ಸಲಿಂಗಕಾಮಿಗಳು, ತೃತೀಯಲಿಂಗಿಗಳು ಸಮಾಜದ ಭಾಗ: ಆರೆಸ್ಸೆಸ್
ನವದೆಹಲಿ, ಅಕ್ಟೋಬರ್ 2: ಸಲಿಂಗಕಾಮ ಮತ್ತು ತೃತೀಯ ಲಿಂಗಿಗಳ ಒಳಗೊಳ್ಳುವಿಕೆ ಮುಂತಾದವುಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸಮಾಜದೊಳಗೆ ಚರ್ಚೆಗಳು ನಡೆಯಬೇಕಾದ ಅಗತ್ಯವಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದರು.
ನವದೆಹಲಿಯಲ್ಲಿ ಮಂಗಳವಾರ ನಡೆದ ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನಿಲ್ ಅಂಬೇಕರ್ ಬರೆದ 'ಆರೆಸ್ಸೆಸ್ ಎ ರೋಡ್ಮ್ಯಾಪ್ ಫಾರ್ ದಿ 21 ಸೆಂಚುರಿ' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಕ್ರಮ ವಲಸಿಗ ಹಿಂದೂಗಳ ಗಡಿಪಾರು ಇಲ್ಲ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್
'ಆರೆಸ್ಸೆಸ್ ಅನ್ನು ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಅಥವಾ ಒಬ್ಬ ಸಿದ್ಧಾಂತವಾದಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಹಾಗೆಯೇ ಸಂಘಟನೆಯು ಒಂದು ನಿರ್ದಿಷ್ಟ 'ಇಸಂ' ಅಥವಾ ಬೋಧನೆಯ ನಂಬಿಕೆಗೆ ಸೀಮಿತವಾಗುವುದಿಲ್ಲ' ಎಂದು ಭಾಗ್ವತ್ ಪ್ರತಿಪಾದಿಸಿದರು.
ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್, ನಿವೃತ್ತ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತೃತೀಯ ಲಿಂಗಿಗಳು ಸಮಾಜದ ಭಾಗ
ಪ್ರಾಚೀನ ಹಿಂದೂ ಸಮಾಜದಲ್ಲಿ ತೃತೀಯ ಲಿಂಗಿಗಳಿಗೆ ಸ್ಥಾನಮಾನವಿತ್ತು ಎಂದು ಪ್ರತಿಪಾದಿಸಿದ ಅವರು, 'ಜರಾಸಂಧನ ಸೇನೆಯಲ್ಲಿನ ಸೇನಾಪತಿಗಳು ಅಥವಾ ಶಿಖಂಡಿ ಸೇರಿದಂತೆ ಅನೇಕರು ರಣರಂಗದಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದಾರೆ. ಸಮಾಜಕ್ಕೆ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರೂ ಮನುಷ್ಯರು ಮತ್ತು ಸಮಾಜದ ಭಾಗ' ಎಂದರು.
ವೇದಗಳಲ್ಲಿ ಉಲ್ಲೇಖವಿಲ್ಲ
ಈ ವಿಚಾರದ ಕುರಿತು ಭಾರತದಲ್ಲಿ ಸಾಕಷ್ಟು ಚರ್ಚೆ ನಡೆದಿಲ್ಲ ಎಂಬುದನ್ನು ಒಪ್ಪಿಕೊಂಡ ಅವರು, ವೇದಗಳಲ್ಲಿ ಸಲಿಂಗಕಾಮಿಗಳು ಮತ್ತು ಲಿಂಗಪರಿವರ್ತನೆಯ ಕುರಿತು ಉಲ್ಲೇಖವಿಲ್ಲ. ಆದರೆ ಇದು ದೊಡ್ಡ ಸಮಸ್ಯೆಯೇನಲ್ಲ. ಭಿನ್ನಾಭಿಪ್ರಾಯಗಳಿಲ್ಲದೆ ಇವುಗಳನ್ನು ಬಗೆಹರಿಸಬಹುದು. ಪ್ರತಿ ಸಮಾಜವೂ ಅದರ ಸಮಸ್ಯೆಗಳನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ನಿಭಾಯಿಸುವ ಬಗೆಯನ್ನೂ ಕಂಡುಕೊಂಡಿರುತ್ತವೆ' ಎಂದು ಹೇಳಿದರು.
