ಕರಾಳ ಇತಿಹಾಸ: ದೆಹಲಿ ಕೋರ್ಟ್ ಆವರಣದಲ್ಲಿ ಗುಂಡಿನ ದಾಳಿ ಮೊದಲಲ್ಲ!
ನವದೆಹಲಿ, ಸೆಪ್ಟೆಂಬರ್ 24: ರೋಹಣಿ ನ್ಯಾಯಾಲಯದ ಆವರಣದಲ್ಲೇ ಗ್ಯಾಂಗ್ ಸ್ಟರ್ ಜಿತೇಂದರ್ ಗೋಗಿ ಮೇಲೆ ಗುಂಡಿನ ದಾಳಿ ನಡೆಸಿ ಕೊಂದಿರುವ ಘಟನೆ ನಡೆದಿದೆ. ಜಿತೇಂದರ್ ಮೇಲೆ ದಾಳಿ ನಡೆಸಿದವರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದು ಆಗಿದೆ. ಶುಕ್ರವಾರ ನಡೆದ ಒಂದೇ ಒಂದು ಘಟನೆಯಲ್ಲಿ ನಾಲ್ವರು ಮೃತಪಟ್ಟಿರುವುದು ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಿದೆ.
"ಮೊದಲು ವಕೀಲರ ಸಮವಸ್ತ್ರದಲ್ಲಿ ಆಗಮಿಸಿದ್ದ ಇಬ್ಬರು ದಾಳಿಕೋರರು ನ್ಯಾಯಾಲಯದಲ್ಲಿ ಗೋಗಿ ಮೇಲೆ ಗುಂಡಿನ ದಾಳಿ ನಡೆಸಿದರು. ನಂತರ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ದಾಳಿಕೋರರನ್ನು ಹೊಡೆದು ಉರುಳಿಸಲಾಗಿದೆ" ಎಂದು ರೋಹಿಣಿ ಡಿಸಿಪಿ ಪ್ರಣವ್ ತಾಯಲ್ ಹೇಳಿದ್ದಾರೆ. ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ಅವರು 'ಟಿಲ್ಲು' ಗ್ಯಾಂಗ್ಗೆ ಸೇರಿದ ಕೊಲೆಗಾರರನ್ನು ಅಧಿಕಾರಿಗಳು "ಕೊಂದಿದ್ದಾರೆ" ಎಂದು ಹೇಳಿದರು. ಇದು "ಗ್ಯಾಂಗ್ ವಾರ್ ಅಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
Breaking News: ದೆಹಲಿ ಕೋರ್ಟ್ ಆವರಣದಲ್ಲೇ ದರೋಡೆಕೋರನ ಶೂಟೌಟ್!
ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ನ್ಯಾಯಾಧೀಶರ ಎದುರಿನಲ್ಲೇ ಸುಮಾರು 25-30 ಸುತ್ತು ಗುಂಡು ಹಾರಿಸಲಾಯಿತು ಎಂದು ಪ್ರತ್ಯಕ್ಷದರ್ಶಿ ಸತ್ಯನಾರಾಯಣ ಶರ್ಮಾ ಹೇಳಿದ್ದಾರೆ. ಕಳೆದ ಮಾರ್ಚ್ 2018ರಲ್ಲಿ 'ಟಿಲ್ಲು' ಗ್ಯಾಂಗ್ ಸದಸ್ಯನನ್ನು ರೋಹಿಣಿ ಕೋರ್ಟ್ ಸುತ್ತಮುತ್ತಲಿನ ಪ್ರದೇಶದಲ್ಲೇ ಗೋಗಿ ಗ್ಯಾಂಗ್ ಹೊಡೆದುರುಳಿಸಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಇಂಥ ಘಟನೆಗಳು ಇದೇ ಮೊದಲೇನೂ ಅಲ್ಲ. ಈ ಹಿಂದೆ ಕೂಡ ಕೋರ್ಟ್ ಆವರಣದಲ್ಲೇ ಸಾಕಷ್ಟು ಬಾರಿ ಈ ರೀತಿ ದಾಳಿಗಳನ್ನು ನಡೆಸಲಾಗಿದೆ. ಪದೇಪದೆ ಅಂಥ ಘಟನೆಗಳು ಮರುಕಳಿಸುತ್ತಿರುವುದು ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಿದೆ. ನ್ಯಾಯಾಲಯದ ಆವರಣದಲ್ಲಿ ನಡೆದ ದಾಳಿಗೆ ಸಂಬಂಧಿಸಿದ ಘಟನೆಗಳ ಕುರಿತು ಒಂದು ವರದಿ ಇಲ್ಲಿದೆ ಓದಿ.
