ಬಿಜೆಪಿಯೇ ಹಿಂದೆ ನಿಂತು ಜೆಎನ್ ಯುನಲ್ಲಿ ಹಿಂಸಾಚಾರ ಮಾಡಿಸಿತಾ?
ದೆಹಲಿ, ಜನವರಿ.06: ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಮತ್ತೊಮ್ಮೆ ಪ್ರತಿಭಟನೆ ಕೂಗು ಮರುಕಳಿಸಿದೆ. ಬಾನುವಾರ ವಿವಿಯಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದಾರೆ.
Recommended Video
ಜೆಎನ್ ಯು ಉತ್ತರ ಭಾಗದ ಗೇಟ್ ಬಳಿ ನೆರೆದ ವಿದ್ಯಾರ್ಥಿಗಳು ಪೊಲೀಸರ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಮಾಸ್ಕ್ ತೊಟ್ಟು ಬಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.
ಜೆಎನ್ ಯುನಲ್ಲಿ ಮಾಸ್ಕ್ ತೊಟ್ಟವರ ದುಷ್ಕೃತ್ಯಕ್ಕೆ ವಿದ್ಯಾರ್ಥಿಗಳು ಕೆಂಡಾಮಂಡಲ
ಕಳೆದ ನಾಲ್ಕೈದು ದಿನಗಳ ಹಿಂದೆಯೇ ಜೆಎನ್ ಯುನಲ್ಲಿ ಹಿಂಸಾಚಾರ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ವಿದ್ಯಾರ್ಥಿ ಸಂಘಟನೆ ಮುಖ್ಯಸ್ಥೆ ಐಶಿ ಘೋಷ್ ಆರೋಪಿಸಿದ್ದಾರೆ. ಆರ್ ಎಸ್ಎಸ್ ಹಿನ್ನಲೆಯುಳ್ಳ ಪ್ರಾಧ್ಯಾಪಕರು ಹಾಗೂ ಎಬಿವಿಪಿ ಸಂಘಟನೆಗಳೇ ಹಿಂಸಾಚಾರಕ್ಕೆ ನೇರಕಾರಣ ಎಂದು ದೂರಿದ್ದಾರೆ.
"ಬಿಜೆಪಿ ಸಂಘಟಿತ ದಾಳಿಯಿಂದ ಇಷ್ಟೆಲ್ಲಾ ಅವಾಂತರ"
ಜೆಎನ್ ಯುನಲ್ಲಿ ನಡೆದ ಎಲ್ಲ ಹಿಂಸಾಚಾರಕ್ಕೂ ಬಿಜೆಪಿಯೇ ನೇರಹೊಣೆ ಎಂದು ವಿದ್ಯಾರ್ಥಿ ಸಂಘದ ಮುಖ್ಯಸ್ಥೆ ಐಶಿ ಘೋಷ್ ಆರೋಪಿಸಿದ್ದಾರೆ. ಆರ್ಎಸ್ಎಸ್ ಗೂಂಡಾಗಳೇ ನಮ್ಮ ಮೇಲೆ ಹಲ್ಲೆ ನಡೆಸಿದ್ದು, ನನ್ನ ತಲೆಗೆ 15 ಹೊಲಿಗೆಗಳು ಬಿದ್ದಿವೆ. ಜೆಎನ್ ಯುನಲ್ಲಿ ನಡೆದಿದ್ದು ಬಿಜೆಪಿಯ ಸಂಘಟಿತ ಹಿಂಸಾಚಾರ ಎಂದು ಅವರು ಆರೋಪಿಸಿದ್ದಾರೆ.
ಮಹಿಳಾ ಆಯೋಗದಿಂದ ದೆಹಲಿ ಪೊಲೀಸರಿಗೆ ಸಮನ್ಸ್
ಜೆಎನ್ ಯುನಲ್ಲಿ ವಿದ್ಯಾರ್ಥಿನಿಯರ ಮೇಲೆ ಪೊಲೀಸರು ನಡೆಸಿದ ಹಲ್ಲೆಗೆ ರಾಷ್ಟ್ರೀಯ ಮಹಿಳಾ ಆಯೋಗ ಕೆಂಡಾಮಂಡಲವಾಗಿದೆ. ಈ ಸಂಬಂಧ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಳ್, ದೆಹಲಿ ಪೊಲೀಸರಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ. ಬಾನುವಾರ ನಡೆದ ಹಿಂಸಾಚಾರದಲ್ಲಿ ವಿದ್ಯಾರ್ಥಿನಿಯರು ಎಂಬುದನ್ನೂ ನೋಡದೇ ಲಾಠಿಚಾರ್ಜ್ ನಡೆಸಲಾಗಿದ್ದು, ಗಾಯಾಳುಗಳನ್ನು ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಾರ್ಡನ್ ವೃತ್ತಿಗೆ ರಾಜೀನಾಮೆ ಸಲ್ಲಿಸಿದ ಆರ್.ಮೀನಾ
ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಘಟನೆಗಳು ವಿದ್ಯಾರ್ಥಿಗಳಲ್ಲ, ಶಿಕ್ಷಕ ವರ್ಗವನ್ನೇ ಆತಂಕಕ್ಕೆ ದೂಡಿದೆ. ಯಾವಾಗ ಏನಾಗುತ್ತೋ ಎಂಬ ಭಯದಲ್ಲೇ ಕಾಲ ಕಳೆಯುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜೆಎನ್ ಯು ಸಬರ್ ಮತಿ ವಿದ್ಯಾರ್ಥಿ ನಿಲಯದ ಹಿರಿಯ ವಾರ್ಡನ್ ಆರ್.ಮೀನಾ, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೂರು ತಂಡ ರಚಿಸಿರುವ ದೆಹಲಿ ಪೊಲೀಸರು
ಇನ್ನು, ಜೆಎನ್ ಯು ಹಿಂಸಾಚಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ದೆಹಲಿ ಪೊಲೀಸರು, ಪ್ರಕರಣದ ತನಿಖೆಗೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ. ಒಂದು ತಂಡ ಘಟನೆ ನಡೆದ ದಿನದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಿದೆ. ಇನ್ನೊಂದು ತಂಡವು ಮಾಸ್ಕ್ ಧರಿಸಿ ಬಂದಿದ್ದ ದುಷ್ಕರ್ಮಿಗಳ ಗುರುತು ಪತ್ತೆ ಕುರಿತು ತನಿಖೆ ನಡೆಸಲಿದೆ. ಮೂರನೇ ತಂಡವು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿದೆ. ಜೆಎನ್ ಯು ಘಟನೆಯ ಬಗ್ಗೆ ದಾರಿ ತಪ್ಪಿಸುವ ಹಾಗೂ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ.