ದೆಹಲಿ ಸಮಿತಿ ಮುಂದೆ ಫೇಸ್ಬುಕ್ ಹಾಜರಾಗಬೇಕು ಆದರೆ: ಸುಪ್ರೀಂ ಹೇಳಿದ್ದಿಷ್ಟು
ನವದೆಹಲಿ, ಜು.08: "ಕೇಂದ್ರ ಸರ್ಕಾರವು ನೋಡಿಕೊಳ್ಳುತ್ತಿರುವ ಕಾನೂನು ಸುವ್ಯವಸ್ಥೆ ಕುರಿತು ಫೇಸ್ಬುಕ್ಗೆ ಉತ್ತರಿಸಲು ಒತ್ತಾಯಿಸಲಾಗುವುದಿಲ್ಲ," ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.
2020 ರ ಗಲಭೆಯಲ್ಲಿ ದೆಹಲಿ ವಿಧಾನಸಭಾ ಸಮಿತಿಯ ಮುಂದೆ ಹಾಜರಾಗುವಂತೆ ಸಾಮಾಜಿಕ ಜಾಲತಾಣ ದೈತ್ಯ ಫೇಸ್ಬುಕ್ಗೆ ಆದೇಶಿಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.
ದೆಹಲಿ ಗಲಭೆ: ಮೂವರು ವಿದ್ಯಾರ್ಥಿಗಳಿಗೆ ಜಾಮೀನು ಆದೇಶ ಎತ್ತಿಹಿಡಿದ ಸುಪ್ರೀಂ
ದೆಹಲಿ ಅಸೆಂಬ್ಲಿ ಸಮಿತಿಯು "ಕೇಂದ್ರ ಕಾನೂನುಗಳನ್ನು ಅತಿಕ್ರಮಿಸದೆ ಶಾಂತಿ ಮತ್ತು ಸಾಮರಸ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿದೆ," ಎಂದು ಉನ್ನತ ನ್ಯಾಯಾಲಯವು ಒತ್ತಿಹೇಳಿದೆ.
ದೆಹಲಿ ಗಲಭೆ ಬಗ್ಗೆ ತನಿಖೆ ನಡೆಸುವ ಸಮಿತಿ ನೀಡಿದ ನೋಟಿಸ್ ಅನ್ನು ಪ್ರಶ್ನಿಸಿ ಭಾರತದ ಫೇಸ್ಬುಕ್ ಉಪಾಧ್ಯಕ್ಷ ಅಜಿತ್ ಮೋಹನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ದಿನೇಶ್ ಮಹೇಶ್ವರಿ ಮತ್ತು ಹೃಷಿಕೇಶ್ ರಾಯ್ರನ್ನು ಒಳಗೊಂಡ ತ್ರಿಸದಸ್ಯ ನ್ಯಾಯ ಪೀಠವು ಈ ತೀರ್ಪು ನೀಡಿದೆ.
ಸಮಿತಿಯು ತನ್ನ ಮುಂದೆ ಹಾಜರಾಗುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ರಾಷ್ಟ್ರೀಯ ರಾಜಧಾನಿಯಲ್ಲಿ ಪೊಲೀಸ್ ಮತ್ತು ಸಾರ್ವಜನಿಕ ಆದೇಶವು ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ಹಾಗೆಯೇ ನಾನು ಮೌನವಾಗಿರುವ ಹಕ್ಕನ್ನು ಹೊಂದಿದ್ದೇನೆ ಎಂದು ಅಜಿತ್ ಮೋಹನ್ ವಾದಿಸಿದ್ದಾರೆ.
