'ರಾಹುಲ್' ಸಾವರ್ಕರ್ ಅಲ್ಲ ಎಂದಿದ್ದಕ್ಕೆ ಮಾನನಷ್ಟ ಮೊಕದ್ದಮೆ!
ದೆಹಲಿ, ಡಿಸೆಂಬರ್.15: ಕ್ಷಮೆ ಕೋರಲು ನಾನೇನು ರಾಹುಲ್ ಸಾವರ್ಕರ್ ಅಲ್ಲ ಎಂದ ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಎಐಸಿಸಿ ಮಾಜಿ ಅಧ್ಯಕ್ಷರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ವೀರ ಸಾವರ್ಕರ್ ಮೊಮ್ಮಗ ತೀರ್ಮಾನಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ನೀಡಿದ ಹೇಳಿಕೆ ದೇಶವಿರೋಧಿಯಾಗಿದೆ. ದೇಶಭಕ್ತ ಸಾವರ್ಕರ್ ಬಗ್ಗೆ ಈ ರೀತಿ ಹೇಳಿಕೆ ನೀಡಿದ ಅವರ ವಿರುದ್ಧ ದೂರು ದಾಖಲಿಸುವುದಾಗಿ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಹೇಳಿದ್ದಾರೆ.
ಕ್ಷಮೆ ಕೇಳಲು ನಾನೇನು ಸಾವರ್ಕರ್ ಅಲ್ಲ; ರಾಹುಲ್ ಗಾಂಧಿ
ಕಳೆದ ಡಿಸೆಂಬರ್.14ರಂದು ಶನಿವಾರ ದೆಹಲಿಯಲ್ಲಿ ನಡೆದ ಭಾರತ್ ಬಚಾವೋ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಆಡಿದ ಮಾತಿಗೆ ಕ್ಷಮೆ ಕೇಳಲು ನಾನೇನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ ಎಂದು ಕಿಡಿ ಕಾರಿದ್ದರು. ಈ ಹೇಳಿಕೆಯಿಂದ ಇದೀಗ ಬಿಜೆಪಿ ನಾಯಕರಷ್ಟೇ ಅಲ್ಲ, ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಕೂಡಾ ಕೆರಳಿ ಕೆಂಡವಾಗಿದ್ದಾರೆ.
ಉದ್ಧವ್ ಠಾಕ್ರೆ ಜೊತೆ ಮಾತನಾಡಲು ತೀರ್ಮಾನ
ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿರುವ ರಂಜಿತ್ ಸಾವರ್ಕರ್, ಈ ಬಗ್ಗೆ ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಹಿಂದುತ್ವದ ಅಜೆಂಡಾ ಮೇಲೆ ನಿಂತಿರುವ ಶಿವಸೇನೆ ಪಕ್ಷವು, ಹಿಂದೂ ಮುಖಂಡನಿಗೆ ಅವಮಾನ ಮಾಡಿರುವ ರಾಹುಲ್ ಗಾಂಧಿ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
'ಕೈ' ಸಚಿವರನ್ನು ಸಂಪುಟದಿಂದ ಹೊರಗಟ್ಟಲು ಮನವಿ
ಹಿಂದುತ್ವವೇ ಶಿವಸೇನೆಯ ಬೆನ್ನೆಲುಬು. ಇಂಥ ಪಕ್ಷವು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆ ಸೇರಿಕೊಂಡು ಸರ್ಕಾರವನ್ನು ರಚಿಸಿದೆ. ಈಗಲಾದರೂ ಶಿವಸೇನೆ ಎಚ್ಚೆತ್ತುಕೊಳ್ಳಬೇಕಿದೆ. ರಾಜಕಾರಣಕ್ಕಿಂತ ಹೆಚ್ಚಾಗಿ ಪಕ್ಷದ ಸಿದ್ದಾಂತವನ್ನು ಗೌರವಿಸಬೇಕಿದೆ. ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ತಕ್ಷಣವೇ ಶಿವಸೇನೆ ಮುರಿದುಕೊಳ್ಳಬೇಕು. ಕಾಂಗ್ರೆಸ್ ಸಚಿವರನ್ನು ಸಂಪುಟದಿಂದ ಹೊರಗೆ ಕಳುಹಿಸಬೇಕು ಎಂದು ರಂಜಿತ್ ಸಾವರ್ಕರ್ ಆಗ್ರಹಿಸಿದ್ದಾರೆ.
"ಕಾಂಗ್ರೆಸ್ ನಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ"
ದೇಶದ ಸ್ವಾತಂತ್ರ್ಯಕ್ಕೋಸ್ಕರ ನೂರಾರು ಮಂದಿ ಹೋರಾಟ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಯಾರೂ ಕೂಡಾ ಅವಹೇಳನಕಾರಿಯಾಗಿ ಮಾತನಾಡಬಾರದು. ಆದರೆ, ಕಾಂಗ್ರೆಸ್ ನಾಯಕರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರನ್ನೇ ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ರಂಜಿತ್ ಸಾವರ್ಕರ್ ಆರೋಪಿಸಿದ್ದಾರೆ.
ಕ್ಷಮೆ ಕೋರುವುದಿಲ್ಲ ಎಂದಿದ್ದ ರಾಹುಲ್ ಗಾಂಧಿ
ದೆಹಲಿಯಲ್ಲಿ ನಡೆದ ಭಾರತ್ ಬಚಾವೋ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ಕಿಡಿ ಕಾರಿದ್ದರು. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಮೇಕ್ ಇನ್ ಇಂಡಿಯಾ ಬದಲು ರೇಪ್ ಇನ್ ಇಂಡಿಯಾ ಆಗುತ್ತಿದೆ ಎಂದು ದೂರಿದ್ದರು. ಬಿಜೆಪಿ ಸರ್ಕಾರಗಳು ಅಸ್ತಿತ್ವದಲ್ಲಿರುವ ರಾಜ್ಯಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಮೇಕ್ ಇನ್ ಇಂಡಿಯಾ ಬದಲು ರೇಪ್ ಇನ್ ಇಂಡಿಯಾ ಆಗುತ್ತಿದೆ ಎಂದಿದ್ದರು. ಈ ಬಗ್ಗೆ ಕ್ಷಮೆ ಕೋರುವಂತೆ ಬಿಜೆಪಿ ಆಗ್ರಹಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿ, ಆಡಿತ ಮಾತಿನ ಬಗ್ಗೆ ಕ್ಷಮೆ ಕೋರಲು ನಾನೇನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ ಎಂದು ಹೇಳಿದ್ದರು.