ಅತ್ಯಾಚಾರ ಕೇಸ್: ಚಿನ್ಮಯಾನಂದ ಜಾಮೀನು ರದ್ದುಗೊಳಿಸಲು ಸುಪ್ರೀಂ ನಕಾರ
ನವದೆಹಲಿ, ಮಾರ್ಚ್ 3: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ಅವರಿಗೆ ಅಲಹಾಬಾದ್ ಹೈಕೋರ್ಟ್ ನೀಡಿರುವ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಅಲ್ಲದೆ ಸಂತ್ರಸ್ತೆ ವಿದ್ಯಾರ್ಥಿನಿಗೆ ಸಾಕಷ್ಟು ರಕ್ಷಣೆ ನೀಡಲಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ದೃಢಪಡಿಸಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ಲಕ್ನೋದಿಂದ ದೆಹಲಿಗೆ ವರ್ಗಾಯಿಸಬೇಕು ಎಂಬ ಅರ್ಜಿ ವಿಚಾರಣೆಗೆ ಸಮ್ಮತಿಸಿದೆ.
ಚಿನ್ಮಯಾನಂದ ಅವರ ಟ್ರಸ್ಟ್ ಉತ್ತರ ಪ್ರದೇಶದ ಷಹಜಾನ್ಪುರದಲ್ಲಿ ಎಸ್ ಎಸ್ ಕಾನೂನು ಕಾಲೇಜು ನಡೆಸುತ್ತಿದ್ದು, ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದರು. ಚಿನ್ಮಯಾನಂದ ಅವರನ್ನು ಕಳೆದ ಸೆಪ್ಟೆಂಬರ್ನಲ್ಲಿ ಬಂಧಿಸಲಾಗಿತ್ತು.
ಸ್ವಾಮಿ ಚಿನ್ಮಯಾನಂದ ವಿರುದ್ಧ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
72 ವರ್ಷದ ಚಿನ್ಮಯಾನಂದ ವಿರುದ್ಧ ಐಪಿಸಿ ಸೆಕ್ಷನ್ 376 ಸಿ (ತಮ್ಮ ಅಧಿಕಾರ, ಸ್ಥಾನದ ಲಾಭ ಬಳಸಿಕೊಂಡು ಲೈಂಗಿಕ ಸಂಪರ್ಕ ಪಡೆಯುವುದು) ಸೆಕ್ಷನ್ 506 (ಬೆದರಿಕೆ ಅಪರಾಧ) ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಸೆಕ್ಷನ್ 354ಡಿ, ಸೆಕ್ಷನ್ 342ರ ಅಡಿಯಲ್ಲಿ ಸಹ ದೂರು ದಾಖಲು ಮಾಡಲಾಗಿತ್ತು.
ಆಗಸ್ಟ್ 24ರಂದು ವಿದ್ಯಾರ್ಥಿನಿ ನಾಪತ್ತೆಯಾದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಯುವತಿ, 'ಸಂತ ಸಮುದಾಯ ಹಿರಿಯ ಮುಖಂಡರೊಬ್ಬರು' ತಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದರು.