ಅಸ್ಪೃಶ್ಯತೆ ಶುರುವಾಗಿದ್ದು ಮುಸ್ಲಿಮರು ಬಂದ ಬಳಿಕ: ಆರೆಸ್ಸೆಸ್ ಮುಖಂಡ
ನವದೆಹಲಿ, ಆಗಸ್ಟ್ 27: ಭಾರತದಲ್ಲಿ ಅಸ್ಪೃಶ್ಯತೆಯ ಪಿಡುಗು ಆರಂಭವಾಗಿದ್ದು, ಇಸ್ಲಾಂ ಆಗಮಿಸಿದ ಬಳಿಕ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮುಖಂಡ ಕೃಷ್ಣಗೋಪಾಲ್ ಹೇಳಿದರು.
ನವದೆಹಲಿಯಲ್ಲಿ ಸೋಮವಾರ ದಲಿತರ ಕುರಿತು ಬರೆದಿರುವ ಪುಸ್ತಕವೊಂದರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ದಲಿತ ಎಂಬ ಪರಿಕಲ್ಪನೆಯೇ ಇರಲಿಲ್ಲ. ಬ್ರಿಟಿಷರು ಒಡೆದು ಆಳುವ ನೀತಿಯ ಸಂಚಿನ ಫಲವಾಗಿ ಅದು ಹುಟ್ಟಿಕೊಂಡಿತು ಎಂದು ಅವರು ಆರೋಪಿಸಿದರು. ಜಾತಿರಹಿತ ಸಮಾಜದ ಸೃಷ್ಟಿಗೆ ಆರೆಸ್ಸೆಸ್ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.
DSS vs RSS : ಮೀಸಲಾತಿ ಹೇಳಿಕೆ ಸಮರ್ಥನೆ, ಖಂಡನೆ, ವಿವರಣೆ
'ಅಸ್ಪೃಶ್ಯತೆಯ ಮೊದಲ ನಿದರ್ಶನ ಕಂಡು ಬಂದಿದ್ದು ಇಸ್ಲಾಂ ಭಾರತಕ್ಕೆ ಬಂದ ಬಳಿಕ. ಸಿಂಧ್ನ ಕೊನೆಯ ಹಿಂದೂ ರಾಜ ದಾಹಿರ್ನ ಅರಮನೆಯಲ್ಲಿದ್ದ ರಾಣಿಯರು ಜೋಹರ್ಗೆ (ಸತಿಸಹಗಮನ) ಒಳಪಡಲು ಮುಂದಾಗುವಾಗ ಈ ಆಚರಣೆ ಮೊದಲ ಬಾರಿಗೆ ಕಂಡುಬಂತು. ಅವರು 'ಮ್ಲೇಚ್ಛ' ಎಂಬ ಪದವನ್ನು ಬಳಸಿದ್ದರು. ತಾವು ಬೇಗ ಸತಿಸಹಗಮನಕ್ಕೆ ಒಳಪಡಬೇಕು. ಇಲ್ಲದಿದ್ದರೆ ಈ 'ಮ್ಲೇಚ್ಛರು' ತಮ್ಮನ್ನು ಮುಟ್ಟಿದರೆ ಮೈಲಿಗೆಯಾಗುತ್ತದೆ ಎಂದು ಭಾವಿಸಿದ್ದರು. ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆಯ ಮೊದಲ ಉದಾಹರಣೆ ಇದು' ಎಂದು ಅವರು ಹೇಳಿದರು.
ದಲಿತ ಪದವೇ ಇರಲಿಲ್ಲ
ಗೌರವ ಪಡೆದುಕೊಂಡಿದ್ದ ಜಾತಿಗಳು ಹೇಗೆ ಹಿಂದುಳಿದ ವರ್ಗಗಳ ಪಟ್ಟಿಯೊಳಗೆ ಸೇರಿಕೊಂಡಿವೆ ಎಂಬುದಕ್ಕೆ ಅವರು ಉದಾಹರಣೆ ನೀಡಿದರು. 'ಇಂದು ಮೌರ್ಯ ಜಾತಿ ಹಿಂದುಳಿದ ವರ್ಗದಲ್ಲಿದೆ. ಒಂದು ಕಾಲದಲ್ಲಿ ಅದು ಉನ್ನತ ಜಾತಿಯಾಗಿತ್ತು. ಬಂಗಾಳದ ಅರಸರಾಗಿದ್ದ ಪಾಲರು ಇಂದು ಹಿಂದುಳಿದ ವರ್ಗದವರಾಗಿದ್ದಾರೆ. ಬೌದ್ಧರ ಶಾಕ್ಯ ಜಾತಿಯು ಇತರೆ ಹಿಂದುಳಿದ ವರ್ಗಕ್ಕೆ ಸೇರಿಕೊಂಡಿದೆ. ದಲಿತ ಎಂಬ ಪದವು ನಮ್ಮ ಸಮಾಜದಲ್ಲಿ ಇರಲೇ ಇಲ್ಲ. ನಮ್ಮ ದೇಶವನ್ನು ಒಡೆದು ಆಳಲು ಬಯಸಿದ್ದ ಬ್ರಿಟಿಷರ ಸಂಚು ಇದು. ದಲಿತ ಎಂಬ ಪದ ಬಳಕೆಯನ್ನೇ ಸಂವಿಧಾನ ನಿರಾಕರಿಸಿದೆ' ಎಂದರು.
