ದೆಹಲಿ ಹಿಂಸಾಚಾರ ಹತ್ತಿಕ್ಕಲು ಬಂದ ಐಪಿಎಸ್ ಅಧಿಕಾರಿ ಯಾರು?
ನವದೆಹಲಿ, ಫೆಬ್ರವರಿ 26: ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಯ ಅಧಿಕಾರಿ ಎಸ್.ಎನ್ ಶ್ರೀನಿವಾಸ್ತವರನ್ನು ದೆಹಲಿ ಹಿಂಸಾಚಾರ ಹತ್ತಿಕ್ಕಲು ನಿಯೋಜಿಸಲಾಗಿದೆ. ಈಶಾನ್ಯ ದೆಹಲಿಯ ಗಲಭೆ, ಹಿಂಸಾಚಾರ ನಿಯಂತ್ರಿಸಲು ದೆಹಲಿ ಪೊಲೀಸರು ವಿಫಲರಾದ ಹಿನ್ನಲೆಯಲ್ಲಿ 1985ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಶ್ರೀವಾಸ್ತವರನ್ನು ವಿಶೇಷ ಆಯುಕ್ತರಾಗಿ ನೇಮಿಸಲಾಗಿದೆ.
Recommended Video
ಮುರ್ನಾಲ್ಕು ದಿನಗಳಿಂದ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 19 ಮಂದಿ ಮೃತಪಟ್ಟಿದ್ದಾರೆ, ಅನೇಕ ಮಂದಿಗೆ ಗಾಯಗಳಾಗಿವೆ ಕಂಡಲ್ಲಿ ಗುಂಡು ಆದೇಶ ನೀಡಲಾಗಿದೆ. ಹಿಂಸಾಚಾರದಲ್ಲಿ 190ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನೆಲ್ಲ ಗುರು ತೇಜ್ ಬಹದೂರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದೆಹಲಿ ಸಂಘರ್ಷ: ಹೆಡ್ ಕಾನ್ಸ್ಟೆಬಲ್ ಸಾವಿನ ಪ್ರಕರಣಕ್ಕೆ ತಿರುವು
10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಿಆರ್ ಪಿಸಿ 144 ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ನಾಲ್ಕು ಕಡೆಗಳಲ್ಲಿ ಕರ್ಫ್ಯೂ ಆದೇಶ ಹೊರಡಿಸಲಾಗಿದೆ.
ಯಾವ ಯಾವ ಪ್ರದೇಶದಲ್ಲಿ ಬಿಗಿ ಭದ್ರತೆ
ಖಜೂರಿ ಖಾಸ್ ಪ್ರದೇಶದಲ್ಲಿ ರಾಪಿಡ್ ಆಕ್ಷನ್ ಫೋರ್ಸ್ ಫ್ಲಾಗ್ ಮಾರ್ಚ್ ನಡೆಸಿತು. ಮೌಜ್ ಪುರ್, ಜಫ್ರಾಬಾದ್, ಮೌಜ್ ಪುರ್ ಚೌಕ್, ಚಾಂದ್ ಬಾಗ್ ಮತ್ತು ಭಜನ್ ಪುರದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.
ಪರಿಸ್ಥಿತಿ ಬೂದಿಮುಚ್ಚಿದ ಕೆಂಡ
ಇಷ್ಟೆಲ್ಲ ಬಂದೋಬಸ್ತ್ ಮಾಡಿದರೂ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಹೀಗಾಗಿ, ಪರಿಸ್ಥಿತಿ ನಿಯಂತ್ರಿಸಲು ಸೂಕ್ತ ಅಧಿಕಾರಿಯನ್ನು ಕೇಂದ್ರ ಸರ್ಕಾರ ನಿಯೋಜಿಸಿದೆ.
ಸಿಆರ್ಪಿಎಫ್ನಲ್ಲಿ ವಿಶೇಷ ಅಧಿಕಾರಿಯಾಗಿರುವ ಶ್ರೀವಾಸ್ತವ
ಸಿಆರ್ಪಿಎಫ್ನಲ್ಲಿ ವಿಶೇಷ ಅಧಿಕಾರಿಯಾಗಿರುವ ಶ್ರೀವಾಸ್ತವ ಅವರು ಅಮೂಲ್ಯಾ ಪಟ್ನಾಯಕ್ ಅವರ ಅವಧಿ ನಂತರ ದೆಹಲಿ ಪೊಲೀಸ್ ಆಯುಕ್ತರಾಗಿ ನೇಮಕವಾಗುವ ಸಾಧ್ಯತೆಯಿದೆ. ದೆಹಲಿಯಲ್ಲಿ ವಿವಿಧ ಸ್ತರದಲ್ಲಿ ಕಾರ್ಯನಿರ್ವಹಿಸಿರುವ ಶ್ರೀವಾಸ್ತವ ವಿಶೇಷ ತಂಡದ ಮುಂದಾಳತ್ವ ವಹಿಸಿ ಇಂಡಿಯನ್ ಮುಜಾಹಿದ್ದೀನ್ ವಿರುದ್ಧ ತನಿಖೆ ಕೈಗೊಂಡಿತ್ತು.
ದೆಹಲಿಯ ಬೆಳವಣಿಗೆ
ದೆಹಲಿಯ ಬೆಳವಣಿಗೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಲಕಾಲಕ್ಕೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಉನ್ನತ ಮಟ್ಟದ ಸಭೆ ನಡೆಸಿ, ಮುಂದಿನ ಕ್ರಮದ ಬಗ್ಗೆ ಚರ್ಚಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆಗೂ ಸಮಾಲೋಚನೆ ನಡೆಸಿದ್ದಾರೆ.