DSS vs RSS : ಮೀಸಲಾತಿ ಹೇಳಿಕೆ ಸಮರ್ಥನೆ, ಖಂಡನೆ, ವಿವರಣೆ
ಭಾರತ ಎಂದೆಂದಿಗೂ ಹಿಂದೂ ರಾಷ್ಟ್ರ
ಭಾರತವು ಒಂದು ಹಿಂದೂ ರಾಷ್ಟ್ರ ಮತ್ತು ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು. ಆರೆಸ್ಸೆಸ್ ಸಂಸ್ಥಾಪಕ ಕೆಬಿ ಹೆಡಗೇವಾರ್ ಅವರ ಬರಹಗಳನ್ನು ಪ್ರಸ್ತಾಪಿಸಿದ ಭಾಗ್ವತ್, ಭಾರತವು ಸಾವಿರಾರು ವರ್ಷಗಳಿಂದ ಹಿಂದೂ ರಾಷ್ಟ್ರವಾಗಿದೆ. ಈ ಸತ್ಯವನ್ನು ಬದಲಿಸಲು ಅಥವಾ ಪ್ರಶ್ನಿಸಲು ಸಾಧ್ಯವಿಲ್ಲ. ಹೆಡಗೇವಾರ್ ಅವರು ಈ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದಾರೆ. ಕಟ್ಟಕಡೆಯ ವ್ಯಕ್ತಿ ತನ್ನನ್ನು ಹಿಂದೂ ಎಂದು ಕರೆದುಕೊಳ್ಳುವವರೆಗೂ ಮತ್ತು ಆತನ ಈ ತಾಯಿಭೂಮಿ ಸಾಯುವವರೆಗೂ ಭಾರತವು ಹಿಂದೂ ರಾಷ್ಟ್ರವಾಗಿಯೇ ಇರುತ್ತದೆ ಎಂದು ಹೇಳಿದರು.
ಒಗ್ಗೂಡಿಸುವ ಕೆಲಸ ಮಾಡಬೇಕು
ಹಿಂದೂ ಎನ್ನುವುದು ಒಗ್ಗೂಡಿಸುವ ಅಂಶ. ಇಲ್ಲಿ ವಾಸಿಸುವವರು ಮತ್ತು ಇಲ್ಲಿ ಜನಿಸಿದವರೆಲ್ಲರೂ, ಈ ಭೂಮಿಯನ್ನು ಪೂಜಿಸುವವರು ಮತ್ತು ತಾಂತ್ರಿಕವಾಗಿ ದೇಶದ ನಾಗರಿಕರಾಗಿರುವವರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಮೀಸಲಾತಿ ಕುರಿತು ಸೌಹಾರ್ದಯುತ ಚರ್ಚೆ ಅಗತ್ಯ: ಮೋಹನ್ ಭಾಗವತ್
ಒಂದು ಪುಸ್ತಕದಲ್ಲಿ ವಿವರಿಸಲಾಗದು
ಅಂಬೇಕರ್ ಅವರ ಪುಸ್ತಕದಿಂದ ಸಂಘದ ಕುರಿತು ಇರುವ ತಪ್ಪು ತಿಳಿವಳಿಕೆಗಳು ದೂರವಾಗಬಹುದು. ಆದರೆ ಸಂಘದ ವಿಸ್ತಾರವನ್ನು ಯಾವುದೇ ಒಂದು ಪುಸ್ತಕದಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಸಂಘ ಪರಿವಾರ ಮತ್ತು ಸಂಘದ ಸಿದ್ಧಾಂತ ಎಂದು ಬಳಸುವ ಪದಗಳೆಲ್ಲವೂ ಅಪೂರ್ಣ. ಸಂಘವನ್ನು ತಾವು ಅರ್ಥಮಾಡಿಕೊಂಡಿದ್ದಾಗಿ ಹೆಡಗೇವಾರ್ ಕೂಡ ಹೇಳಿಲ್ಲ. ಸಂಘದ ತತ್ವದಲ್ಲಿ ಕೆಲವರು ವಿಭಿನ್ನ ಮಾಧ್ಯಮ ವೇದಿಕೆಗಳಲ್ಲಿ ಒಂದೊಂದು ರೀತಿ ಕಾಣಿಸಿಕೊಳ್ಳುತ್ತಾರೆ. ತಮಗೆ ಹನುಮಾನ್, ಶಿವಾಜಿ ಮಹಾರಾಜ ಮತ್ತು ಹೆಡಗೇವಾರ್ ಆದರ್ಶಪ್ರಾಯರು ಎಂದು ಹೇಳಿದರು.