ಬಿಜೆಪಿ ಸೋಲಿಗೆ ಬೇಡಿಯತ್ತ ಕೈ ತೋರಿದ ಆರ್ಎಸ್ಎಸ್
ನವದೆಹಲಿ, ಫೆ. 17: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲುಂಡಿರುವುದಕ್ಕೆ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡಿದ್ದೇ ಕಾರಣ ಎಂಬ ಆರೋಪ ಬಲವಾಗುತ್ತಿದೆ. ಆದರೆ, ಈ ಮಾತನ್ನು ಬಿಜೆಪಿ ಬಹಿರಂಗವಾಗಿ ಹೇಳಿಕೊಳ್ಳಲು ಹಿಂಜರಿದಿದ್ದರೂ ಆರ್ಎಸ್ಎಸ್ ತನ್ನ ಮುಖವಾಣಿ ಪಾಂಚಜನ್ಯ ಪಾಕ್ಷಿಕ ಪತ್ರಿಕೆಯಲ್ಲಿ ನೇರವಾಗಿ ಹೇಳಿದೆ.
ಕಿರಣ್ ಬೇಡಿ ಅವರನ್ನು ಆಯ್ಕೆ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರನ್ನು ಬಿಜೆಪಿ ಮುಖಂಡರು ನಿರ್ಲಕ್ಷಿಸಿದ್ದಾರೆ ಎಂದು ಪರೋಕ್ಷವಾಗಿ ಟೀಕಿಸಿದೆ. ಮೋದಿ ಅಲೆಯನ್ನು ಅತಿಯಾಗಿ ಅವಲಂಬಿಸಿದ್ದು ಕೂಡ ಸೋಲಿಗೆ ಕಾರಣ. ಕಿರಣ್ ಬೇಡಿ ಆಯ್ಕೆ ಮಾಡಿ ಸಂಘಟನೆ, ಯೋಜನೆ ಹಾಗೂ ಕೆಲಸಗಾರರ ಸೆಂಟಿಮೆಂಟ್ಗಳನ್ನು ಗೌರವಿಸಲಿಲ್ಲ ಎಂದು ಮನೋಜ್ ವರ್ಮಾ ಬರೆದಿದ್ದಾರೆ. [ಕಿರಣ್ ಬೇಡಿ ಬಹಿರಂಗ ಪತ್ರ]
ಹಿತೇಶ್ ಕುಮಾರ್ ಅವರು, ಬಿಜೆಪಿಯು ಸಂಘ ಪರಿವಾರದ ತತ್ವ ಸಿದ್ಧಾಂತ ಹಾಗೂ ಪಕ್ಷದ ಕಾರ್ಯಕರ್ತರನ್ನು ಬಿಟ್ಟು ಬೇರೆ ಬಂಡವಾಳ ಹೊಂದಿದೆಯೇ ಎಂಬುದನ್ನು ದೃಢಪಡಿಸಬೇಕು. ಪಕ್ಷದ ಕೆಲಸಗಾರರ ಆಸಕ್ತಿಯಿಂದಲೇ ಬಿಜೆಪಿ ಎಂಬ ರಾಷ್ಟ್ರೀಯ ಪಕ್ಷ ಮತಗಳನ್ನು ಗಳಿಸುತ್ತಿದೆ ಎಂದು ಹೇಳಿದ್ದಾರೆ. [ಸೋತ ಬೇಡಿ ಸಿಡಿಸಿದ ಬಾಂಬ್]
ಆದರೆ, ಪಾಂಚಜನ್ಯ ವರದಿ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದ ಬಿಜೆಪಿ ಸೋಲಿಗೆ ಸಾಮೂಹಿಕ ಹೊಣೆಗಾರಿಕೆ ಹೊತ್ತಿದೆ. ಆದರೆ, ಈಚೆಗಷ್ಟೇ ನಡೆದ ಪಕ್ಷದ ಮುಖಂಡ ಸಭೆಗೆ ಕಿರಣ್ ಬೇಡಿ ಅವರನ್ನು ಆಹ್ವಾನಿಸಿರಲಿಲ್ಲ. ಅಲ್ಲಿಯೂ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನೇಮಿಸಿದ್ದು ಹಾಗೂ ಸ್ಥಳೀಯ ಕಾರ್ಯಕರ್ತರನ್ನು ಕಡೆಗಾಣಿಸಿದ್ದು ಕಾರಣ ಎಂಬ ಮಾತು ಕೇಳಿಬಂದಿತ್ತು. [ಬಿಜೆಪಿ ಮಾಡಿದ ತಪ್ಪೇನು?]