ಇಂಡಿಯಾ ಫಾರ್ಮಾ 2021 ಬಂಡವಾಳ ಹೂಡಿಕೆ ಸಮಾವೇಶ ಆರಂಭ
ಬೆಂಗಳೂರು, ಫೆ. 25: ವೈದ್ಯಕೀಯ ಉಪಕರಣಗಳ ಉತ್ಪಾದನೆಯಲ್ಲಿ ಭಾರತವನ್ನು ಸಂಪೂರ್ಣ ಸ್ವಾವಲಂಬಿಯಾಗಿಸಲು ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿದ್ದು 2025ರ ವೇಳೆಗೆ ವೈದ್ಯಕೀಯ ವಲಯವು 3.6 ಲಕ್ಷ ಕೋಟಿ ರೂಪಾಯಿ (ಸುಮಾರು 50 ಶತಕೋಟಿ ಯು.ಎಸ್. ಡಾಲರ್) ಉದ್ಯಮವಾಗಿ ಬೆಳೆಯಲಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆ.
ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆಯು ಭಾರತೀಯ ವಾಣಿಜ್ಯ ಹಾಗೂ ಕೈಗಾರಿಕಾ ಸಂಘಗಳ ಒಕ್ಕೂಟ (ಫಿಕ್ಕಿ) ಮತ್ತು ಇನ್ವೆಸ್ಟ್ ಇಂಡಿಯಾ ಸಂಸ್ಥೆಯೊಂದಿಗೆ ದೆಹಲಿಯಲ್ಲಿ ಸಂಘಟಿಸಿರುವ ನಾಲ್ಕು ದಿನಗಳ 'ಇಂಡಿಯಾ ಫಾರ್ಮಾ 2021' ಹಾಗೂ 'ಇಂಡಿಯಾ ಮೆಡಿಕಲ್ ಡಿವೈಸ್ 2021' ಬಂಡವಾಳ ಹೂಡಿಕೆ ಸಮಾವೇಶವನ್ನು ಉದ್ಘಾಟಿಸಿ ಡಿವಿಎಸ್ ಮಾತನಾಡಿದರು.
ದೇಶದ ಬೇರೆ ಬೇರೆ ಭಾಗಗಳಲ್ಲಿ ನಾಲ್ಕು ಮೆಡಿಕಲ್ ಡಿವೈಸ್ ಪಾರ್ಕ್ (ವೈದ್ಯಕೀಯ ಉಪಕರಣ ಉತ್ಪಾದನೆ ಕೇಂದ್ರಿತವಾದ ಕೈಗಾರಿಕಾ ಕ್ಲಸ್ಟರ್) ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕೈಗಾರಿಕಾ ಕ್ಲಸ್ಟರುಗಳಲ್ಲಿ ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಕಲ್ಪಿಸಲು ಕೇಂದ್ರವು ಬಂಡವಾಳ ಹೂಡುತ್ತಿದೆ. ಅಲ್ಲದೆ 3,420 ಕೋಟಿ ರೂಪಾಯಿ ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ಯೋಜನೆಯನ್ನು ರೂಪಿಸಲಾಗಿದೆ ಎಂದು ಡಿವಿಎಸ್ ವಿವರಿಸಿದರು.
ಔಷಧೋದ್ಯಮ ತಾಣವಾಗಿ ಭಾರತ
ಭಾರತವನ್ನು ಜಗತ್ತಿನ ಔಷಧೋದ್ಯಮ ತಾಣವಾಗಿ ರೂಪಿಸಲು ಕೂಡಾ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ದೇಶದ ಮೂರು ಕಡೆ ಬಲ್ಕ್ ಡ್ರಗ್ ಕೈಗಾರಿಕಾ ಕ್ಲಸ್ಟರುಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಇವುಗಳಲ್ಲಿ ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಕಲ್ಪಿಸಲು ನಮ್ಮ ಇಲಾಖೆಯು ತಲಾ 1 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಇಲ್ಲಿ ಕಲ್ಪಿಸಲಾಗುವ ಆಧುನಿಕ ಸೌಲಭ್ಯಗಳನ್ನು ಎಲ್ಲ ಕಂಪನಿಗಳು ಬಳಸಿಕೊಳ್ಳಬಹುದಾಗಿದೆ. ಹಾಗೆಯೇ ಈ ವಲಯದಲ್ಲಿ ಕೂಡಾ ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಈ ಮೊದಲು 6,940 ಕೋಟಿ ರೂಪಾಯಿ ಒದಗಿಸಲಾಗಿತ್ತು ಎಂದು ಸದಾನಂದಗೌಡ ಅವರು ಹೇಳಿದ್ದಾರೆ.
