'ಹೋರಾಟಗಾರನ ತಂದೆಯ ಪರಿಹಾರ ಮನವಿಗೆ ಶೀಘ್ರ ಪ್ರತಿಕ್ರಿಯಿಸಿ': ಮಣಿಪುರ ಸರ್ಕಾರಕ್ಕೆ ಸುಪ್ರೀಂ
ಇಂಫಾಲ, ಜು.20: ಕೋವಿಡ್ ಚಿಕಿತ್ಸೆಗೆ ಹಸುವಿನ ಸೆಗಣಿ ಹಾಗೂ ಗೋಮೂತ್ರ ಶಿಫಾರಸು ಮಾಡಿದ್ದ ಬಿಜೆಪಿಯ ನಾಯಕನನ್ನು ಟೀಕಿಸಿ ಮಾಡಲಾಗಿದ್ದ ಫೇಸ್ಬುಕ್ ಪೋಸ್ಟ್ಗಳ ವಿಚಾರದಲ್ಲಿ ದೇಶದ್ರೋಹ ಆರೋಪದಡಿ ಬಂಧಿಸಲ್ಪಟ್ಟ ಮಣಿಪುರ ಮೂಲದ ರಾಜಕೀಯ ಕಾರ್ಯಕರ್ತ ಲೈಚೋಂಬಮ್ ಎರೆಂಡ್ರೊರ ತಂದೆ ಸಲ್ಲಿಸಿದ್ದ ಪರಿಹಾರ ಮನವಿಗೆ ಸ್ಪಂದಿಸಲು ಸುಪ್ರೀಂಕೋರ್ಟ್ ಮಂಗಳವಾರ ಮಣಿಪುರ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ.
ಕೋವಿಡ್ ಚಿಕಿತ್ಸೆಗೆ ಹಸುವಿನ ಸೆಗಣಿ ಹಾಗೂ ಗೋಮೂತ್ರ ಶಿಫಾರಸು ಮಾಡಿದ್ದ ಬಿಜೆಪಿಯ ನಾಯಕನನ್ನು ಟೀಕೆ ಮಾಡಿ "ಹಸುವಿನ ಸಗಣಿ ಮತ್ತು ಹಸುವಿನ ಮೂತ್ರವು ಕೆಲಸ ಮಾಡುವುದಿಲ್ಲ" ಎಂದು 37 ವರ್ಷದ ಲೈಚೋಂಬಮ್ ಎರೆಂಡ್ರೊ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಮಾಡಿದ ಹಿನ್ನೆಲೆ ದೇಶದ್ರೋಹ ಆರೋಪದಡಿ ಸುಮಾರು ಎರಡು ತಿಂಗಳುಗಳ ಕಾಲ ಲೈಚೋಂಬಮ್ ಎರೆಂಡ್ರೊರನ್ನು ಬಂಧನದಲ್ಲಿ ಇರಿಸಲಾಗಿತ್ತು. ಸೋಮವಾರ ಸುಪ್ರೀಂ ತಕ್ಷಣ ಬಿಡುಗಡೆಗೆ ಆದೇಶಿಸಿತ್ತು.
'5 ಗಂಟೆಯೊಳಗೆ ಬಿಡುಗಡೆ ಮಾಡಿ': ಮಣಿಪುರ ಹೋರಾಟಗಾರನ ಬಂಧನದ ಬಗ್ಗೆ ಸುಪ್ರೀಂ ಆದೇಶ
ಈ ಪ್ರಕರಣದ ವಿಚಾರಣೆಯ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಕರಣವನ್ನು ನಾಳೆಯವರೆಗೆ ಮುಂದೂಡಬೇಕೆಂದು ಬಯಸಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಆದರೆ ನ್ಯಾಯಾಧೀಶರು ಕೂಡಲೇ ಲೈಚೋಂಬಮ್ ಎರೆಂಡ್ರೊರನ್ನು ಬಿಡುಗಡೆ ಮಾಡಿ ಎಂದು ಆದೇಶ ನೀಡಿದ್ದರು. ಇಂದು ಸಂಜೆ 5 ಗಂಟೆಯೊಳಗೆ ಬಿಡುಗಡೆ ಮಾಡಿ ಲೈಚೋಂಬಮ್ ಎರೆಂಡ್ರೊ ಇನ್ನೊಂದು ರಾತ್ರಿ ಜೈಲಿನಲ್ಲಿ ಕಳೆಯಬಾರದು ಎಂದಿದ್ದರು.
