ನಿರೂಪಕಿ ನವಿಕಾ ಕುಮಾರ್ ವಿರುದ್ಧದ ಎಫ್ಐಆರ್ಗಳನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಿದ ಸುಪ್ರೀಂ
ನವದೆಹಲಿ, ಸೆ. 23: ಚಾನೆಲ್ ಚರ್ಚೆಯೊಂದರಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ನೂಪುರ್ ಶರ್ಮಾ ಅವರು ಮಾಡಿದ ಹೇಳಿಕೆಗಳ ಕುರಿತು ಟೈಮ್ಸ್ ನೌ ಆಂಕರ್ ನವಿಕಾ ಕುಮಾರ್ ಅವರ ವಿರುದ್ಧ ದಾಖಲಾದ ಎಫ್ಐಆರ್ಗಳನ್ನು ದೆಹಲಿ ಪೊಲೀಸ್ನ ಐಎಫ್ಎಸ್ಒ ಘಟಕಕ್ಕೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ.
ಪ್ರವಾದಿ ಮೊಹಮ್ಮದ್ ವಿರುದ್ಧದ ಆಕ್ಷೇಪಾರ್ಹ ಹೇಳಿಕೆಗಳಿಗೆ ಸಂಬಂಧಿಸಿದಂತೆ ಹಲವಾರು ರಾಜ್ಯಗಳಲ್ಲಿ ಟಿವಿ ನಿರೂಪಕಿ ನವಿಕಾ ಕುಮಾರ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
ವಿವಾದಾತ್ಮಕ ಹೇಳಿಕೆ ಪ್ರಕರಣ: ನೂಪುರ್ ಬಂಧನಕ್ಕೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ
ನ್ಯಾಯಮೂರ್ತಿ ಎಂ.ಆರ್. ಶಾ ನೇತೃತ್ವದ ಪೀಠವು ಕುಮಾರ್ ವಿರುದ್ಧ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲಾದ ಹಲವು ಎಫ್ಐಆರ್ಗಳನ್ನು ದೆಹಲಿ ಪೊಲೀಸ್ನ ಐಎಫ್ಎಸ್ಒ ಘಟಕಕ್ಕೆ ಹಸ್ತಾಂತರಿಸಿದೆ.
ದೆಹಲಿ ಪೊಲೀಸ್ ಐಎಫ್ಎಸ್ಒ ಯುನಿಟ್ ದಾಖಲಿಸಿದ ಎಫ್ಐಆರ್ ಅನ್ನು ಪ್ರಮುಖ ಪ್ರಕರಣವಾಗಿ ತೆಗೆದುಕೊಳ್ಳಲಾಗುತ್ತದೆ. ಅದೇ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನೋಂದಾಯಿಸಬಹುದಾದ ಭವಿಷ್ಯದ ಎಫ್ಐಆರ್ಗಳಿಗೆ ನಿರ್ದೇಶನವು ಅನ್ವಯಿಸುತ್ತದೆ. ಇದೇ ಪ್ರಕರಣಗಳಲ್ಲಿ, ಪ್ರಸ್ತುತ ಅಥವಾ ಭವಿಷ್ಯದಲ್ಲಿ ಉದ್ಭವಿಸಬಹುದಾದ ಯಾವುದೇ ದಬ್ಬಾಳಿಕೆಯ ಕ್ರಮದಿಂದ ಪತ್ರಕರ್ತೆಯನ್ನು ನ್ಯಾಯಾಲಯವು ರಕ್ಷಿಸಿದೆ.
ದೆಹಲಿ ಪೋಲೀಸರು ನವಿಕಾ ಕುಮಾರ್ ವಿರುದ್ಧ ಭವಿಷ್ಯದ ಯಾವುದೇ ದೂರುಗಳನ್ನು ತನಿಖೆ ಮಾಡುತ್ತಾರೆ. ತನ್ನ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸುವುದು ಸೇರಿದಂತೆ ಯಾವುದೇ ಹೆಚ್ಚಿನ ಪರಿಹಾರಕ್ಕಾಗಿ ದೆಹಲಿ ಹೈಕೋರ್ಟ್ಗೆ ಸಂಪರ್ಕಿಸಲು ಆಕೆಗೆ ಸ್ವಾತಂತ್ರ್ಯ ನೀಡಲಾಗಿದೆ.
ಈ ಪ್ರಕರಣವು ನವಿಕಾ ಕುಮಾರ್ ಅವರು ನಿರೂಪಣೆ ಮಾಡಿದ ಕಾರ್ಯಕ್ರಮವೊಂದರಲ್ಲಿ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿಯವರ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಗಳ ಪ್ರಸಾರಕ್ಕೆ ಸಂಬಂಧಿಸಿದೆ.
ಜ್ಞಾನವಾಪಿ ಮಸೀದಿಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಅಚಾತುರ್ಯದಿಂದ ಮತ್ತು ಹಠಾತ್ ಆಗಿ ಇದು ನಡೆದಿದೆ ಎಂದು ನವಿಕಾ ಕುಮಾರ್ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಈ ಹಿಂದೆ ವಾದಿಸಿದ್ದರು.
ಟಿವಿ ಚರ್ಚೆಯ ಸಂದರ್ಭದಲ್ಲಿ ನೂಪುರ್ ಶರ್ಮಾ ಅವರು ಪ್ರವಾದಿಯ ಬಗ್ಗೆ ಮಾಡಿದ ಆಕ್ಷೇಪಾರ್ಹ ಹೇಳಿಕೆಗಳು ದೇಶಾದ್ಯಂತ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಅನೇಕ ಗಲ್ಫ್ ರಾಷ್ಟ್ರಗಳಿಂದ ತೀಕ್ಷ್ಣವಾದ ಪ್ರತಿಕ್ರಿಯೆಗಳು ಬಂದಿದ್ದವು.