ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್!
ರೋಹಿತ್ ವೇಮುಲಾ ಆತ್ಮಹತ್ಯೆಗೆ ಹೈದರಾಬಾದ್ ವಿಶ್ವವಿದ್ಯಾಲಯ ಕಾರಣವಲ್ಲ. ಪ್ರಕರಣದ ತನಿಖೆ ನಡೆಸುತ್ತಿದ್ದ ತನಿಖಾ ಆಯೋಗದ ವರದಿಯಲ್ಲಿ ಹೇಳಿಕೆ.
ನವದೆಹಲಿ, ಆಗಸ್ಟ್ 16: ಕಳೆದ ವರ್ಷ ಇಡೀ ದೇಶಾದ್ಯಂತ ತಲ್ಲಣ ಸೃಷ್ಟಿಸಿದ್ದ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ರೋಹಿತ್ ವೇಮುಲಾ ದಲಿತ ಅಲ್ಲ: ಆಂಧ್ರಪ್ರದೇಶ ಸರ್ಕಾರ ಘೋಷಣೆ
ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಏಕ ವ್ಯಕ್ತಿ ತನಿಖಾ ಆಯೋಗವು, ತನ್ನ ತನಿಖಾ ವರದಿಯನ್ನು ಆಗಸ್ಟ್ 15ರಂದು ಕೇಂದ್ರ ಸರ್ಕಾರಕ್ಕೆ ಒಪ್ಪಿಸಿದೆ.
ತನಿಖಾ ವರದಿಯಲ್ಲಿ, ಆಯೋಗವು, ರೋಹಿತ್ ಆತ್ಮಹತ್ಯೆಗೆ ಹೈದರಾಬಾದ್ ವಿಶ್ವವಿದ್ಯಾಲಯವು ಅವರನ್ನು ಹಾಸ್ಟೆಲ್ ನಿಂದ ಬಹಿಷ್ಕಾರ ಹಾಕಿದ್ದು ಕಾರಣವಲ್ಲ ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ಹಾಸ್ಟೆಲ್ ನಿಂದ ಹೊರಹಾಕಲ್ಪಟ್ಟ ಆದೇಶ ಅವರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಅವರ ಆತ್ಮಹತ್ಯಾ ಪತ್ರದಿಂದ ವ್ಯಕ್ತವಾಗಿದೆ. ಪತ್ರದಲ್ಲಿ ಅವರು ಚಿಕ್ಕಂದಿನಿಂದಲೂ ಒಂಟಿಯಾಗಿ ಬೆಳೆದಿದ್ದು ಹಾಗೂ ಪ್ರಾಪಂಚಿಕ ವ್ಯವಹಾರಗಳಲ್ಲಿ ಅವರು ಯಾವುದೇ ಸಂತೋಷ ಕಾಣದೇ ಇದ್ದಿದ್ದಾಗಿ ತಿಳಿಸಿದ್ದಾರೆ. ಹಾಗಾಗಿ, ಕೇವಲ ಅವರಿಗೆ ಮಾತ್ರ ಗೊತ್ತಿರುವ ಕೆಲವಾರು ವಿಚಾರಗಳಲ್ಲಿ ಅವರು ನೊಂದಿದ್ದರಿಂದಾಗಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಆಯೋಗ ತಿಳಿಸಿದೆ.
ತಾಯಿ ಮಗನನ್ನು ಕಳೆದುಕೊಂಡಿದ್ದಾಳೆ: ನರೇಂದ್ರ ಮೋದಿ
ವಿದ್ಯಾರ್ಥಿ ಸಂಘಟನೆಯ ಮುಖ್ಯಸ್ಥನಾಗಿದ್ದ ರೋಹಿತ್ ವೇಮುಲಾ, ಸರ್ಕಾರದ ನೀತಿಗಳ ವಿರುದ್ಧ ಆಗಾಗಾ ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಹೈದರಾಬಾದ್ ವಿವಿ ಕ್ಯಾಂಪಸ್ಸಿನಲ್ಲಿರುವ ಹಾಸ್ಟೆಲ್ ನಿಂದ ಅವರನ್ನು ಹೊರಹಾಕಲಾಗಿತ್ತು.
ಅದರ ಬೆನ್ನಲ್ಲೇ ವೇಮುಲಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಕೆರಳಿದ್ದ ವಿದ್ಯಾರ್ಥಿ ಸಮೂಹವು, ವೇಮುಲಾ ಸಾವಿಗೆ ವಿಶ್ವವಿದ್ಯಾಲಯವು ಅವರನ್ನು ಹಾಸ್ಟೆಲ್ ನಿಂದ ಹೊರಹಾಕಿ ಅಪಮಾನಿಸಿದ್ದೇ ಕಾರಣವೆಂದು ದೂರಿ ವಾರಗಟ್ಟಲೆ ಪ್ರತಿಭಟನೆ ನಡೆಸಿದ್ದವು.
ಹಾಗಾಗಿ, ಈ ಪ್ರಕರಣದ ತನಿಖೆಗಾಗಿ ಸ್ವತಂತ್ರ್ಯ ತನಿಖಾ ಆಯೋಗ ರಚಿಸಿದ್ದ ಕೇಂದ್ರ ಸರ್ಕಾರ, ಸೂಕ್ತ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅಲಹಾಬಾದ್ ಹೈಕೋರ್ಟ ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ರೂಪನ್ವಾಲ್ ಅವರು ಈಗ ತನಿಖಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದ್ದಾರೆ.