ಎಸ್ಸಿ, ಎಸ್ಟಿ ನೌಕರರ ಬಡ್ತಿ: ಸುಪ್ರೀಂ ನಲ್ಲಿ ರಾಜ್ಯದ ಮೇಲ್ಮನವಿ
ಎಸ್ಸಿ, ಎಸ್ಟಿ ಮೀಸಲಾತಿ ಬಗ್ಗೆ ಕಾಲಾವಕಾಶ ಕೇಳಿದ ಕರ್ನಾಟಕ ಸರ್ಕಾರ. ಎಸ್ಸಿ, ಎಸ್ಟಿ ಮೀಸಲಾತಿ ನಿಲುಗಡೆ ವಿಚಾರದಲ್ಲಿ ಕೇಳಲಾಗಿರುವ ಕಾಲಾವಕಾಶ.
ಬೆಂಗಳೂರು, ಸೆಪ್ಟೆಂಬರ್ 5: ಎಸ್ಸಿ ಎಸ್ಟಿ ಸರ್ಕಾರಿ ನೌಕರರನ್ನು ವಿಶೇಷ ಬಡ್ತಿಗೆ ಪರಿಗಣಿಸುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ಪೂರಕವಾಗಿ ತನ್ನ ನಿಲುವನ್ನು ತಿಳಿಸಲು ಕರ್ನಾಟಕ ಸರ್ಕಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಕಾಲಾವಕಾಶ ಕೋರಿದೆ. ಅಲ್ಲದೆ, ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆಯೂ ಅದು ನ್ಯಾಯಾಲಯವನ್ನು ಕೋರಿದೆ.
ಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ರದ್ದು: ಕರ್ನಾಟಕಕ್ಕೆ ಸುಪ್ರೀಂ ಆದೇಶ
ಕಳೆದ 30 ವರ್ಷಗಳಿಂದ ರಾಜ್ಯ ಸರ್ಕಾರವು ಅನುಸರಿಸುತ್ತಿರುವ ಎಸ್ಸಿಎಸ್ಟಿ ಉದ್ಯೋಗಿಗಳನ್ನು ಬಡ್ತಿ ವಿಚಾರದಲ್ಲಿ ವಿಶೇಷವಾಗಿ ಪರಿಗಣಿಸುವ ಪದ್ಧತಿಯನ್ನು ನಿಲ್ಲಿಸುವಂತೆ ಇದೇ ವರ್ಷ ಫೆಬ್ರವರಿ 13ರಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಾದ ಆದೇಶ ನೀಡಿತ್ತು.
ಆದರೆ, ಇದನ್ನು ಜಾರಿಗೊಳಿಸುವುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನಸ್ಸಿಲ್ಲದಿರುವುದರಿಂದ ಅದು ಈಗ ಸುಪ್ರೀಂ ಕೋರ್ಟ್ ನ ಆದೇಶ ಪಾಲನೆಯಿಂದ ತಪ್ಪಿಸಿಕೊಳ್ಳಲು ಕಾನೂನಿನ ಚೌಕಟ್ಟಿನಲ್ಲಿ ಇರುವ ದಾರಿಗಳನ್ನು ಹುಡುಕಿಕೊಂಡಿದೆ. ಅದರ ಪರಿಣಾಮವಾಗಿಯೇ, ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸುಗ್ರೀವಾಜ್ಞೆ ಜಾರಿಗೆ ತರಲು ಪ್ರಯತ್ನಿಸಿತ್ತು.
ಈ ಸುಗ್ರೀವಾಜ್ಞೆಗಾಗಿ ರಾಜ್ಯಪಾಲ ವಜೂಭಾಯಿ ವಾಲಾ ಬಳಿಗೆ ಇತ್ತೀಚೆಗೆ ಮನವಿಯೊಂದನ್ನು ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ಈ ಅರ್ಜಿಯನ್ನು ತಿರಸ್ಕರಿಸಿದ್ದರು. ಸುಗ್ರೀವಾಜ್ಞೆಯ ಅಗತ್ಯತೆಯನ್ನೂ ರಾಜ್ಯಪಾಲರು ಪ್ರಶ್ನಿಸಿದ್ದರು.
ಎಸ್ಸಿ, ಎಸ್ಟಿ ಮೀಸಲಾತಿ: ರಾಜ್ಯ ಸರ್ಕಾರಕ್ಕೆ ಮುಖಭಂಗ
ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿಯಾಗಿದ್ದ ರಾಜ್ಯ ಸರ್ಕಾರದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಸರ್ಕಾರದ ಕ್ರಮವನ್ನು ವಿವರಿಸಿದರು.
ಮಂಗಳವಾರ (ಸೆ. 5) ಅದೇ ವಿಚಾರವನ್ನು ಸುದ್ದಿಗಾರರೊಂದಿಗೆ ಪ್ರಸ್ತಾಪಿಸಿದ ಅವರು, ರಾಜ್ಯಪಾಲರನ್ನು ಭೇಟಿ ಮಾಡಿ ಸುಗ್ರೀವಾಜ್ಞೆಯ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ, ಅಧಿವೇಶನ ನಡೆಯದೇ ಇರುವುದರಿಂದ ಸುಗ್ರೀವಾಜ್ಞೆಅನಿವಾರ್ಯವಾಗಿರುವುದನ್ನೂ ತಿಳಿಸಲಾಗಿದೆ.
ಇತ್ತ, ಬಡ್ತಿ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಜಾರಿ ಕುರಿತಂತೆ ತನ್ನ ನಿಲುವನ್ನು ತಿಳಿಸಲು ಕಾಲಾವಕಾಶ ಕೋರಲಾಗಿದೆಯಲ್ಲದೆ, ತೀರ್ಪನ್ನು ಪುನರ್ ಪರಿಶೀಲಿಸುವಂತೆಯೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.