ಯೋಜನೆಗೆ ಹೆಚ್ಚುವರಿ ಅನುದಾನ
ಯೋಜನೆಗೆ ಈಗ ಹೆಚ್ಚುವರಿಯಾಗಿ 15 ಸಾವಿರ ಕೋಟಿ ರೂಪಾಯಿ ಒದಗಿಸಲಾಗಿದೆ. ಈ ಪ್ರಸ್ತಾವನೆಗೆ ನಿನ್ನೆ (ಫೆ 24) ನಡೆದ ಕೇಂದ್ರ ಸಂಪುಟ ಸಭೆಯು ಅನುಮತಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಿ ಕಂಪನಿ ಸ್ಥಾಪಿಸಿ ವ್ಯವಹಾರ ಮಾಡುವುದು ದಿನೇದಿನೇ ಸುಲಭವಾಗುತ್ತಿದೆ. ಕೈಗಾರಿಕಾ ಸ್ನೇಹಿ ನೀತಿಗಳನ್ನು ಜಾರಿಗೊಳಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಕೂಡಾ ಭಾರತದಲ್ಲಿ ಅತಿಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗಿದೆ. ಔಷಧೋದ್ಯಮದಲ್ಲಿಯೂ ದೊಟ್ಟ ಮಟ್ಟದಲ್ಲಿ ಬಂಡವಾಳ ಹೂಡಿಕೆಯಾಗುತ್ತಿದೆ. ಹೀಗಾಗಿ ಭಾರತದ ಔಷಧ ವಲಯವು 2030ರ ವೇಳೆಗೆ ವಾರ್ಷಿಕವಾಗಿ 130 ಶತಕೋಟಿ ಯು.ಎಸ್. ಡಾಲರ್ (ಸುಮಾರು 9.44 ಲಕ್ಷ ಕೋಟಿ ರೂ) ವಹಿವಾಟು ನಡೆಸುವ ಉದ್ಯಮವಾಗಿ ಬೆಳೆಯುವುದೆಂದು ನಿರೀಕ್ಷಿಸಲಾಗಿದೆ ಎಂದು ಸದಾನಂದ ಗೌಡ ಹೇಳಿದರು.
ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿ
ಔಷಧ ಕ್ಷೇತ್ರದಲ್ಲಿ ಭಾರತವು ಈಗಾಗಲೇ ಸಾಕಷ್ಟು ಸಾಧನೆ ಮಾಡಿದೆ. ಕೊರೊನಾ ಸಂದರ್ಭದಲ್ಲಿ ಜಗತ್ತು ಭಾರತದ ಸಾಮರ್ಥ್ಯವೇನೆಂಬುದನ್ನು ನೋಡಿದೆ. ತುರ್ತು ಸಂದರ್ಭದಲ್ಲಿ ಔಷಧಗಳಿಗಾಗಿ ಭಾರತವನ್ನು ಅವಲಂಬಿಸಬಹುದು ಎಂಬುದು ಜಗತ್ತಿಗೆ ಮನವರಿಕೆಯಾಗಿದೆ. ಯಾಕೆಂದರೆ ಕೊರೊನಾ ಸಂಕಷ್ಟದ ಸಮಯದಲ್ಲೂ ಭಾರತದ ಔಷಧೋದ್ಯಮವು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಅಮೋಘ ಸೇವೆ ಸಲ್ಲಿಸಿತು. ಜಗತ್ತಿನ ಬಹುತೇಕ ದೇಶಗಳಿಗೆ ಜೀವರಕ್ಷಕ ಔಷಧಗಳನ್ನು ಪೂರೈಸಿತು. ಈಗ ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ದೇಶದ ಜನರಿಗಷ್ಟೇ ಅಲ್ಲದೆ ವಿಶ್ವದ ಅನೇಕ ರಾಷ್ಟ್ರಗಳಿಗೆ ಇವನ್ನು ಪೂರೈಸಲಾಗುತ್ತಿದೆ. ಇದರಿಂದ ಜಗತ್ತಿನಲ್ಲಿ ಭಾರತದ ಗೌರವ ಇನ್ನಷ್ಟು ಹೆಚ್ಚುವಂತಾಯಿತು. ಇದಕ್ಕಾಗಿ ಔಷಧೋದ್ಯಮದ ಉದ್ದಿಮೆದಾರರನ್ನು ನಮ್ಮ ವಿಜ್ಞಾನಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಸಚಿವರು ಹೇಳಿದರು.
ಕೊರೊನಾ ಲಸಿಕೆಗೆ ಪೆಟೆಂಟ್ ಬೇಡ!
ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶದಲ್ಲಿ ಭಾಗವಹಿಸಿದ ಕೈಗಾರಿಕಾ ಹಾಗೂ ರೇಲ್ವೆ ಸಚಿವ ಪಿಯುಷ್ ಗೋಯಲ್ ಅವರು ಮಾತನಾಡಿ, ಕೊರೊನಾ ಮನುಕುಲಕ್ಕೇ ಸವಾಲು ಎಸೆದಿದ್ದು ಇದರ ಲಸಿಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೆ ಕಂಪನಿಗಳು ಬೌದ್ಧಿಕಹಕ್ಕು ಸ್ಥಾಪಿಸಬಾರದು ಎಂಬುದು ಭಾರತದ ನಿಲುವಾಗಿದೆ. ಭಾರತದ ಈ ಬೇಡಿಕೆಗೆ ಈಗಾಗಲೇ 57 ರಾಷ್ಟ್ರಗಳು ತಮ್ಮ ಧ್ವನಿಗೂಡಿಸಿವೆ ಎಂದರು. ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಕ್ ಮಾಂಡವಿಯಾ, ಫಿಕ್ಕಿ ಪದಾಧಿಕಾರಿಗಳು, ಇಲಾಖೆಯ ಹಿರಿಯ ಅಧಿಕಾರಿಗಳು, ಉದ್ದಿಮೆದಾರರು, ಹೂಡಿಕೆದಾರರು, ತಜ್ಞರು ಪಾಲ್ಗೊಂಡಿದ್ದರು.