ಶಬರಿಮಲೆ: ಮರುಪರಿಶೀಲನಾ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ
ನವದೆಹಲಿ, ನವೆಂಬರ್ 13: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದೊಳಗೆ 10-50 ವರ್ಷ ವಯಸ್ಸಿನ ಮಹಿಳೆಯರಿಗೂ ಪ್ರವೇಶ ಅವಕಾಶ ಕಲ್ಪಿಸಬೇಕು ಎಂಬ ತನ್ನ ಈ ಹಿಂದಿನ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ಇದರಿಂದ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಭಾರಿ ಪ್ರತಿಭಟನೆ ನಡೆಸುತ್ತಿರುವ ಭಕ್ತರು ಮತ್ತು ವಿವಿಧ ಸಂಘಟನೆಗಳಿಗೆ ಅಲ್ಪ ನೆಮ್ಮದಿ ದೊರೆತಿದೆ.
ಧಾರ್ಮಿಕ ಆಚರಣೆ ಮಧ್ಯೆ ಪ್ರವೇಶಿಸುವುದಿಲ್ಲ: ಕೇರಳ ಸರ್ಕಾರ
ದೇವಸ್ಥಾನದೊಳಗೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಸೆ.28ರಂದು ತೀರ್ಪು ನೀಡಿತ್ತು. ಅದನ್ನು ವಿರೋಧಿಸಿ 49 ಅರ್ಜಿಗಳು ತೀರ್ಪನ್ನು ಮರುಪರಿಶೀಲನೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದವು.
ಈ ಎಲ್ಲ ಅರ್ಜಿಗಳನ್ನೂ ವಿಚಾರಣೆಗೆ ಒಳಪಡಿಸಲು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಒಪ್ಪಿಗೆ ಸೂಚಿಸಿತು.
ಈ ಎಲ್ಲ ಅರ್ಜಿಗಳ ವಿಚಾರಣೆ ಜನವರಿ 22ರಂದು ನಡೆಯಲಿದೆ. ತೆರೆದ ಕೋರ್ಟ್ನಲ್ಲಿ ವಿಚಾರಣೆ ನಡೆಯಬೇಕು ಎಂದು ಮಂಗಳವಾರ ಸಲ್ಲಿಕೆಯಾದ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿತು.
ನ.17ಕ್ಕೆ ಶಬರಿಮಲೆ ಯಾತ್ರೆ ಆರಂಭ; 10ರಿಂದ 50 ವರ್ಷದ 560 ಮಹಿಳೆಯರ ನೋಂದಣಿ
ತನ್ನ ಹಿಂದಿನ ತೀರ್ಪನ್ನು ಮತ್ತೆ ಪರಿಶೀಲನೆ ನಡೆಸುವ ಸಲುವಾಗಿ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದ್ದರೂ, ದೇವಸ್ಥಾನದ ಆಡಳಿತ ಮಂಡಳಿ ಮಹಿಳೆಯರಿಗೆ ಪ್ರವೇಶ ನಿರಾಕರಿಸುವಂತಿಲ್ಲ. ಮುಂದಿನ ತೀರ್ಪು ಬರುವವರೆಗೂ ಸುಪ್ರೀಂಕೋರ್ಟ್ನ ಹಿಂದಿನ ತೀರ್ಪು ಚಾಲ್ತಿಯಲ್ಲಿ ಇರುತ್ತದೆ.
ಶಬರಿಮಲೆ ಸಂರಕ್ಷಣಾ ರಥಕ್ಕೆ ಕೇರಳದಲ್ಲಿ ಚಾಲನೆ ನೀಡಿದ ಯಡಿಯೂರಪ್ಪ
ಅ.22ರಂದು ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸಿ ವಿಫಲರಾಗಿದ್ದ ಕೊಯಿಕ್ಕೋಡ್ನ ಶಿಕ್ಷಕಿ ಬಿಂದು ತಂಕಮ್ ಅವರ ವಿರುದ್ಧ ಬಲಪಂಥೀಯ ಸಂಘಟನೆಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದವು. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿದೆ.
ಈ ತಿಂಗಳು ಕೇರಳಾದ್ಯಂತ ನಡೆದ ವಿವಿಧ ಪ್ರತಿಭಟನೆಗಳ ವೇಳೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ 3,700ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.
ಇರುಮುಡಿಯಿಲ್ಲದೆ ಮೆಟ್ಟಲೇರಿ ಶಬರಿಮಲೆ ಸಂಪ್ರದಾಯ ಮುರಿದ ಆರೆಸ್ಸೆಸ್ ಮುಖಂಡ
ನವೆಂಬರ್ 5ರಂದು ದೇವಸ್ಥಾನದ ಬಾಗಿಲು ತೆರೆದಾಗ ಉಂಟಾದ ಹಿಂಸಾಚಾರ ಪ್ರಕರಣದ ಕುರಿತಾದ ವಿಶೇಷ ಕಮಿಷನರ್ ಅವರ ವರದಿ ಆಧಾರದಲ್ಲಿ ಕೇರಳ ಹೈಕೋರ್ಟ್ ಈ ಪ್ರಕರಣವನ್ನು ಸ್ವತಃ ವಿಚಾರಣೆಗೆ ಒಳಪಡಿಸಲು ಕೈಗೆತ್ತಿಕೊಂಡಿದೆ.