ಇಸ್ಲಾಂ ಆಡಳಿತ ಕರಾಳಯುಗ
ಭಾರತದಲ್ಲಿ ಇಸ್ಲಾಂ ಆಡಳಿತವು ಅತ್ಯಂತ ಕರಾಳ ಕಾಲಘಟ್ಟ ಎಂದು ಅವರು ವ್ಯಾಖ್ಯಾನಿಸಿದರು. ಅವರ ಆಳ್ವಿಕೆಯಲ್ಲಿಯೂ ಭಾರತವು ತನ್ನ ಪ್ರಬಲ ಆಧ್ಯಾತ್ಮಿಕ ಬೇರುಗಳಿಂದಾಗಿ ಗಟ್ಟಿಯಾಗಿ ಉಳಿದುಕೊಂಡಿತು ಎಂದು ಹೇಳಿದರು.
'ಇತಿಹಾಸದಲ್ಲಿ ಭಾರತದ ಹೊರತಾಗಿ ಇಸ್ಲಾಂನ ಆಕ್ರಮಣದಿಂದ ಉಳಿದುಕೊಂಡ ಯಾವ ದೇಶವೂ ಇಲ್ಲ. ಈ ಕರಾಳ ಯುಗದಲ್ಲಿಯೂ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ದೇಶದ ಆಧ್ಯಾತ್ಮಿಕತೆ ಮತ್ತು ಸಂವೇದನಾಶೀಲತೆಯಿಂದಾಗಿ' ಎಂದರು.
ಮೀಸಲಾತಿ ಕುರಿತು ಸೌಹಾರ್ದಯುತ ಚರ್ಚೆ ಅಗತ್ಯ: ಮೋಹನ್ ಭಾಗವತ್
ಅಸ್ಪೃಶ್ಯತೆ ಅಸ್ತಿತ್ವದಲ್ಲಿ ಇರಲಿಲ್ಲ
ತಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಅವರು, ವೇದಗಳು ಮತ್ತು ಸಾಮಾಜಿಕ ರಚನೆಯ ಕುರಿತಾದ ಪ್ರಾಚೀನ ಕೃತಿಗಳ ಉದಾಹರಣೆಗಳನ್ನು ನೀಡಿದರು.
'ಭಾರತದಲ್ಲಿ ನಾವು ಕೆಳ ಮತ್ತು ಉನ್ನತ ಜಾತಿ ವ್ಯವಸ್ಥೆಯನ್ನು ಹೊಂದಿದ್ದೆವು. ಆದರೆ, ಅಲ್ಲಿ ಅಸ್ಪೃಶ್ಯತೆ ಇರಲಿಲ್ಲ. ದನದ ಮಾಂಸವನ್ನು ತಿನ್ನುತ್ತಿದ್ದವರನ್ನು ಅಸ್ಪೃಶ್ಯರು ಎಂದು ಘೋಷಿಸಲಾಗಿತ್ತು. ಅದರ ಬಗ್ಗೆ ಅಂಬೇಡ್ಕರ್ ಕೂಡ ಬರೆದಿದ್ದಾರೆ. ಆದರೆ, ನಿಧಾನವಾಗಿ ಸಮಾಜದ ಬೃಹತ್ ಭಾಗವು ಅಸ್ಪಶ್ಯರಾಗುತ್ತಾ ಬಂದಿತು' ಎಂದು ಹೇಳಿದರು.
ಶೂದ್ರರೇ ಇಂದಿನ ದಲಿತರಲ್ಲ
ಶೂದ್ರರೇ ಇಂದಿನ ದಲಿತರು ಎಂಬ ಅಭಿಪ್ರಾಯಗಳನ್ನು ಆರೆಸ್ಸೆಸ್ ನಿರಾಕರಿಸಿದೆ. 'ಶೂದ್ರ'ರು ರಾಜರಾಗಿ ಆಳ್ವಿಕೆ ನಡೆಸಿದ್ದಾರೆ. ಅವರಿಗೆ ಸಮಾಜದಲ್ಲಿ ಉನ್ನತ ಗೌರವವಿತ್ತು ಎಂದು ಗೋಪಾಲ್ ವಿಶ್ಲೇಷಿಸಿದರು.
