ಜಾತಿ ಆಧಾರಿತ ಜನಗಣತಿ ಮಾಡಲು ಎಸ್ಡಿಪಿಐ ಆಗ್ರಹ!
ಬೆಂಗಳೂರು, ಆ. 14: ದೇಶದ ಎಲ್ಲಾ ಜಾತಿ, ವರ್ಗಗಳಿಗೂ ಸಮಾನ ಪ್ರಾತಿನಿಧ್ಯ ಮತ್ತು ಅವಕಾಶ ದೊರೆಯಬೇಕಾದರೆ ಜಾತಿ ಗಣತಿ ಅಗತ್ಯವಿದೆ. ಜನಗಣತಿ ಪ್ರಕ್ರಿಯೆಯಲ್ಲಿ ಪ್ರತಿ ಜಾತಿಯ ಎಣಿಕೆಯನ್ನೂ ನಡೆಸಬೇಕು ಎಂಬ ಬೇಡಿಕೆಗೆ ಎಸ್ಡಿಪಿಐ ಬೆಂಬಲ ನೀಡುತ್ತದೆ. ದೇಶಾದ್ಯಂತ 2021 ರ ಜನಗಣತಿ ಪ್ರಕ್ರಿಯೆಯಲ್ಲಿ ಜಾತಿ ಆಧಾರಿತ ಗಣತಿಯನ್ನೂ ತುರ್ತಾಗಿ ನಡೆಸುವ ಅಗತ್ಯವಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಉಪಾಧ್ಯಕ್ಷ ಸರ್ಫುದ್ದೀನ್ ಅಹ್ಮದ್ ಆಗ್ರಹಿಸಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿರುವ ಸರ್ಫುದ್ದೀನ್ ಅಹ್ಮದ್, "ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿ ತಯಾರಿಸಲು ರಾಜ್ಯಗಳಿಗೆ ಅಧಿಕಾರವನ್ನು ಮರುಸ್ಥಾಪಿಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಸತ್ ಅಂಗೀಕಾರ ದೊರೆತಿದೆ. ಅದರಿಂದ ಜಾತಿ ಆಧಾರಿತ ಜನಗಣತಿಯ ಕುರಿತು ದೇಶದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಸ್ವಾತಂತ್ರ್ಯದ ಮೊದಲು 1931 ರಲ್ಲಿ ಭಾರತದಲ್ಲಿ ಜಾತಿ ಆಧಾರಿತ ಜನಗಣತಿಯನ್ನು ನಡೆಸಲಾಗಿತ್ತು. ಸ್ವಾತಂತ್ರ್ಯದ ನಂತರ, ಮೊದಲ ಜನಗಣತಿಯನ್ನು 1951 ರಲ್ಲಿ ನಡೆಸಲಾಯಿತು. ಆದರೆ ಜಾತಿ ಆಧಾರಿತ ಗಣತಿಯನ್ನು ಅದಾದ ನಂತರ ಒಮ್ಮೆಯೂ ಮಾಡಿಲ್ಲ. ಭಾರತದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ನಡೆಸುವ ಜನಗಣತಿಯಲ್ಲಿಯೂ ಅದನ್ನು ಕೈ ಬಿಡಲಾಗಿದೆ" ಎಂದು ವಿವರಿಸಿದ್ದಾರೆ.