ಮಂಗಳವಾರ, ಮಣಿಪುರ ಸರ್ಕಾರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಕಾರ್ಯಕರ್ತನನ್ನು ಬಿಡುಗಡೆ ಮಾಡಲಾಗಿದೆ. ನಾವು ತಕ್ಷಣ ಅವನನ್ನು ಬಿಡುಗಡೆ ಮಾಡುವ ಸೂಚಕವನ್ನು ತೋರಿಸಿದ್ದೇವೆ. ಈಗ ಅದು ಇರಲಿ," ಎಂದು ಹೇಳಿದರು.
ಆದರೆ ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಚಂದ್ರಚೂಡ್, "ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಇದು ಗಂಭೀರ ವಿಷಯ. ಎರಡು ತಿಂಗಳ ಕಾಲ ಯಾರೋ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡರು. ಇದು ಗಂಭೀರ ವಿಷಯ ಮೆಹ್ತಾ," ಎಂದು ಒತ್ತಿ ಹೇಳಿದರು. ಹಾಗೆಯೇ ಕಾರ್ಯಕರ್ತ ಕಾನೂನು ನೆರವು ಪಡೆಯಬಹುದು ಎಂದರು.
ಕೋವಿಡ್ ಹೆಚ್ಚಳ: ಆರು ರಾಜ್ಯಗಳಿಗೆ ತಂಡ ಕಳುಹಿಸಿದ ಕೇಂದ್ರ ಸರ್ಕಾರ
ಲೈಚೋಂಬಮ್ ಎರೆಂಡ್ರೊರ ತಂದೆ ಲ್. ರಘುಮಣಿ ಸಿಂಗ್ ಪರ ಹಾಜರಾದ ವಕೀಲ ಶಾದನ್ ಫರಸತ್, "ತಮ್ಮ ಕಕ್ಷಿದಾರರು ಸಲ್ಲಿಸಿದ ಅರ್ಜಿಯಲ್ಲಿ ಎರಡು ಪ್ರಾರ್ಥನೆಗಳಿವೆ. ಮೊದಲನೆಯದಾಗಿ, ಮೇ 17 ರಂದು ತನ್ನ ಮಗನ ವಿರುದ್ಧ ಇಂಫಾಲ್ ಪಶ್ಚಿಮ ಜಿಲ್ಲೆಯ ಜಿಲ್ಲಾಧಿಕಾರಿ ಜಾರಿಗೊಳಿಸಿದ ಬಂಧನ ಆದೇಶವನ್ನು ರದ್ದುಪಡಿಸುವುದು ಮತ್ತು ಎರಡನೆಯದಾಗಿ, ಆತನ ಬಂಧನಕ್ಕೆ ಪರಿಹಾರವನ್ನು ಪಾವತಿಸುವುದು," ಎಂದು ತಿಳಿಸಿದ್ದಾರೆ.
"ನಂತರ, ನಾವು ಅರ್ಹತೆಗಳ ಮೇಲೆ ಬಂಧನದ ಕ್ರಮವನ್ನು ಸಮರ್ಥಿಸಬೇಕಾಗಿದೆ," ಎಂದು ಮಣಿಪುರ ಸರ್ಕಾರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಚಂದ್ರಚೂಡ್, "ಆದರೆ ಮೆಹ್ತಾ, ಇದು (ಪರಿಹಾರವನ್ನು ಕೋರುವುದು) ಅರ್ಜಿದಾರರ ಆಯ್ಕೆಯಾಗಿದೆ," ಎಂದು ಸ್ಪಷ್ಟಪಡಿಸಿದರು.
ಸೋಮವಾರ ನ್ಯಾಯಾಪೀಠವು ಸಾಮಾಜಿಕ ಕಾರ್ಯಕರ್ತನ ಶೀಘ್ರ ಬಿಡುಗಡೆಗೆ ಆದೇಶಿಸಿತ್ತು. "ಅರ್ಜಿದಾರನನ್ನು ಬಂಧನದಲ್ಲಿ ಇರಿಸುವುದರಿಂದ 21 ನೇ ವಿಧಿ ಅನ್ವಯ ಜೀವನ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ. ಈ ಹಿನ್ನೆಲೆ ಇಂದು ಸಂಜೆ 5 ಗಂಟೆಯೊಳಗೆ 1,000 ವೈಯಕ್ತಿಕ ಬಾಂಡ್ನೊಂದಿಗೆ ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ," ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್. ಶಾ ಹೇಳಿದ್ದರು.
(ಒನ್ಇಂಡಿಯಾ ಸುದ್ದಿ)