'ಉದಾಹರಣೆಗೆ, ಭಾರತದ ಮಹಾನ್ ಅರಸರಲ್ಲಿ ಒಬ್ಬನಾಗಿದ್ದ ಚಂದ್ರಗುಪ್ತ ಮೌರ್ಯ ಶೂದ್ರ ಸಮುದಾಯದಿಂದ ಬಂದವನು. ಅದೇ ರೀತಿ ಇಂದು ಮಹಾನ್ ಮಹರ್ಷಿ ಎಂದೇ ಗುರುತಿಸಲಾಗುವ ವಾಲ್ಮೀಕಿ ಕೂಡ ಶೂದ್ರ ಸಮುದಾಯದವರು' ಎಂದರು.
ನಾಜಿ ಸಿದ್ಧಾಂತದ ಜತೆಗೆ ಆರೆಸ್ಸೆಸ್ ನ ಹೋಲಿಕೆ ಮಾಡಿದ ಇಮ್ರಾನ್ ಖಾನ್
ಆಕ್ರೋಶ ಇರುವುದು ಸತ್ಯ
ಜಾತಿ ಪದ್ಧತಿಯಲ್ಲಿನ ಕೆಡಕುಗಳ ಕುರಿತು ಮಾತನಾಡಿದ ಅವರು, ಶೋಷಣೆಯ ಕಾರಣದಿಂದ ಪರಿಶಿಷ್ಟ ಜಾತಿಗಳಲ್ಲಿ ತೀವ್ರ ಆಕ್ರೋಶವಿದೆ ಎಂದರು. ಒಂದು ಕಾಲದಲ್ಲಿ ಕೀಳಾಗಿ ನಡೆಸಿಕೊಳ್ಳಲಾಗಿದ್ದವರನ್ನು ಮೇಲೆತ್ತಿ ಆಗಿರುವ ತಪ್ಪನ್ನು ಸರಿಪಡಿಸಲು ಕೊಡುಗೆ ನೀಡಿದವರ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
'ಪರಿಶಿಷ್ಟ ಜಾತಿಯವರಲ್ಲಿ ಆಕ್ರೋಶವಿದೆ. ಅದು ಸಮರ್ಥನೀಯ ಕೂಡ. ಆದರೆ, ಇದರ ವಿರುದ್ಧ ಕೂಡ ಮಾತನಾಡಿದವರು ಇದ್ದಾರೆ ಮತ್ತು ಅವರು ಈ ಸಿಟ್ಟನ್ನು ತಣಿಸಲು ಪ್ರಯತ್ನಿಸಿದವರಿದ್ದಾರೆ. ಫುಲೆ, ನಾರಾಯಣ ಗುರು, ಡಾ. ಹೆಡ್ಗೇವಾರ್, ಸ್ವಾಮಿ ದಯಾನಂದ್, ಮದನ್ ಮೋಹನ್ ಮಾಳವೀಯ, ಮಹಾತ್ಮಾ ಗಾಂಧಿ. ನಾವು ಅವರ ಬಗ್ಗೆ ಈಗ ಚರ್ಚಿಸಬೇಕಿದೆ' ಎಂದು ಹೇಳಿದರು.
ನಾಸ್ತಿಕತೆಗೆ ಹಿಂದೂ ನಂಬಿಕೆ ಉತ್ತರ
'ಜಗತ್ತಿನಾದ್ಯಂತ ಹೆಚ್ಚುತ್ತಿರುವ ನಾಸ್ತಿಕ ಜನಸಂಖ್ಯೆಗೆ ಹಿಂದೂಗಳ ಜೀವನ ಕ್ರಮ ಮತ್ತು ವೇದಾಂತಗಳು ಮಾತ್ರವೇ ಉತ್ತರ ಒದಗಿಸಬಲ್ಲವು. ಅಮೆರಿಕದಲ್ಲಿ ಶೇ 37, ಯುಎಇಯಲ್ಲಿ ಶೇ 18ರಷ್ಟು ಜನರು ತಮ್ಮನ್ನು ತಾವು ನಾಸ್ತಿಕರು ಎಂದು ಗುರುತಿಸಿಕೊಂಡಿದ್ದಾರೆ. ಅವರು ಹುಡುಕುತ್ತಿರುವ ಉತ್ತರಗಳಿಗೆ ಹಿಂದುತ್ವವು ಉತ್ತರ ನೀಡಬಹುದು ಎಂದು ನನಗೆ ಅನಿಸುತ್ತಿದೆ' ಎಂದು ಹೇಳಿದರು.