ಆರೆಸ್ಸೆಸ್ ಸಿದ್ಧಾಂತ ದೇಶದ ಮೇಲೆ ಹೇರುತ್ತಿದೆ: ಸೀತಾರಾಂ ಯೆಚೂರಿ
ಇಂಥದ್ದೇ ತಿನ್ನಬೇಕು, ಇಂಥದ್ದೇ ನೋಡಬೇಕು ಎಂಬ ತನ್ನ ಸಿದ್ಧಾಂತವನ್ನು ದೇಶದ ಜನರ ಬದುಕಿನ ಕ್ರಮದ ಮೇಲೆ ಆರೆಸ್ಸೆಸ್ ಹೇರುತ್ತಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ. ಏಕೆ ಹಾಗೆಂದರು ಅಂತ ತಿಳಿಯಲು ಮುಂದೆ ಓದಿ
ನವದೆಹಲಿ, ಫೆಬ್ರವರಿ 28: ನಾವಿರುವ ಕಾಲಕ್ಕಿಂತ ಹಿಂದಕ್ಕೆ ಕರೆದುಕೊಂಡು ಹೋಗುವಂಥ ಆಲೋಚನೆಗಳನ್ನು ದೇಶದಲ್ಲಿ ಹೇರಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಯತ್ನಿಸುತ್ತಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಂಗಳವಾರ ಆರೋಪಿಸಿದ್ದಾರೆ.
ಭಾರತೀಯ ಯೋಧರು ಹುತಾತ್ಮರಾದಾಗ ಎಡಪಂಥೀಯರು ಸಂಭ್ರಮಿಸುತ್ತಾರೆ ಎಂಬ ಗೃಹ ಖಾತೆ ರಾಜ್ಯ ಸಚಿವ ಕಿರೇನ್ ರಿಜುಜು ಹೇಳಿಕೆಗೆ ಉತ್ತರ ನೀಡಿದ ಅವರು, "ಗಾಂಧಿ ಅವರ ಹತ್ಯೆಯಾದಾಗ ಸಂಭ್ರಮಿಸಿದವರು ಯಾರು?" ಎಂದು ಟ್ವೀಟ್ ಮಾಡಿದ್ದಾರೆ.
"ಗಾಂಧಿ ಹತ್ಯೆಗೆ ಆರ್ ಎಸ್ ಎಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಾ, ಸಿಹಿ ಹಂಚುತ್ತಿದ್ದಾರೆ" ಎಂದು ಆಗಿನ ಗೃಹಸಚಿವರಾಗಿದ್ದ ವಲ್ಲಭ ಭಾಯ್ ಪಟೇಲ್ ಅವರು ಆರ್ ಎಸ್ ಎಸ್ ಮುಖ್ಯಸ್ಥ ಎಂ.ಎಸ್.ಗೋಲ್ ವಾಲ್ಕರ್ ಅವರಿಗೆ ಹೇಳಿದ್ದರು ಎಂಬುದನ್ನು ಉದಾಹರಿಸಿದ್ದಾರೆ ಯೆಚೂರಿ.[ಗಾಂಧಿ ಹತ್ಯೆಯನ್ನು ಸಂಭ್ರಮಿಸಿದವರಿಂದ ದೇಶಭಕ್ತಿ ಕಲಿಯಬೇಕಿಲ್ಲ: ಕೇರಳ ಸಿಎಂ]
ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ವಿಚಾರ ಸಂಕಿರಣ ರದ್ದು ಮಾಡಬೇಕು ಎಂಬ ಬೇಡಿಕೆ ಕೇಳಿಬಂದು ಮತ್ತು ದೆಹಲಿ ವಿವಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪತ್ರಕರ್ತರ ಮೇಲೆ ಎಬಿವಿಪಿ ಹಲ್ಲೆ ಆರೋಪದ ನಂತರ ಯೆಚೂರಿ ಈ ಹೇಳಿಕೆ ನೀಡಿದ್ದಾರೆ.
ಸಚಿವರಾದವರು ತಾವು ಪದವಿ ಪ್ರಮಾಣ ಸ್ವೀಕರಿಸಿದಂತೆ ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಯಾರು ಬೆದರಿಕೆ ಹಾಕುತ್ತಿದ್ದಾರೋ ಅವರ ಬೆನ್ನಿಗೆ ನಿಲ್ಲಬಾರದು ಎಂದು ಗುರ್ಮೆಹರ್ ಕೌರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯೆಚೂರಿ ಮಾತನಾಡಿದ್ದಾರೆ.[ಮುಸ್ಲಿಮರೂ ಸೇರಿ ಭಾರತದಲ್ಲಿ ಹುಟ್ಟಿದವರೆಲ್ಲ ಹಿಂದೂಗಳು: ಭಾಗವತ್]
ಆಲೋಚನೆಗಳ ವಿರುದ್ಧವಾಗಿ ಹಿಂಸಾಚಾರವೇ ಸಂಘ ಪರಿವಾರದ ಅಸ್ತ್ರ. ಏನು ತಿನ್ನಬೇಕು, ನೋಡಬೇಕು, ಧರಿಸಬೇಕು, ಏನು ಮಾಡಬೇಕು ಎಂಬ ಜೀವನ ಕ್ರಮದ ಬಗ್ಗೆ ತಮ್ಮ ಹಿಮ್ಮುಖವಾದ ಆಲೋಚನೆಯನ್ನು ಹೇರಲು ಆರ್ ಎಸ್ ಎಸ್ ಪ್ರಯತ್ನಿಸುತ್ತಿದೆ. ಇಂಥ ಪ್ರಯತ್ನದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಬೇಕು ಎಂದು ಸೀತಾರಾಂ ಯೆಚೂರಿ ಹೇಳಿದ್ದಾರೆ.