ಯಾಕೂಬ್ ಗಲ್ಲುಶಿಕ್ಷೆ ತಡೆ ಅರ್ಜಿ ವಿಚಾರಣೆ ಆರಂಭ
ನವದೆಹಲಿ, ಜುಲೈ 29: 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಗೆ ನೇಣು ಕುಣಿಕೆಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕ ಬೆನ್ನಲ್ಲೇ ಗಲ್ಲುಶಿಕ್ಷೆ ತಡೆಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರ ಸುಪ್ರೀಂಕೋರ್ಟಿನಲ್ಲಿ ಆರಂಭವಾಗಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ಅವರು ಹೊಸ ತ್ರಿಸದಸ್ಯ ಪೀಠ ರಚಿಸಿದ್ದಾರೆ. ಜಸ್ಟೀಸ್ಸ್ ದೀಪಕ್ ಮಿಶ್ರಾ, ಪ್ರಫುಲ್ಲಾ ಸಿ ಪಂತ್ ಹಾಗೂ ಅಮಿತಾವ್ ರಾಯ್ ಅವರು ಮೆಮನ್ ಜೀವನ್ಮರಣ ಪ್ರಶ್ನೆಗೆ ಉತ್ತರ ನೀಡಲಿದ್ದಾರೆ.
ಯಾಕೂಬ್ ಮೆಮನ್ ಪರ ಆರ್ ರಾಮಚಂದ್ರನ್ ಅವರು ವಾದಿಸುತ್ತಿದ್ದು, ಕ್ಯೂರೇಟರ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. [ನೇಣು ಕುಣಿಕೆಯಿಂದ ಯಾಕೂಬ್ ಗೆ ತಾತ್ಕಾಲಿಕ ರಿಲೀಫ್]
ಜುಲೈ 30ರಂದು ಗಲ್ಲುಶಿಕ್ಷೆ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ಮಂಗಳವಾರ ತಾತ್ಕಾಲಿಕ ತಡೆ ನೀಡಿತ್ತು. ತ್ರಿಸದಸ್ಯ ವಿಭಾಗೀಯ ನ್ಯಾಯಪೀಠಕ್ಕೆ ಪ್ರಕರಣ ವರ್ಗಾವಣೆಯಾಗಿತ್ತು. ತ್ರಿಸದಸ್ಯ ಪೀಠ ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ಮೆಮನ್ ಗಲ್ಲುಶಿಕ್ಷೆ ಸಾಧ್ಯವಿಲ್ಲ. ಹೀಗಾಗಿ ಬುಧವಾರ ಮೆಮನ್ ಗಲ್ಲುಶಿಕ್ಷೆ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ.
ಕ್ಯೂರೇಟರ್ ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಇದ್ದ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ವ್ಯತ್ಯಾಸವಿದೆ. 1996 ಸ್ಕಿಜೋಫ್ರೆನಿಯಾ ಕಾಯಿಲೆಯಿಂದ ಬಳಲುತ್ತಿದ್ದೇನೆ. 20 ವರ್ಷಗಳಿಂದ ಜೈಲುವಾಸ ಅನುಭವಿಸಿದ್ದೇನೆ. ನನಗೆ ನೀಡಿರುವ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ, ಗಲ್ಲು ಹಾಗೂ ಜೀವಾವಧಿ ಎರಡನ್ನು ಹೇಗೆ ಅನುಭವಿಸಲಿ ಎಂದು ಪ್ರಶ್ನಿಸಿದ್ದಾರೆ