ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ: ಸುಪ್ರೀಂ ಕೋರ್ಟ್ ಎಚ್ಚರಿಕೆ
ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆ, ಹಿಂಸೆಯನ್ನು ನಿಯಂತ್ರಿಸಲು ಹೊಸ ಕಾನೂನನ್ನು ರಚಿಸಬಹುದೇ ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರವನ್ನು ಕೇಳಿದೆ.
ಗೋ ರಕ್ಷಣೆಯ ಹೆಸರಿನಲ್ಲಿ ಅಪರಾಧಗಳಾಗುವುದು ಸರಿಯಲ್ಲ. ಇದಕ್ಕಾಗಿ ಕಠಿಣ ಕಾನೂನೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕಿದೆ ಎಂದು ಅದು ಹೇಳಿದೆ.
ಇತ್ತೀಚೆಗಷ್ಟೇ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಮಕ್ಕಳ ಕಳ್ಳರೆಂದು ಆರೋಪಿಸಿ ಹಲವರನ್ನು ಜನರೇ ಹೊಡೆದು ಕೊಂದ ಘಟನೆ ನಡೆದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಹೀಗೆ ಗುಂಪುಗೂಡಿ ಹಲ್ಲೆ ನಡೆಸುವುದು, ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಗುಂಪುಗೂಡಿ ನಿರುದ್ದೇಶವಾಗಿ ಹಲ್ಲೆ ಮಾಡಿದರೂ ಅಪರಾಧ: ಸುಪ್ರೀಂ ಕೋರ್ಟ್
"ಯಾವುದೇ ನಾಗರಿಕರಿಗೂ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕಿಲ್ಲ. ಯಾವುದೇ ರಾಜ್ಯದಲ್ಲಿ ಇಂಥ ಘಟನೆ ನಡೆದರೂ ಆಯಾ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಹಿಂಸೆಗೆ ಆಸ್ಪದ ನೀಡಬಾರದು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜು.3 ರಂದು ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲಾ ಮತ್ತು ತುಷಾರ್ ಗಾಂಧಿ ಹೂಡಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ ಎಎಂ ಖಾನ್ವಿಲ್ಕರ್, ನ್ಯಾ ಡಿವೈ ಚಂದ್ರಚೂಡ್ ಅವರಿದ್ದ ತ್ರಿಸದಸ್ಯಪೀಠ ತೀರ್ಪನ್ನು ಕಾಯ್ದಿರಿಸಿತ್ತು.
ಇತ್ತೀಚೆಗೆ ದೇಶದಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ಹಲವು ಹಿಂಸಾಚಾರಗಳು ನಡೆದಿದ್ದವು. ಕಾನೂನು ಮತ್ತು ಸುವ್ಯವಸ್ಥೆ ಆಯಾ ರಾಜ್ಯದ ಅಧೀನಕ್ಕೆ ಬರುವುದರಿಂದ ಇವನ್ನು ತಡೆಯಲು ಎಲ್ಲ ರಾಜ್ಯ ಸರ್ಕಾರಗಳಿಗೂ ಮಾರ್ಗದರ್ಶಿ ಸೂತ್ರಗಳನ್ನು ನೀಡುವುದಾಗ ಈ ಮೊದಲೇ ಕೇಂದ್ರ ಸರ್ಕಾರ ಹೇಳಿತ್ತು.
ಗೋಹತ್ಯೆಯ ಮಾಡಲಾಗಿದೆ ಎಂದು ಜನರ ಗುಂಪೇ ಹಲವರನ್ನು ಹೊಡೆದು ಸಾಯಿಸಿದ ಘಟನೆಗಳು ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದಿವೆ.