ಶಾಲೆಗಳಲ್ಲಿ ಸಂಸ್ಕೃತ ಶ್ಲೋಕ ಧಾರ್ಮಿಕ ಹಕ್ಕಿನ ಉಲ್ಲಂಘನೆಯೇ?
ನವದೆಹಲಿ, ಜನವರಿ 29: ದೇಶದಾದ್ಯಂತ ಕೇಂದ್ರೀಯ ವಿದ್ಯಾಲಯದ ಶಾಲೆಗಳಲ್ಲಿ ಹಿಂದೂ ಶ್ಲೋಕಗಳಾದ 'ಅಸತೋ ಮಾ ಸದ್ಗಮಯಾ' ಮತ್ತು 'ಓಂ ಸಹನಾ ವವತು' ಹೇಳುವುದನ್ನು ಕಡ್ಡಾಯಗೊಳಿಸಿರುವುದು ಅಲ್ಪಸಂಖ್ಯಾತ ಧರ್ಮೀಯರ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆಯೇ?
ಹೀಗೊಂದು ತಕರಾರಿನೊಂದಿಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿರುವ ಸುಪ್ರೀಂಕೋರ್ಟ್ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
ಜಾವಗಲ್ ಶ್ರೀನಾಥ್ ರಿಂದ ಸಂಸ್ಕೃತ ಸಂಭಾಷಣೆ ಕೇಳಿ, ಇದು ಸಂಸ್ಕೃತ ಭಾರತೀ ಸಮ್ಮೇಳನ
ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತ ಶ್ಲೋಕಗಳ ಪಠಣವನ್ನು ಕಡ್ಡಾಯಗೊಳಿಸಿರುವುದು ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘನೆ ಮಾಡುವುದು ಮಾತ್ರವಲ್ಲದೆ ನಾಸ್ತಿಕರು, ಸಂದೇಹವಾದಿಗಳು, ವಿಚಾರವಾದಿಗಳು ಮತ್ತು ಈ ಪ್ರಾರ್ಥನಾ ವ್ಯವಸ್ಥೆಯಲ್ಲಿ ನಂಬಿಕೆ ಇರದ ಇತರರ ಹಕ್ಕುಗಳನ್ನೂ ಉಲ್ಲಂಘಿಸಿದಂತಾಗುತ್ತದೆ ಎಂದು ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ನಿವಾಸಿ ವಿನಾಯಕ್ ಶಾ ಎಂಬುವವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಕೇಂದ್ರೀಯ ವಿದ್ಯಾಲಯಗಳಲ್ಲಿ ಪಠಿಸುವ ಶ್ಲೋಕಗಳು ಹಿಂದೂ ಧರ್ಮದ ಪ್ರಚಾರ ಮಾಡುತ್ತವೆ. ಇದು ಸಂವಿಧಾನದ 19 ಮತ್ತು 28 (1) ಪರಿಚ್ಛೇದಗಳ ಉಲ್ಲಂಘನೆಯಾಗಿದೆ. ಈ ಪ್ರಾರ್ಥನೆಗಳು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಅಡ್ಡಿಯಾಗಿವೆ. ಮಕ್ಕಳು ಸಮಸ್ಯೆಗಳಿಗೆ ವಾಸ್ತವಿಕ ಪರಿಹಾರ ಕಂಡುಕೊಳ್ಳುವ ಬದಲು ಅವುಗಳ ಪರಿಹಾರಕ್ಕೆ ದೇವರನ್ನು ಪ್ರಾರ್ಥಿಸುವ ಅಭ್ಯಾಸವನ್ನೇ ಬೆಳೆಸಿಕೊಳ್ಳುವಂತೆ ಇದು ಮಾಡುತ್ತದೆ ಎಂದು ಅವರು ವಾದಿಸಿದ್ದಾರೆ.
ತಂತ್ರಜ್ಞಾನದಲ್ಲಿ ಸಂಸ್ಕೃತ ಭಾಷೆ ಬಳಕೆಯಾಗಲಿದೆ:ಅನಂತ್ ಕುಮಾರ್ ಹೆಗಡೆ
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಶ್ಲೋಕಗಳು ಹಿಂದೂ ಧರ್ಮಗ್ರಂಥಗಳಿಂದ ಬಂದಿರುವುದು ನಿಜ. ಆದರೆ, ಇವು ಸಾರ್ವತ್ರಿಕ ಸತ್ಯಗಳನ್ನು ಒಳಗೊಂಡಿವೆ. ಹೀಗಾಗಿ ಅವುಗಳ ಗುಣದಲ್ಲಿ ಧಾರ್ಮಿಕತೆಯಿದೆ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ಸಂಸ್ಕೃತದಲ್ಲಿ ಇರುವುದೆಲ್ಲವೂ ಗುಣದಲ್ಲಿ ಧಾರ್ಮಿಕತೆಯನ್ನು ಹೊಂದಿಲ್ಲ. ನಾಳೆ ಮತ್ತೊಬ್ಬರು, ಶಾಲೆಗಳಲ್ಲಿ ಬೋಧಿಸುವ 'ಪ್ರಾಮಾಣಿಕತೆ ಅತ್ಯುತ್ತಮ ನೀತಿ' ಎಂಬ ವಾಕ್ಯವು ಇಂಗ್ಲಿಷ್ನಿಂದ ಬಂದಿರುವುದರಿಂದ ಅದು ಕ್ರೈಸ್ತ ಧರ್ಮವನ್ನು ಬಿಂಬಿಸುತ್ತದೆ ಎಂದು ವಾದಿಸಬಹುದು ಎಂದು ಹೇಳಿದ್ದಾರೆ.
ಮೋದಿ ಜತೆ ಸಂಸ್ಕೃತದಲ್ಲಿ ಮಾತಾಡಿದ ಬೆಂಗ್ಳೂರಿನ ಹುಡ್ಗಿ ತಂದೆ ಸಂದರ್ಶನ
ಸುಪ್ರೀಂಕೋರ್ಟ್ನ ಲಾಂಛನವನ್ನು ಉಲ್ಲೇಖಿಸಿ ಗಮನ ಸೆಳೆದ ಮೆಹ್ತಾ, 'ಇವು ಭಗವದ್ಗೀತೆ ಮತ್ತು ಮಹಾಭಾರತದಿಂದ ಹುಟ್ಟಿಕೊಂಡಿರುವವು. ಹಿಂದೂ ಧರ್ಮಗ್ರಂಥದಿಂದ ಪಡೆದುಕೊಂಡ ಲಾಂಛನವನ್ನು ಬಳಸಿರುವುದರಿಂದ ಸುಪ್ರೀಂಕೋರ್ಟ್ ಜಾತ್ಯಾತೀತ ಅಲ್ಲ ಎಂದಾಗುತ್ತದೆಯೇ? ಸಾರ್ವತ್ರಿಕ ಸತ್ಯಗಳು ಅದರ ಮೂಲ ಮತ್ತು ಹುಟ್ಟನ್ನು ಗಮನಿಸದೆ ಜೀವನದಲ್ಲಿ ಅಳವಡಿಸಿಕೊಳ್ಳುವಂತಹವು. ಹೈಕೋರ್ಟ್ಗಳ ಲಾಂಛನಗಳಲ್ಲಿ ಸತ್ಯಮೇವ ಜಯತೇ ಎಂಬ ಸಾಲಿದೆ. ಇದು ಕೂಡ ಹಿಂದೂ ಕೃತಿಗಳಿಂದ ಹುಟ್ಟಿದ ಶ್ಲೋಕ ಎಂದು ಮೆಹ್ತಾ ವಾದಿಸಿದ್ದಾರೆ.