ದ್ವಾರಕಾ ಕೋರ್ಟ್ ಶೂಟೌಟ್ ಪ್ರಕರಣ
2021ರ ಜುಲೈ ತಿಂಗಳಲ್ಲಿ ದ್ವಾರಕಾ ನ್ಯಾಯಾಲಯ ಸಂಕೀರ್ಣದಲ್ಲಿರುವ ವಕೀಲರ ಕೊಠಡಿಯ ಹೊರಗೆ 45 ವರ್ಷದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಕೊಲೆಗೆ ಬಳಸಿ ಪಿಸ್ತೂಲ್ ಅನ್ನು ನ್ಯಾಯಾಲಯದ ನಾಲ್ಕನೇ ಮಹಡಿಯಲ್ಲಿರುವ ವಕೀಲರ ಕೊಠಡಿಯಲ್ಲೇ ಪೊಲೀಸರು ವಶಪಡಿಸಿಕೊಂಡರು. ನಂತರ ವಕೀಲರು ಸೇರಿ ನಾಲ್ವರನ್ನು ಕೊಲೆ ಯತ್ನ ಮತ್ತು ಸಾಕ್ಷ್ಯ ನಾಶದ ಆರೋಪದ ಮೇಲೆ ಪೊಲೀಸರು ಬಂಧಿಸಿದರು. ವಕೀಲರ ಕೊಠಡಿ ಹೊರಗೆ ಪಾರ್ಟಿ ಮಾಡುತ್ತಿದ್ದ ಸಹವರ್ತಿ ಪ್ರದೀಪ್ ಈ ಗುಂಡು ಹಾರಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದ ಸಹವರ್ತಿ ವಕೀಲರು ಆಸ್ಪತ್ರೆ ವೈದ್ಯರ ದಾರಿ ತಪ್ಪಿಸುವ ಕೆಲಸ ಮಾಡಿದರು. ಕೋರ್ಟ್ ಕಾಂಪೌಂಡ್ ಹೊರಗಿನ ಪಾರ್ಕಿನಲ್ಲಿ ಯಾರೋ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದರು.
ಸಾಕೇತ್ ಜಿಲ್ಲಾ ನ್ಯಾಯಾಲಯ
2019ರ ಮೇ ತಿಂಗಳು ಕೊಲೆ ಯತ್ನ ಪ್ರಕರಣದಲ್ಲಿ ತನ್ನ ವಿಚಾರಣೆಗಾಗಿ ಸಾಕೇತ್ ಜಿಲ್ಲಾ ನ್ಯಾಯಾಲಯಕ್ಕೆ ತೆರಳಿದ್ದ 27 ವರ್ಷದ ವ್ಯಕ್ತಿಯನ್ನು ಸೆಲೆಕ್ಟ್ ಸಿಟಿ ವಾಕ್ ಶಾಪಿಂಗ್ ಮಾಲ್ನ ಹಿಂದಿರುವ ಪುಷ್ಪ್ ವಿಹಾರ್ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅಂದು ಪ್ರಿನ್ಸ್ ಬಿಹಾರಿಯ ಹೊಟ್ಟೆ ಮತ್ತು ಕುತ್ತಿಗೆಗೆ ಗುಂಡು ತಗುಲಿ ಸಾವನ್ನಪ್ಪಿದ್ದನು. ಶಾಪಿಂಗ್ ಮಾಲ್ಗೆ ಹೋಗುತ್ತಿದ್ದ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಕೊಲೆ ಯತ್ನ ಪ್ರಕರಣದ ಸಹ ಆರೋಪಿ, ನ್ಯಾಯಾಲಯದಿಂದ ನಿರ್ಗಮಿಸಿದ ನಂತರ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಆತನ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ದೆಹಲಿಯ ಇನ್ನೊಂದು ಕ್ರಿಮಿನಲ್ ಗ್ಯಾಂಗ್ ನೊಂದಿಗೆ ವ್ಯಕ್ತಿಯ ಪೈಪೋಟಿಯಿಂದ ಈ ಕೊಲೆ ನಡೆದಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.
2017ರಲ್ಲಿ ರೋಹಿಣಿ ಕೋರ್ಟ್ ಘಟನೆ
ಕಳೆದ 2017ರಲ್ಲಿ ದೆಹಲಿಯ ರೋಹಿಣಿ ಕೋರ್ಟ್ ಕಾಂಪ್ಲೆಕ್ಸ್ನಲ್ಲಿ ಗುಂಡು ಹಾರಿಸಿ ವಿಚಾರಣಾಧೀನ ಕೈದಿಯನ್ನು ಕೊಲ್ಲಲಾಯಿತು. ವಿನೋದ್ ಎಂಬಾತನನ್ನು ನ್ಯಾಯಾಲಯದಿಂದ ವಾಪಸ್ ಕರೆದುಕೊಂಡು ಹೋಗುತ್ತಿದ್ದಾಗ ಕ್ಯಾಂಟೀನ್ ಪ್ರದೇಶದ ಬಳಿಯ ಕಾರಿಡಾರ್ ನಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವ್ಯಾಜ್ಯಗಾರನಂತೆ ನಟಿಸುತ್ತಿದ್ದ ಆರೋಪಿಯನ್ನು ತಕ್ಷಣವೇ ಪೊಲೀಸರು ಬಂಧಿಸಿದರು ಮತ್ತು ಆತನ ಪಿಸ್ತೂಲನ್ನು ವಶಪಡಿಸಿಕೊಂಡರು. ಆರಂಭಿಕ ವರದಿಗಳ ಪ್ರಕಾರ, ಗುಂಡಿನ ದಾಳಿಯು ಎರಡು ಗ್ಯಾಂಗ್ಗಳ ನಡುವಿನ ಪೈಪೋಟಿಯ ಪರಿಣಾಮವಾಗಿತ್ತು. ಏಕೆಂದರೆ ಅದೇ ವರ್ಷದ ಏಪ್ರಿಲ್ನಲ್ಲಿ 38 ವರ್ಷದ ವಿಚಾರಣಾಧೀನ ಕೈದಿಯನ್ನು ನ್ಯಾಯಾಲಯ ಸಂಕೀರ್ಣದಲ್ಲೇ ಗುಂಡಿಕ್ಕಿ ಕೊಲ್ಲಲಾಗಿತ್ತು.
