅಮಿತ್ ಮಿತ್ರಾ (ಪಶ್ಚಿಮ ಬಂಗಾಳ), ಮನ್ಪ್ರೀತ್ ಸಿಂಗ್ ಬಾದಲ್ (ಪಂಜಾಬ್), ರಾಮೇಶ್ವರ ಒರಾನ್ (ಜಾರ್ಖಂಡ್), ಟಿ.ಎಸ್. ಸಿಂಗ್ ಡಿಯೋ (ಛತ್ತೀಸ್ಗಢ), ಕೆ.ಎನ್. ಬಾಲಗೋಪಾಲ್ (ಕೇರಳ) ಮತ್ತು ಪಿ.ಟಿ.ಆರ್. ಪಳನಿವೇಲ್ ತ್ಯಾಗರಾಜನ್ (ತಮಿಳುನಾಡು) ಸಭೆಯಲ್ಲಿ ಭಾಗವಹಿಸಿದ್ದರು.
(ಒನ್ಇಂಡಿಯಾ ಸುದ್ದಿ)