ಸೈಫ್ ಅಲಿ ಖಾನ್ ಗೆ ಪದ್ಮಶ್ರೀ ಕೈ ತಪ್ಪುವ ಭೀತಿ
ನವದೆಹಲಿ, ಆ.7: ಹಿಂದಿ ಚಿತ್ರನಟ, ಛೋಟಾ ನವಾಬ್ ಎಂದು ಕರೆಯಲ್ಪಡುವ ಸೈಫ್ ಅಲಿಖಾನ್ ಅವರು ತಮಗೆ ದೊರೆತಿರುವ ಪದ್ಮಶ್ರೀ ಪ್ರಶಸ್ತಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತರೊಬ್ಬರು ಸೈಫ್ ಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದನ್ನು ಪ್ರಶ್ನಿಸಿ ಅರ್ಜಿ ಹಾಕಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿರುವ ಎಸ್ ಸಿ ಅಗರ್ ವಾಲ್ ಅವರು ಸೈಫ್ ಅವರಿಗೆ ನೀಡಿರುವ ಪ್ರಶಸ್ತಿ ಹಿಂಪಡೆಯುವಂತೆ ಗೃಹ ಸಚಿವಾಲಯಕ್ಕೆ ಅರ್ಜಿ ಹಾಕಿದ್ದಾರೆ. 2010ರಲ್ಲಿ ಶರ್ಮಿಳಾ ಠಾಗೋರ್ ಹಾಗೂ ನವಾಬ್ ಪಟೌಡಿ ಅವರ ಪುತ್ರ ಸೈಫ್ ಅಲಿ ಖಾನ್ ಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಸೈಫ್ ಅಲಿಖಾನ್ ಅವರು ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಮುಂಬೈ ಕೋರ್ಟಿನಲ್ಲಿ ಇವರ ವಿರುದ್ಧ ಚಾರ್ಜ್ ಶೀಟ್ ಕೂಡಾ ಸಲ್ಲಿಕೆಯಾಗಿದೆ. ಹೀಗಿರುವಾಗ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ಪ್ರಶಸ್ತಿಯ ಘನತೆಗೆ ಧಕ್ಕೆ ತಂದಂತೆ ಆಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅಗರವಾಲ್ ಅವರ ಅರ್ಜಿಯನ್ನು ಸ್ವೀಕರಿಸಿರುವ ಗೃಹ ಸಚಿವಾಲಯ, ಈ ಬಗ್ಗೆ ಶೀಘ್ರದಲ್ಲೇ ತನಿಖೆ ನಡೆಸುವುದಾಗಿ ಹೇಳಿದೆ.
ತಾಜ್ ಹೋಟೆಲ್ ನ ಗಲಾಟೆ ಮುಳುವಾಗಿದೆ
ತಾಜ್ ಹೋಟೆಲಿನ ವಸಾಬಿ ರೆಸ್ಟೋರೆಂಟ್ನಲ್ಲಿ ಫೆಬ್ರವರಿ 22,2012ರಂದು ರಾತ್ರಿ ಭೋಜನ ಕೂಟದಲ್ಲಿ ಸೈಫ್ ತಮ್ಮ ಭಾವಿ ಪತ್ನಿ ಕರೀನಾ ಜೊತೆ ಪಾಲ್ಗೊಂಡಿದ್ದಾಗ ಗಲಾಟೆ ನಡೆದಿತ್ತು.
