ಇಬ್ಬರು ನ್ಯಾಯಮೂರ್ತಿಗಳು ಬೊಬಡೆ ಅವರನ್ನು ಭೇಟಿಯಾಗಿಲ್ಲ: ಸುಪ್ರೀಂ
ನವದೆಹಲಿ, ಮೇ 5: ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಹಾಗೂ ಡಿ.ವೈ.ಚಂದ್ರಚೂಡ್ ಅವರು ನ್ಯಾ.ಎಸ್.ಎ.ಬೊಬಡೆಯನ್ನು ಭೇಟಿಯಾಗಿದ್ದರು ಎಂಬ ಮಾಧ್ಯಮದ ವರದಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ತನಿಖೆ ನಡೆಸಲು ರಚಿಸಿರುವ ಸಮಿತಿ ನೇತೃತ್ವವನ್ನು ಬೊಬಡೆ ವಹಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿಂದ ಹೇಳಿಕೆ ನೀಡಿದ್ದು, ಮೇ ಮೂರನೇ ತಾರೀಕು ಇಬ್ಬರು ನ್ಯಾಯಮೂರ್ತಿಗಳು ಬೊಬಡೆ ಅವರನ್ನು ಭೇಟಿ ಆಗಿದ್ದಾರೆ ಎಂಬುದು 'ಸಂಪೂರ್ಣ ತಪ್ಪು' ಎಂದು ತಿಳಿಸಲಾಗಿದೆ. ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿ ಕಚೇರಿಯಿಂದ ಹೇಳಿಕೆ ಬಂದಿದ್ದು, ಪ್ರಮುಖ ದಿನಪತ್ರಿಕೆಯೊಂದರಲ್ಲಿ ಇಬ್ಬರು ನ್ಯಾಯಮೂರ್ತಿಗಳು ಸಮಿತಿ ನೇತೃತ್ವ ವಹಿಸಿದವರನ್ನು ಭೇಟಿ ಆಗಿದ್ದಾರೆ ಎಂದು ವರದಿ ಆಗಿರುವುದು ದುರದೃಷ್ಟಕರ ಎಂದಿದೆ.
ಲೈಂಗಿಕ ದೌರ್ಜನ್ಯದ ಆರೋಪ, ವಿಚಾರಣೆಗೆ ಹಾಜರಾದ ಗೊಗೊಯ್
ಈಗ ರಚನೆ ಅಗಿರುವ ಸಮಿತಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಸುಪ್ರೀಂ ಕೋರ್ಟ್ ನ ಬೇರೆ ಯಾವುದೇ ನ್ಯಾಯಮೂರ್ತಿಗಳ ಅಭಿಪ್ರಾಯ ಇದರಲ್ಲಿ ಇಲ್ಲ ಎನ್ನಲಾಗಿದೆ. ಇನ್ನು ಪತ್ರಿಕೆಯೊಂದರಲ್ಲಿ ಆದ ವರದಿ ಪ್ರಕಾರ, ಮೇ ಐದರಂದು ನ್ಯಾಯಮೂರ್ತಿಗಳಾದ ನಾರಿಮನ್ ಹಾಗೂ ಚಂದ್ರಚೂಡ್ ಅವರು ನ್ಯಾ.ಬೊಬಡೆ ಅವರನ್ನು ಭೇಟಿ ಆಗಿ, ಒಬ್ಬ್ ವ್ಯಕ್ತಿಯ ಪರವಾಗಿ ಮುಂದುವರಿಯದಂತೆ ತಮ್ಮ ಅಭಿಪ್ರಾಯ ತಿಳಿಸಿದ್ದರು ಎಂದಿತ್ತು.
ಸುಪ್ರೀಂ ಕೋರ್ಟ್ ನ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಮುಖ್ಯ ನ್ಯಾಯಮೂರ್ತಿ ಗೊಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ತನ್ನ ಪರ ವಕೀಲರಿಗೆ ವಿಚಾರಣೆ ವೇಳೆ ಪಾಲ್ಗೊಳ್ಳಲು ಅವಕಾಶ ನೀಡಿಲ್ಲ ಎಂಬುದು ಸೇರಿ ಹಲವು ಆಕ್ಷೇಪ ಮಾಡಿ, ಸ್ವತಃ ಆಕೆ ವಿಚಾರಣೆಯಿಂದ ದೂರ ಉಳಿದಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ
ಪತ್ರಿಕೆಯಲ್ಲಿ ಅದ ವರದಿ ಪ್ರಕಾರ, ಸಮಿತಿ ನೆರವಿಗೆ ಒಬ್ಬರು ವಕೀಲರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸುವಂತೆ ನಾರಿಮನ್ ಹಾಗೂ ಚಂದ್ರಚೂಡ್ ಸಲಹೆ ಮಾಡಿದ್ದರು ಎನ್ನಲಾಗಿತ್ತು. ಬೊಬಡೆ ಹೊರತುಪಡಿಸಿ, ಸಮಿತಿಯಲ್ಲಿ ಮಹಿಳಾ ನ್ಯಾಯಮೂರ್ತಿಗಳಾದ ಇಂದು ಮಲ್ಹೋತ್ರಾ, ಇಂದಿರಾ ಬ್ಯಾನರ್ಜಿ ಇದ್ದಾರೆ.