ಸಂಪರ್ಕವೇ ರಾಜ್ಯದ ಅಭಿವೃದ್ಧಿಯ ಮೂಲ ಮಂತ್ರ : ದೇಶಪಾಂಡೆ
ನವದೆಹಲಿ, ಫೆಬ್ರವರಿ 5 : ಉತ್ತರ ಕನ್ನಡ ಜಿಲ್ಲೆಯಲ್ಲಿ ನೌಕಾನೆಲೆಯ ಸಹಯೋಗದೊಂದಿಗೆ ನಾಗರೀಕ ವಿಮಾನ ನಿಲ್ದಾಣ ಅಭಿವೃದ್ಧಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ಜಿಲ್ಲೆಯ ವಿವಿಧ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳುವ ಬಗ್ಗೆ ಕಂದಾಯ ಸಚಿವರಾದ ಆರ್.ವಿ. ದೇಶಪಾಂಡೆರವರು ಕೇಂದ್ರ ನಾಗರೀಕ ವಿಮಾನಯಾನ ಸಚಿವರು ಹಾಗೂ ಭೂಸಾರಿಗೆ ಸಚಿವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿರವರನ್ನು ಭೇಟಿ ಮಾಡಿದ ದೇಶಪಾಂಡೆರವರು, ಗೋವಾ-ಕರ್ನಾಟಕ ಗಡಿಯಿಂದ ಕುಂದಾಪುರದವರೆವಿಗೂ ಇರುವ ರಾಷ್ಟ್ರೀಯ ಹೆದ್ದಾರಿ-66ರ ಯೋಜನೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಳ್ಳಬೇಕಾದ ರಸ್ತೆ ಕೆಳಸೇತುವೆ, ಮೇಲ್ಸೇತುವೆ, ಸರ್ವಿಸ್ ರಸ್ತೆ, ಇತ್ಯಾದಿ, ಕಾಮಗಾರಿಗಳ ಪಟ್ಟಿಯೊಂದಿಗೆ ಮನವಿ ಸಲ್ಲಿಸಿದರು. ಈ ಕಾಮಗಾರಿಗಳ ತುರ್ತು ಅಗತ್ಯತೆಯನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದರು.
ಕರ್ನಾಟಕ-ಅಮೆರಿಕ ವಾಣಿಜ್ಯ ಸಂಬಂಧ ಬಲವರ್ಧನೆಗೆ ಕಾರ್ಯತಂಡ
ಕೇಂದ್ರ ವಾಣಿಜ್ಯ ಮತ್ತು ನಾಗರೀಕ ವಿಮಾನಯಾನ ಸಚಿವರಾದ ಸುರೇಶ ಪಿ. ಪ್ರಭುರವರನ್ನು ಭೇಟಿ ಮಾಡಿ ನೌಕಾನೆಲೆಯ ಸಹಯೋಗದೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಗರೀಕ ವಿಮಾನ ನಿಲ್ದಾಣದ ಅಭಿವೃದ್ಧಿ ಬಗ್ಗೆಯೂ ವಿವರವಾಗಿ ಚರ್ಚಿಸಿದರು.
ಬೆಳಗಾವಿ ವಿಮಾನ ನಿಲ್ದಾಣದಿಂದ ಉಡಾನ್-3 ಯೋಜನೆಯಡಿ ವಿವಿಧ ಸಂಸ್ಥೆಗಳ ವಿಮಾನ ಹಾರಾಟ ಮತ್ತು ಕಲಬುರಗಿ ವಿಮಾನ ನಿಲ್ದಾಣ ಮತ್ತು ಬೀದರ್ ವಿಮಾನ ನಿಲ್ದಾಣಗಳಿಂದ ವಿಮಾನಗಳ ಶೀಘ್ರ ಕಾರ್ಯಾಚರಣೆಗೆ ಸಂಬಂಧಿಸಿದಂತೆಯೂ ಸುದೀರ್ಘ ಮಾತುಕತೆ ನಡೆಸಿದರು. ಈ ಎಲ್ಲಾ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕಾದ ಅನಿವಾರ್ಯತೆಯನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕೇಳಿದ ಅರ್ಧದಷ್ಟೂ ಬರ ಪರಿಹಾರ ಕೊಟ್ಟಿಲ್ಲ ಕೇಂದ್ರ: ದೇಶಪಾಂಡೆ ಬೇಸರ
ಮಾಧ್ಯಮದೊಂದಿಗೆ ಮಾತನಾಡಿದ ದೇಶಪಾಂಡೆ, ಉತ್ತಮ ಸಂಪರ್ಕವೇ ಅಭಿವೃದ್ಧಿಯ ಮೂಲ ಮಂತ್ರ, ಹಾಗಾಗಿ ಕಾರವಾರದಲ್ಲಿ ನಾಗರೀಕ ವಿಮಾನ ನಿಲ್ದಾಣ ಕಾರ್ಯಾಚರಣೆ ಕೈಗೊಳ್ಳುವುದರಿಂದ ಮುಖ್ಯವಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ, ವಾಣಿಜ್ಯೋದ್ಯಮ, ಉದ್ಯೋಗ ಸೃಷ್ಟಿ, ಗುಡಿ ಕೈಗಾರಿಕೆ ಸೇರಿದಂತೆ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ವರದಾನವಾಗಿ ಪರಿಣಮಿಸುವುದರ ಜೊತೆಗೆ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಕರ್ಯದೊಂದಿಗೆ ತುರ್ತು ವೈದ್ಯಕೀಯ ಸೌಲಭ್ಯ ಪಡೆಯಲು ಸಹ ನೆರವಾಗುತ್ತದೆ ಎಂದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ಹಾರಾಟ ಯಶಸ್ವಿ
ಕಲಬುರಗಿ, ಬೆಳಗಾವಿ ಹಾಗೂ ಬೀದರ್ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯಿಂದ ಅಕ್ಕಪಕ್ಕದ ರಾಜ್ಯಗಳ ಕೇಂದ್ರ ಸ್ಥಾನದೊಂದಿಗೆ ನೇರ ಸಂಪರ್ಕ ದೊರೆಯುವುದರಿಂದ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಚಾಲನೆ ದೊರೆತು ರಾಜ್ಯದ ಚಿತ್ರಣವೇ ಬದಲಾಗಲಿದೆ ಎಂದು ತಿಳಿಸಿದರು.
ಮೇಲ್ಕಂಡ ಮನವಿಗಳಿಗೆ ಸಂಬಂಧಪಟ್ಟ ಕೇಂದ್ರ ಸಚಿವರುಗಳು ಧನಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಆದ್ಯತೆಯ ಮೇಲೆ ಕ್ರಮ ಕೈಗೊಂಡು ಜಿಲ್ಲೆಯ ಹಾಗೂ ರಾಜ್ಯದ ಅಭಿವೃದ್ಧಿಗೆ ಸಾಧ್ಯವಾದಷ್ಟು ನೆರವನ್ನು ಒದಗಿಸುವುದಾಗಿ ಭರವಸೆ ನೀಡಿರುತ್ತಾರೆ ಎಂದು ಈ ಸಂದರ್ಭದಲ್ಲಿ ದೇಶಪಾಂಡೆ ತಿಳಿಸಿದರು.