ಹೋಟೆಲ್ ನಲ್ಲಿ ಏರು ಧ್ವನಿಯಲ್ಲಿ ಸೈಫ್ ಮಾತನಾಡುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಕ್ಬಾಲ್ ಶರ್ಮಾ ಎಂಬ ಅನಿವಾಸಿ ಭಾರತೀಯ ಉದ್ಯಮಿ ವಿರುದ್ಧ ಮಾತಿನ ಚಕಮಕಿ ನಡೆದಿತ್ತು. ಮಾತಿಗೆ ಮಾತು ಬೆಳೆದು ಶರ್ಮಾ ಮುಖಕ್ಕೆ ಸೈಫ್ ಪಂಚ್ ಕೊಟ್ಟಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಕೋರ್ಟಿನಲ್ಲಿ ಸೈಫ್ ವಿರುದ್ಧ ಚಾರ್ಜ್ ಶೀಟ್ ಹಾಕಲಾಗಿದೆ. [ವಿವರ ಇಲ್ಲಿ ಓದಿ]ಆಮದು ಕಾರು ಪ್ರಕರಣದಲ್ಲಿ ಬಚಾವ್
ಛೋಟಾ ನವಾಬ್ ಸೈಫ್, ಸಣ್ಣ ಮೊತ್ತ ಭರಿಸದೆ ತನ್ನ ಆಮದು ಕಾರಿನೊಂದಿಗೆ ಸಿಕ್ಕಿಬಿದ್ದು, ದೊಡ್ಡ ಮೊತ್ತದ ದಂಡ (ಮೂರುಪಟ್ಟು ) ತುಂಬಬೇಕಾದ ಪ್ರಸಂಗ ನಡೆದಿತ್ತು. ಎಂಟು ವರ್ಷ ಹಳೆಯದಾದ ಕಾರು ಆಮದು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸೈಫ್ ಅಲಿಯನ್ನು ನಾಲ್ಕು ತಾಸು ವಿಚಾರಣೆ ನಡೆಸಿದ್ದರು. ವಿದೇಶಿ ಕಾರು ಆಮದು ಪ್ರಕರಣ ದಾಖಲೆ ಪರಿಶೀಲಿಸುತ್ತಿರುವ ಅಧಿಕಾರಿಗಳು 2004ರಲ್ಲಿ ದುಬೈನಿಂದ ಟೊಯೋಟಾ ಲ್ಯಾಂಡ್ ಕ್ರೂಸರ್ ವಾಹನವನ್ನು ಖರೀದಿಸಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿತ್ತು. [ವಿವರ ಇಲ್ಲಿದೆ]
ಕೃಷ್ಣಮೃಗ ಹತ್ಯೆ ಪ್ರಕರಣದ ಆರೋಪ
ಕೃಷ್ಣಮೃಗ ಹತ್ಯೆ ಪ್ರಕರಣ: ನಟ ಸಲ್ಮಾನ್ ಖಾನ್, ಸೈಫ್ ಆಲಿ ಖಾನ್, ಟಬು, ನೀಲಂ ಹಾಗೂ ಸೋನಾಲಿ ಬೇಂದ್ರೆ ಈ ಪ್ರಕರಣದ ಆರೋಪಿಗಳು. ಸಂರಕ್ಷಿತ ಪ್ರಾಣಿ ಕೃಷ್ಣಮೃಗ ಬೇಟೆಯಾಡಿರುವ ಸಲ್ಲು ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ. ಆದರೆ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಅಡಿ ದಾಖಲಾಗಿದ್ದ ಪ್ರಕರಣವನ್ನು ಕೋರ್ಟ್ ಕೈಬಿಟ್ಟಿದೆ. ತಾರೆಗಳಾದ ಸೈಫ್ ಆಲಿ ಖಾನ್, ಟಬು, ನೀಲಂ ಹಾಗೂ ಸೋನಾಲಿ ಬೇಂದ್ರೆ ಅವರು ಸಲ್ಲು ಅವರನ್ನು ಪ್ರಚೋದಿಸಿದ ಕಾರಣ ಅವರ ವಿರುದ್ಧವೂ ವಿಚಾರಣೆ ನಡೆಯುತ್ತಿದೆ.
ಕೇಂದ್ರ ಸರ್ಕಾರದ ಮಲತಾಯಿ ಧೋರಣೆ?
ಹಲವು ಹೆಂಡತಿಯರು, ಕ್ರಿಮಿನಲ್ ಕೇಸುಗಳು, ಆದರು ಪದ್ಮಶ್ರೀ ಪ್ರಶಸ್ತಿ. ಅದೇ ದಕ್ಷಿಣ ಭಾರತ ಮೇರು ನಟರುಗಳಾದ ವಿಷ್ಣುವರ್ಧನ್, ಅಂಬರೀಶ್, ಶಿವರಾಜಕುಮಾರ್, ವಿಜಯ್, ನಾಗರ್ಜುನ್ ಇವರಿಗಿಂತ ಸೈಫ್ ಅವರು ದೊಡ್ದವರೇ, ಆದರೆ ಇವರಿಗೇಕಿಲ್ಲ? ಇದೆ ರೀತಿ ಅನೇಕ ಅನ್ಯಾಯಗಳನ್ನ ದಕ್ಷಿಣದವರಿಗೆ ಮಾಡುತ್ತಾ ಬಂದಿದ್ದಾರೆ , ಇಷ್ಟು ದಿನ ಸಹಿಸಿದ್ದು ಸಾಕು, ಇದೆ ರೀತಿ ಅನ್ಯಾಯಗಳು ಮುಂದುವರೆದರೆ, ಸಂಯುಕ್ತ ಸಂಸ್ಥಾನಕ್ಕೆ ದಕ್ಕೆ ಖಂಡಿತ ಹಿಂದಿ ನಟ ಸೈಫ್ ಅಲಿ ಖಾನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಮೂಲಕ ಕೇಂದ್ರ ಸರ್ಕಾರವೇ ಕಾನೂನನ್ನು ಮುರಿದಿದೆ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು.