ಸಾಯುವ ಕೆಲವೇ ಕ್ಷಣ ಮೊದಲು ಬಕ್ರೀದ್ ಶುಭಾಶಯ ಹೇಳಿದ್ದ ಕಾಂಗ್ರೆಸ್ ಮುಖಂಡ
ನವದೆಹಲಿ, ಆಗಸ್ಟ್ 22:"ಈದ್ ಅಲ್ ಆಧಾ ಆಚರಿಸುತ್ತಿರುವ ನನ್ನೆಲ್ಲಾ ಸ್ನೇಹಿತರಿಗೆ ಈದ್ ಮುಬಾರಕ್. ನಿಮ್ಮ ಎಲ್ಲಾ ಪ್ರಾರ್ಥನೆ ನೆರವೇರಲಿ. ಶಾಂತಿ, ಸಂಭ್ರಮ, ಸಂತೋಷ ನಿಮ್ಮೆಲ್ಲರ ಮನೆಗಳಿಂದ ಎಂದಿಗೂ ದೂರವಾಗದಿರಲಿ..." ಹಾಗೆಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ಗುರುದಾಸ್ ಕಾಮತ್ ಅವರಿಗೆ ಅದೇ ತಮ್ಮ ಕೊನೆಯ ಟ್ವೀಟ್ ಎಂಬ ಊಹೆಯೂ ಇರಲಿಲ್ಲ!
ಆದರೆ ವಿಧಿಬರಹ ಘೋರ. ಅವರು, 'ಶಾಂತಿ ಎಲ್ಲೆಲ್ಲೂ ನೆಲೆಸಲಿ' ಎಂದು ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಶಾಶ್ವತ ಶಾಂತಿ ಪಡೆದಿದ್ದಾರೆ. ಹೌದು, 63 ವರ್ಷ ವಯಸ್ಸಿನ ಗುರುದಾಸ್ ಕಾಮತ್ ಇನ್ನಿಲ್ಲ.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗುರುದಾಸ್ ಕಾಮತ್ ಅವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಿದ ರಾಜ್ಯ ಬಿಜೆಪಿ ನಾಯಕರು
63 ವರ್ಷ ವಯಸ್ಸಿನ ಕಾಮತ್ ಅವರು ನಿಧನರಾಗುವ ಕೆಲವೇ ಗಂಟೆಗಳ ಮೊದಲು ಬಕ್ರೀದ್ ಶುಭಾಶಯ ಕೋರಿ ಟ್ವೀಟ್ ಮಾಡಿದ್ದರು. ಆರೋಗ್ಯವಂತರಾಗಿಯೇ ಇದ್ದ ಕಾಮತ್ ಅವರು ಇದ್ದಕ್ಕಿದ್ದಂತೇ ಹೃದಯಾಘಾತಕ್ಕೊಳಗಾಗಿ ಮೃತರಾಗಿದ್ದು, ಅವರ ನಿಧನಕ್ಕೆ ಕಾಂಗ್ರೆಸ್ಸಿನ ನಾಯಕರು ಸೇರಿದಂತೆ ದೇಶದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
#EidMubarak to all my friends celebrating #EidAlAdha . May all your prayers be accepted. May peace, joy and happiness never depart from your lives and homes.
— Gurudas Kamat (@KamatGurudas) August 21, 2018
Happy celebrations! #ईद_उल_अजहा के पुरमुस्सर्रत मौके पर आप सभी को तहे दिल से मुबारकबाद। #ईद_मुबारक pic.twitter.com/WfXX4dc6k9
ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ದೆಹಲಿಯ ಖಾಸಗೀ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಕಾಮತ್ ಅವರ ಅಂತಿಮ ದರ್ಶನ ಪಡೆದರು.
ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿದ್ದ ಕಾಮತ್, 2009 ರಿಂದ 2011 ರವರೆಗೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ಮಹಾರೂಖ್ ಕಾಮತ್ ಮತ್ತು ಪುತ್ರ ಡಾ.ಸುನಿಲ್ ಕಾಮತ್ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.