ಯೆಚೂರಿ, ಯೋಗೇಂದ್ರ ಆರೋಪಿಗಳಲ್ಲ: ಪೊಲೀಸರ ಸ್ಪಷ್ಟನೆ
ಈ ಸಂದರ್ಭ ನ್ಯಾಯಾಲಯವು ಕೆಲವು ತೀಕ್ಷ್ಣವಾದ ಹೇಳಿಕೆಗಳನ್ನು ನೀಡಿದೆ. "ದೆಹಲಿ ಅಸೆಂಬ್ಲಿ ಪ್ಯಾನಲ್ ಪ್ರಾಸಿಕ್ಯೂಟ್ ಏಜೆನ್ಸಿಯ ಪಾತ್ರವನ್ನು ವಹಿಸಲು ಸಾಧ್ಯವಿಲ್ಲ. ಚಾರ್ಜ್ಶೀಟ್ ಸಲ್ಲಿಸಲು ನಿರ್ದೇಶಿಸಲು ಸಾಧ್ಯವಿಲ್ಲ. ಫೇಸ್ಬುಕ್ ಅನ್ನು ಸಹ-ಆರೋಪಿಗಳನ್ನಾಗಿ ಮಾಡುವ ಚಾರ್ಜ್ಶೀಟ್ ಬಗ್ಗೆ ವಿಧಾನಸಭೆ ಪ್ಯಾನಲ್ ನೀಡಿದ ಹೇಳಿಕೆಗಳು ವ್ಯಾಪ್ತಿ ಮೀರಿದೆ. ಈ ಹೇಳಿಕೆಗಳು ತನಿಖೆಯ ನ್ಯಾಯಸಮ್ಮತತೆಗೆ ಅನುಕೂಲಕರವಾಗಿಲ್ಲ," ಎಂದು ಹೇಳಿದೆ. ಹಾಗೆಯೇ ಪ್ಯಾನಲ್ ಮುಂದೆ ಹಾಜರಾದಂತೆ ಪ್ರಶ್ನೆಗಳಿಗೆ ಉತ್ತರಿಸದಿರಲು ಫೇಸ್ಬುಕ್ ಅಧಿಕಾರಿಗಳು ಆಯ್ಕೆ ಮಾಡಬಹುದು ಎಂದು ನ್ಯಾಯಾಲಯ ಮತ್ತೆ ಸ್ಪಷ್ಟಪಡಿಸಿದೆ.
ದೆಹಲಿ ಸರ್ಕಾರವು ವಾದಿಸಿದಂತೆ, ಅಜಿತ್ ಮೋಹನ್ ಸಂಸದೀಯ ಸಮಿತಿಯ ಮುಂದೆ ಹಾಜರಾಗಿದ್ದರು. ಆದರೆ ಕೇಂದ್ರ ಸರ್ಕಾರವು ಮೋಹನ್ ಬೆಂಬಲಕ್ಕೆ ನಿಂತಿತ್ತು. ರಾಜ್ಯ ವಿಧಾನಸಭೆಗೆ "ನೋಟಿಸ್ ನೀಡುವ ಅಧಿಕಾರವಿಲ್ಲ, ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಮಧ್ಯವರ್ತಿಗಳಿಗೆ ಸಂಬಂಧಿಸಿದ ಕಾನೂನುಗಳು ಸಂಸತ್ತಿನ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿತು.
"ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಗಡಿಯುದ್ದಕ್ಕೂ ಜನರ ಮೇಲೆ ಪ್ರಭಾವ ಬೀರುವ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿವೆ. ಫೇಸ್ಬುಕ್ನಂತಹ ಈ ಪ್ಲ್ಯಾಟ್ಫಾರ್ಮ್ಗಳಲ್ಲಿನ ಚರ್ಚೆಗಳು ಸಮಾಜವನ್ನು ಧ್ರುವೀಕರಿಸುವ ಸಾಮರ್ಥ್ಯವನ್ನು ಹೊಂದಿವೆ. ಕಡಿಮೆ ತಿಳುವಳಿಕೆಯುಳ್ಳ ವ್ಯಕ್ತಿಗಳು ಮಾಹಿತಿಯನ್ನು ಪರಿಶೀಲಿಸದೆ ಅದನ್ನು ಸತ್ಯ ವಾರ್ತೆ ಎಂದು ನಂಬುತ್ತಾರೆ," ಎಂದು ಸಾಮಾಜಿಕ ಮಾಧ್ಯಮದ ಬಗ್ಗೆ ನ್ಯಾಯಾಲಯ ಹೇಳಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ವಿವಾದಾತ್ಮಕ ಪೌರತ್ವ ಕಾನೂನನ್ನು ಬೆಂಬಲಿಸುವ ಗುಂಪುಗಳು ಅದನ್ನು ವಿರೋಧಿಸುವವರ ನಡುವೆ ಘರ್ಷಣೆ ನಡೆದಿದ್ದು, 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
(ಒನ್ಇಂಡಿಯಾ ಸುದ್ದಿ)