ಹಿಂದೂ ಭಯೋತ್ಪಾದನೆ ಸಿದ್ಧಾಂತ: ಕಾಂಗ್ರೆಸ್ ಕ್ಷಮೆಗೆ ಜೇಟ್ಲಿ ಅಗ್ರಹ
ನವದೆಹಲಿ, ಮಾರ್ಚ್ 29: ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣದಲ್ಲಿ 'ಹಿಂದೂ ಭಯೋತ್ಪಾದನೆ' ಎಂಬ ಸುಳ್ಳು ಸಿದ್ಧಾಂತ ಹರಿಬಿಟ್ಟಿದ್ದ ಕಾಂಗ್ರೆಸ್, ಅದಕ್ಕಾಗಿ ಹಿಂದೂ ಸಮುದಾಯದ ಕ್ಷಮೆ ಕೋರಬೇಕು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಆಗ್ರಹಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಜಕೀಯ ಲಾಭ ಪಡೆದುಕೊಳ್ಳುವ ಸಲುವಾಗಿ ಕಾಂಗ್ರೆಸ್ 'ಹಿಂದೂ ಭಯೋತ್ಪಾದನೆ'ಯ ಸುಳ್ಳು ಸಿದ್ಧಾಂತವನ್ನು ಹರಿಬಿಟ್ಟಿತು. ಇದರ ಮೂಲಕ ಇಡೀ ಹಿಂದೂ ಸಮುದಾಯಕ್ಕೆ ಕಳಂಕ ತಂದೊಟ್ಟಿತು. ಈಗ ಅದು ಇಡೀ ಹಿಂದೂ ಸಮುದಾಯದ ಕ್ಷಮೆ ಕೋರಬೇಕು ಎಂದು ಜೇಟ್ಲಿ ಒತ್ತಾಯಿಸಿದರು.
ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ : ಆಸೀಮಾನಂದ ಸೇರಿ ನಾಲ್ವರು ನಿರ್ದೋಷಿ
ಯುಪಿಎ ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೂರು ಅಥವಾ ನಾಲ್ಕು ಅಂತಹ ಸಿದ್ಧಾಂತದ ಪ್ರಕರಣಗಳನ್ನು ಹೆಣೆಯಲಾಗಿತ್ತು. ಆದರೆ, ಅದಾವುದೂ ನ್ಯಾಯಾಲಯದಲ್ಲಿ ಊರ್ಜಿತಗೊಳ್ಳಲಿಲ್ಲ ಎಂದು ಆರೋಪಿಸಿದರು.
ಸಂಜೋತಾ ಎಕ್ಸ್ಪ್ರೆಸ್ ಪ್ರಕರಣದ ವಿಚಾರಣೆ ವೇಳೆ ಯಾವುದೇ ಸಾಕ್ಷ್ಯ ಲಭ್ಯವಿಲ್ಲ ಎಂದು ನ್ಯಾಯಾಲಯದ ತೀರ್ಪು ಸ್ಪಷ್ಟಪಡಿಸಿದೆ. ಅನೇಕ ಜನರು ಮೃತಪಟ್ಟರು. ಇದಕ್ಕೆ ಯಾರು ಹೊಣೆಗಾರಿಕೆ ತೆಗೆದುಕೊಳ್ಳುತ್ತಾರೆ? ಇದಕ್ಕೆ ಯುಪಿಎ ನಾಯಕತ್ವವೇ ಹೊಣೆ. ಹಿಂದೂ ಭಯೋತ್ಪಾದನೆಯ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಯುಪಿಎ ಸರ್ಕಾರವು ತಪ್ಪು ಜನರನ್ನು ಬಂಧಿಸಿತ್ತು ಎಂದರು.
ಮಂಪರು ಪರೀಕ್ಷೆಯಲ್ಲಿ ಬಯಲಾಯ್ತು ಸಂಜೋತಾ ದುರಂತದ ರಹಸ್ಯ
ಸಿದ್ಧಾಂತವನ್ನು ಸೃಷ್ಟಿಸುವ ಸಲುವಾಗಿ ನಕಲಿ ಸಾಕ್ಷ್ಯಗಳ ಆಧಾರದಲ್ಲಿ ಅವರು ಪ್ರಕರಣ ದಾಖಲಿಸಿದ್ದರು. ಆದರೆ, ಕೊನೆಗೆ ಇದನ್ನು ನ್ಯಾಯಾಲಯ ನಿರ್ಧರಿಸಬೇಕಿತ್ತು. ಇದು ಸಾಕ್ಷ್ಯಗಳಿಲ್ಲದ ಪ್ರಕರಣ ಎಂದು ಕೋರ್ಟ್ ಹೇಳಿದೆ. 'ಹಿಂದೂ ಭಯೋತ್ಪಾದನೆ' ಪದ ಟಂಕಿಸಿದವರು ಈಗ ಭಕ್ತಿ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದರು.