ಜನವರಿ 22ರಿಂದ ಶಬರಿಮಲೆ ತೀರ್ಪಿನ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಅಸ್ತು
ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪುನರ್ ಪರಿಶೀಲನೆ ಮಾಡುವುದಾಗಿ ಮಂಗಳವಾರ ಹೇಳಿದೆ. ಕಳೆದ ತಿಂಗಳು ಈ ತೀರ್ಪಿನ ಹಿನ್ನೆಲೆಯಲ್ಲಿ ಭಾರೀ ಪ್ರತಿಭಟನೆ ಹಾಗೂ ಹಿಂಸಾಚಾರ ನಡೆದಿತ್ತು
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ಈ ಬಗ್ಗೆ ಮಂಗಳವಾರ ಹೇಳಿದ್ದು, ಜನವರಿ 22ರಂದು ಮತ್ತೆ ತೆರೆದ ಕೋರ್ಟ್ ನಲ್ಲಿ ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಅದುವರೆಗೆ ಈಗ ನೀಡಿರುವಂತೆ ಎಲ್ಲ ವಯಸ್ಸಿನ ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂಬ ತೀರ್ಪು ಮುಂದುವರಿಯಲಿದೆ.
ಮಹಿಳೆಯರಿಗೆ ಅಯ್ಯಪ್ಪನ ದರ್ಶನ ಮಾಡಿಸಲು ಕೇರಳ ಪೊಲೀಸರ ಹೊಸ ಐಡಿಯಾ
"ಈ ಹಿಂದಿನ ತೀರ್ಪಿಗೆ ಹಾಗೂ ಆದೇಶಕ್ಕೆ ಯಾವುದೇ ತಡೆಯಾಜ್ಞೆ ಇಲ್ಲ" ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಸೆಪ್ಟೆಂಬರ್ ಇಪ್ಪತ್ತೆಂಟನೇ ತಾರೀಕು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ, ಎಲ್ಲ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿತ್ತು.
ಇದೀಗ ಮೇಲ್ಮನವಿ ಸಲ್ಲಿಸಿರುವವರು, ನಂಬಿಕೆಯನ್ನು ವೈಜ್ಞಾನಿಕ ಅಥವಾ ತಾರ್ಕಿಕ ಕಾರಣಗಳಿಂದ ತೀರ್ಮಾನ ಮಾಡಲು ಸಾಧ್ಯವಿಲ್ಲ. ಮಹಿಳೆಯರಿಗೆ ಪ್ರವೇಶ ಇಲ್ಲದಿರುವುದು ದೈಹಿಕ ಮಾನದಂಡದ ಆಧಾರದಲ್ಲಿ ಅಲ್ಲ. ಆದರೆ ಇದು ಪೂಜೆ ಕೈಗೊಳ್ಳುತ್ತಿರುವ ದೇವರ ಗುಣದ ಆಧಾರದ ಮೇಲೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ನ ಇಂದಿನ ಆದೇಶಕ್ಕೆ ಶಬರಿಮಲೆ ಮುಖ್ಯ ಅರ್ಚಕರು ಸೇರಿದಂತೆ ಹಲವರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇದು ದೊಡ್ಡ ನಿರ್ಧಾರ. ಆ ದೇವರು ಅಯ್ಯಪ್ಪನೇ ನಮಗೆ ಸಹಾಯ ಮಾಡಿದ ಎಂದು ಮುಖ್ಯ ಅರ್ಚಕರು ಹೇಳಿದ್ದಾರೆ.