ಜನಗಣತಿಗೆ ಹಿಂದುಳಿದ ವರ್ಗದ ತೀವ್ರ ಅಸಮಾಧಾನವಿದೆ
ಭಾರತೀಯ ಸಮಾಜವು 4635 ಜಾತಿಗಳು ಮತ್ತು ಸಮುದಾಯಗಳನ್ನು ಒಳಗೊಂಡಿದೆ. ಅಸ್ಮಿತೆ, ಸ್ಥಾನಮಾನ ಹಾಗೂ ಹಂಚಿಕೆಯು ಜಾತಿ ವ್ಯವಸ್ಥೆಗೆ ಅನುಗುಣವಾಗಿಯೇ ನಡೆಯುತ್ತಿದೆ. 1990 ರಲ್ಲಿ ದೇಶವು ಅಂಗೀಕರಿಸಿದ ಮಂಡಲ್ ಆಯೋಗದ ಕಾನೂನಿನಡಿಯಲ್ಲಿ ಮೀಸಲಾತಿಗೆ ವಿಶೇಷ ಸಂರಕ್ಷಣೆ ನೀಡಲಾಗಿದೆ. ಆದರೆ ಹಿಂದಿನಿಂದಲೂ ಹಿಂದುಳಿದ ಜಾತಿಗಳಿಗೆ ಸಂಬಂಧಿಸಿದ ಮಾಹಿತಿಯ ಕೊರತೆ ಕಾಡುತ್ತಿದೆ. ಆದ್ದರಿಂದ 50 ವರ್ಷಗಳ ಹಳೆಯದಾದ ಅಂದರೆ 1931ರ ಜನಗಣತಿಯ ಅಂಕಿ ಅಂಶಗಳ ಆಧಾರದಲ್ಲೇ ಮೀಸಲಾತಿ ನೀಡಲಾಗುತ್ತಿದೆ. 1931 ರ ಜನಗಣತಿಗೆ ದೇಶದ ಜನರು ಅದರಲ್ಲೂ ವಿಶೇಷವಾಗಿ ಒಬಿಸಿಗಳ ತೀವ್ರ ಅಸಮಾಧಾನವಿದೆ ಎಂದು ಅವರು ತಿಳಿಸಿದ್ದಾರೆ.
ರಾಜಕೀಯ ಕಾರಣದಿಂದ ಜಾತಿ ಗಣತಿ ನಿರ್ಲಕ್ಷ
ವಿಪರ್ಯಾಸವೆಂದರೆ ಪ್ರತಿ ಮನೆ, ಪ್ರತಿ ಜಾನುವಾರು, ಪ್ರತಿ ಮರ ಹೀಗೆ ಪ್ರತಿಯೊಂದನ್ನೂ ಲೆಕ್ಕ ಹಾಕಲಾಗುತ್ತದೆ. ಆದರೆ ರಾಜಕೀಯ ಕಾರಣಗಳಿಂದಾಗಿ ಜಾತಿ ಆಧಾರಿತ ಜನಗಣತಿಯನ್ನು ಉದ್ದೇಶಪೂರ್ವಕವಾಗಿ ನಿರ್ಲರ್ಕ್ಷಿಸಲಾಗುತ್ತಿದೆ. ದೇಶದಲ್ಲಿ ಜಾತಿಗಳ ಅಂಕಿ ಅಂಶ ಇಲ್ಲದಂತೆ ಮಾಡಲಾಗಿದೆ. ಕೇಂದ್ರದಲ್ಲಿ ಆಳುವ ಪಕ್ಷಗಳು ಯಾವಾಗಲೂ ಜಾತಿ ಲೆಕ್ಕಾಚಾರದ ಮೇಲೆ ಕುತಂತ್ರದ ರಾಜಕೀಯ ಆಟವಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಹಿಂದುಳಿದ ವರ್ಗಗಳ ಶಕ್ತಿಯಿಂದ ಮೇಲೆ ಬಂದ ರಾಜಕೀಯ ಪಕ್ಷಗಳು ಕೂಡ ಈ ವರ್ಗಗಳ ವಿಷಯದಲ್ಲಿ ಕೇವಲ ಕಣ್ಣಾ ಮುಚ್ಚಾಲೆ ಆಟವಾಡಿ ಮತಗಳನ್ನು ಪಡೆಯಲು ಮಾತ್ರ ಈ ಸಮುದಾಯವನ್ನು ಬಳಸುತ್ತಿವೆ. ಚುನಾವಣೆಗಳು ಬಂದಾಗ ಅಥವಾ ತಮಗೆ ಅನುಕೂಲವಾಗುವ ಸಂದರ್ಭಗಳಲ್ಲಿ ಮಾತ್ರ ಈ ಸಮುದಾಯಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಅವಕಾಶವಾದಿತನ ಪ್ರದರ್ಶಿಸುತ್ತದೆ.
