ವೀರಪ್ಪನ್ ಬಂಟರು ನಿರಾಳ, ತಪ್ಪಿದ ಗಲ್ಲು ಶಿಕ್ಷೆ
ಮಂಗಳವಾರ ಆದೇಶ ಹೊರಡಿಸಿರುವ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ, ವೀರಪ್ಪನ್ ನಾಲ್ವರು ಸಹಚರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ ಮಾಡಿ ಆದೇಶ ನೀಡಿದೆ. ಮೀಸೆಕಾರ ಮಾದಯ್ಯ, ಬಿಲ್ವೇಂದ್ರ, ಜ್ಞಾನ ಪ್ರಕಾಶ್, ಸೈಮನ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಸುಪ್ರೀಂ ಆದೇಶದಿಂದ ಅವರಿಗೆ ಸಮಾಧಾನ ಸಿಕ್ಕಿದೆ. [ವೀರಪ್ಪನ್ ಸಹಚರರಿಗೆ ಗಲ್ಲು ಮುಂದೂಡಿಕೆ]
ಪಾಲಾರ್ ಬಳಿ 1993ರಲ್ಲಿ ನೆಲಬಾಂಬ್ ಸ್ಫೋಟಿಸಿ 15 ಪೊಲೀಸ್ ಸಿಬ್ಬಂದಿ ಸೇರಿ 22 ಜನರ ಸಾವಿಗೆ ಕಾರಣರಾಗಿದ್ದ ಈ ನಾಲ್ವರಿಗೆ ಸುಪ್ರೀಂಕೋರ್ಟ್ 2004ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕೆಂದು ನಾಲ್ವರು ಸಹಚರರು, ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. [ರಾಜೀವ್ ಹಂತಕರಿಗೆ ತಪ್ಪಿತು ಗಲ್ಲು ಶಿಕ್ಷೆ]
ಅಪರಾಧಿಯ ಕ್ಷಮಾದಾನ ಅರ್ಜಿಯು ತಿರಸ್ಕಾರಗೊಂಡ 14 ದಿನಗಳಲ್ಲಿ ಅವರನ್ನು ಗಲ್ಲಿಗೇರಿಸಬೇಕು. ಅದು ಸಾಧ್ಯವಾಗದಿದ್ದರೆ, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ಹೇಳಿದೆ. ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಆದ್ದರಿಂದ ಅವರನ್ನು ತಕ್ಷಣ ಗಲ್ಲಿಗೇರಿಸಬೇಕು. ಇಲ್ಲದಿದ್ದರೆ, ಜೀವಾವಧಿ ಶಿಕ್ಷೆಯಾಗಿ ಬದಲಾವಣೆ ಮಾಡಬೇಕು ಕೋರ್ಟ್ ಹೇಳಿದೆ.
ನಾಲ್ವರು ಕ್ಷಮಾದಾನ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಫೆ.13, 2013ರಂದು ತಿರಸ್ಕರಿಸಿದ್ದರು. ಆದ್ದರಿಂದ ಇವರಿಗೆ ಗಲ್ಲು ಶಿಕ್ಷೆ ಜಾರಿಯಾಗುವುದು ಖಚಿತವಾಗಿತ್ತು. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಸಹ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಬಾರದೆಂದು ಮನವಿ ಮಾಡಿದ್ದರು. ನಮ್ಮ ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾಗಿದೆ. ಆದ್ದರಿಂದ ನಮ್ಮ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಬೇಕೆಂದು ನಾಲ್ವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.