ಕಾರ್ಕಡೂಮ್ ಕೋರ್ಟ್ ಘಟನೆ
2015ರಲ್ಲಿ ಪೂರ್ವ ದೆಹಲಿಯ ಕಾರ್ಕಡೂಮಾ ಕೋರ್ಟ್ ಕಾಂಪ್ಲೆಕ್ಸ್ನಲ್ಲಿ ನ್ಯಾಯಾಲಯದೊಳಗೆ ನಾಲ್ವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡು ಹಾರಿಸಿದಾಗ ದೆಹಲಿ ಪೋಲೀಸ್ನ ಒಬ್ಬ ಹೆಡ್ ಕಾನ್ಸ್ಟೇಬಲ್ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದರು. ರೋಹಿಣಿ ನ್ಯಾಯಾಲಯದ ಗುಂಡಿನ ದಾಳಿಯಂತೆ, ಈ ಘಟನೆಯು ಬೆಳಿಗ್ಗೆ ಅಪರಾಧಿಗಳನ್ನು ನ್ಯಾಯಾಲಯದ ಕೋಣೆಯಲ್ಲಿ ಹಾಜರುಪಡಿಸಿದಾಗ ನಡೆದಿತ್ತು. ಪೊಲೀಸರ ಪ್ರಕಾರ, ವಿಚಾರಣೆ ನಡೆಯುತ್ತಿರುವಾಗ ನ್ಯಾಯಾಲಯದ ಒಳಗೆ ಏಳು ಸುತ್ತು ಗುಂಡು ಹಾರಿಸಲಾಯಿತು. ಐದು ಗುಂಡು ತಗುಲಿದ ಹೆಡ್ ಕಾನ್ಸ್ಟೇಬಲ್ ರಾಮಕುಮಾರ್ ಮೃತಪಟ್ಟರು. ಗುಂಡಿನ ದಾಳಿಯಲ್ಲಿ ಇನ್ನೊಬ್ಬ ಪೋಲೀಸ್ ಕೂಡ ಗಾಯಗೊಂಡಿದ್ದು, ಅವರನ್ನು ನ್ಯಾಯಾಲಯದ ನಾಯಬ್ ಎಂದು ಗುರುತಿಸಲಾಯಿತು. ಮನಸೋಇಚ್ಛೆ ನಡೆಸಿದ ಗುಂಡಿನ ದಾಳಿಯಿಂದ ನ್ಯಾಯಾಲಯದ ಒಳಗಿದ್ದ ಜನರಲ್ಲಿ ಭಯ ಹೆಚ್ಚಾಗಿ ರಕ್ಷಣೆಗಾಗಿ ಅವರು ಓಡಿದರು. ದಾಳಿಕೋರರನ್ನು ನಾಸಿರ್ ಗ್ಯಾಂಗ್ ನೇಮಿಸಿಕೊಂಡ ಗುತ್ತಿಗೆ ಕೊಲೆಗಾರರು ಎಂದು ಶಂಕಿಸಲಾಗಿದೆ.
ಪಟಿಯಾಲ ಹೌಸ್ ಕೋರ್ಟ್
2003ರಲ್ಲಿ ಪಟಿಯಾಲ ಹೌಸ್ ಕೋರ್ಟ್ ಕಾಂಪ್ಲೆಕ್ಸ್ನಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಕೊಲ್ಲುವುದಕ್ಕೆ ಪ್ರಯತ್ನಿಸಿದನು. ವರದಿಗಳ ಪ್ರಕಾರ, ಮಧ್ಯಾಹ್ನ 2 ಗಂಟೆ ಸುಮಾರಿಗೆ ಗೇಟ್ ನಂಬರ್ 3ರ ಬಳಿ ಈ ಘಟನೆ ನಡೆದಿತ್ತು. ಆರೋಪಿಯು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರೂ, ಆತನ ಸಹಚರನೊಬ್ಬನನ್ನು ಪೊಲೀಸರು ವಶಪಡಿಸಿಕೊಂಡರು ಮತ್ತು ಆತನಿಂದ ದೇಶೀ ನಿರ್ಮಿತ ಶಸ್ತ್ರವನ್ನು ವಶಪಡಿಸಿಕೊಳ್ಳಲಾಗಿತ್ತು.