ಜನಗಣತಿ ಅಂಕಿ ಅಂಶ ಇಂದಿಗೂ ಬಹಿರಂಗಪಡಿಸಿಲ್ಲ!
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಥವಾ ಹಿಂದುಳಿದ ವರ್ಗಗಳ ಶಕ್ತಿಯನ್ನು ಅವಲಂಬಿಸಿರುವ ಪಕ್ಷಗಳು ಕೂಡ ಜಾತಿ ಗಣತಿಗೆ ಆಗ್ರಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ. 2011 ರಲ್ಲಿ ಜಾತಿ ಗಣತಿಯನ್ನು ಪ್ರತ್ಯೇಕವಾಗಿ ನಡೆಸಲಾಯಿತಾದರೂ 2011 ರ ಜನಗಣತಿಯ ಅಂಕಿ ಅಂಶವನ್ನು ಇಂದಿಗೂ ಬಹಿರಂಗಪಡಿಸಿಲ್ಲ. ಹಾಗಾಗಿ ಜಾತಿ ಆಧಾರಿತ ಜನಗಣತಿಯನ್ನು ಸಾಮಾನ್ಯ ಜನಗಣತಿಯ ಭಾಗವಾಗಿ ಮಾಡಿದರೆ ಸಾಮಾಜಿಕ ನ್ಯಾಯವನ್ನು ನಿಜವಾದ ಅರ್ಥದಲ್ಲಿ ನೀಡಲು ಸಾಧ್ಯವಾಗುತ್ತದೆ ಎಂದು ಸರ್ಫುದ್ದೀನ್ ಅಹ್ಮದ್ ವಿವರಿಸಿದ್ದಾರೆ.
ತುರ್ತಾಗಿ ಜಾತಿ ಆಧಾರಿತ ಗಣತಿ ನಡೆಸುವ ಅಗತ್ಯವಿದೆ
ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರತಿ ಜಾತಿಯ ಬಲವನ್ನು ಸರಿಯಾಗಿ ಎಣಿಸಿದ ನಂತರ ಈ ಜಾತಿಗಳಿಗೆ ಸರಿಯಾದ ಪಾಲು ಮತ್ತು ಪ್ರಾತಿನಿಧ್ಯವನ್ನು ಆಯಾ ಜನಸಂಖ್ಯೆಗೆ ಅನುಗುಣವಾಗಿ ಖಾತರಿಪಡಿಸಲು ಸಾಧ್ಯವಾಗುತ್ತದೆ. ಎಸ್ಡಿಪಿಐ ಜನಗಣತಿ ಪ್ರಕ್ರಿಯೆಯಲ್ಲಿ ಪ್ರತಿ ಜಾತಿಯ ಎಣಿಕೆಯನ್ನೂ ನಡೆಸಬೇಕು ಎಂಬ ಬೇಡಿಕೆಗೆ ಬೆಂಬಲ ನೀಡುತ್ತದೆ. ದೇಶಾದ್ಯಂತ 2021 ರ ಜನಗಣತಿ ಪ್ರಕ್ರಿಯೆಯಲ್ಲಿ ಜಾತಿ ಆಧಾರಿತ ಗಣತಿಯನ್ನೂ ತುರ್ತಾಗಿ ನಡೆಸುವ ಅಗತ್ಯವಿದೆ ಎಂಬುದನ್ನು ಎಸ್ಡಿಪಿಐ ಪ್ರತಿಪಾದಿಸುತ್ತದೆ ಎಂದು ಸರ್ಫುದ್ದೀನ್ ಅಹ್ಮದ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.